ಮೈಸೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಾದಯಾತ್ರೆಯನ್ನು ಆ.26ರಂದು ಮಡಿಕೇರಿಗೆ ಹಮ್ಮಿಕೊಂಡಿದ್ದು, ಅದಕ್ಕೆ ನಾವು ಉತ್ತರ ಕೊಡಲ್ಲ. ಕೊಡಗಿನ ಮಕ್ಕಳೇ ನಿಮಗೆ ತಕ್ಕ ಉತ್ತರ ಕೊಡ್ತಾರೆ. ಅಲ್ಲದೇ ಈಗ ಸಿದ್ದರಾಮಯ್ಯ ಯಾವ ಕಾರಣಕ್ಕೆ ಕೊಡಗಿನ ಮಕ್ಕಳ ಮೇಲೆ ದಂಡೆತ್ತಿ ಬರುತ್ತಿದ್ದಾರೆ ಎಂದು ಸಂಸದ ಪ್ರತಾಪಸಿಂಹ ಪ್ರಶ್ನಿಸಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗಿಗೆ ಕಾಂಗ್ರೆಸ್ ಪಾದಯಾತ್ರೆಗೆ ಅನುಮತಿ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಗುಪ್ತಚರ ವರದಿ ಆಧರಿಸಿ ತೀರ್ಮಾನ ಮಾಡುತ್ತಾರೆಂದು ತಿಳಿಸಿದರು. ಟಿಪ್ಪು ಸುಲ್ತಾನ್ ಕೊಡಗಿಗೆ ಬಂದಾಗಲೇ ಹೆದರಲಿಲ್ಲ. ಸಿದ್ದರಾಮಯ್ಯ ಬಂದರೇ ಹೆದರುತ್ತೇವೆಯೇ? ಸಿದ್ದರಾಮಯ್ಯ ಅವರು ಮೈಸೂರು, ಮಂಡ್ಯ, ಹಾಸನ ಮಾತ್ರವಲ್ಲ ಪಕ್ಕದ ಕೇರಳದಿಂದಲೂ ಜನರನ್ನು ಕರೆದುಕೊಂಡು ಬಂದರೂ ಹೆದರುವುದಿಲ್ಲ ಎಂದು ನುಡಿದರು.
ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆ ಮಾಡುವಾಗ ಕಾಂಗ್ರೆಸ್ಸಿನ ಅನೇಕ ಹಿರಿಯ ನಾಯಕರು ಜೊತೆಯಲ್ಲಿದ್ದರು. ಗಣಿ ವಿಚಾರದ ಬಗ್ಗೆ ರಾಜ್ಯದ ಜನರಲ್ಲೂ ಆಕ್ರೋಶವಿತ್ತು. ಆ ಪಾದಯಾತ್ರೆ ಮಾಡಿದ್ದಕ್ಕೆ ಅರ್ಥವಿತ್ತು. ನಂತರ ನಡೆದ ಚುನಾವಣೆಯಲ್ಲಿ ಕೆಜೆಪಿ, ಬಿಎಸ್ಆರ್ ಕಾಂಗ್ರೆಸ್ ಭಾಗವಾಗಿ ಬಿಜೆಪಿ ಛಿದ್ರವಾಗಿತ್ತು. ಅದರ ಫಲವಾಗಿ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 119 ಸ್ಥಾನ ಗೆಕೆ ಸಾಧ್ಯವಾಯಿತು ಎಂದರು.
ಮಾಂಸ ತಿಂದು ದೇವಸ್ಥಾನಕ್ಕೆ ಬರಬೇಡಿ ಅಂತಾ ದೇವರು ಹೇಳಿದ್ದಾರಾ? ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಂಸದ ಪ್ರತಾಪಸಿಂಹ, ಸಿದ್ದರಾಮಯ್ಯ ಅವರ ಪತ್ನಿ ಚಾಮುಂಡೇಶ್ವರಿ ಭಕ್ತೆ. ಅವರು ಸಹಾ ಮಾಂಸ ತಿಂದು ದೇವಸ್ಥಾನಕ್ಕೆ ಬರುತ್ತಾರಾ ಕೇಳಿ. ಮೊನ್ನೆ ಸಿದ್ದರಾಮೇಶ್ವರ ಜಾತ್ರೆಗೆ ಏಕೆ ಸಿಹಿ ಊಟ ಹಾಕಿಸಿದಿರಿ? 2017ರಲ್ಲಿ ನಾಟಿಕೋಳಿ ತಿಂದು ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟಿಸಿದ್ದರು. ಇದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ. ಅದೇ ಕಾರಣಕ್ಕೆ ಮುಂದೆ ತಾಯಿ ಚಾಮುಂಡೇಶ್ವರಿ ಅವರಿಗೆ ಆ ಅವಕಾಶ ಕೊಡಲಿಲ್ಲ ಎಂದು ಹೇಳಿದರು.