ಮೈಸೂರು: ರಾಜಕಾರಣಿಗಳ ನಿದ್ದೆಗೆಡಿಸಿದ ಮತ್ತು ಸಾವಿರಾರು ಹೆಣ್ಣು ಮಕ್ಕಳ ಬಾಳು ಹಾಳು ಮಾಡಿದ ಸ್ಯಾಂಟ್ರೋ ರವಿಯ ಪಾಪದ ಕೊಡ ತುಂಬಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಪ್ರತಿ ದಿನವೂ ಆತನ ಕರ್ಮಕಾಂಡಗಳನ್ನು ಮಾಧ್ಯಮಗಳು ಬಿಚ್ಚಿಡುತ್ತಿದ್ದು, ಜನರೇ ಆತನ ವಿರುದ್ಧ ರೊಚ್ಚಿಗೇಳುವಂತೆ ಮಾಡುತ್ತಿದೆ.
ಚುನಾವಣೆ ಸಂದರ್ಭದಲ್ಲಿಯೇ ಆತನ ಕರ್ಮಕಾಂಡ ಬಯಲಾಗಿದ್ದು, ರಾಜಕಾರಣಿಗಳೊಂದಿಗಿನ ಈತನ ಸಖ್ಯ ಜಗಜ್ಜಾಹೀರಾಗುತ್ತಿದೆ. ರಾಜಕಾರಣಿಗಳು ಸೇರಿದಂತೆ ಗಣ್ಯರಿಗೆ ಈತ ಹೆಣ್ಣುಮಕ್ಕಳನ್ನು ಸಾಗಾಟ ಮಾಡುತ್ತಿರುವ ವಿಚಾರ ಹಿಂದೆಯೇ ಬಯಲಾಗಿತ್ತು. ಆದರೆ ರಾಜಕಾರಣಿಗಳೊಂದಿಗೆ ಸಖ್ಯ ಹೊಂದಿರುವ ಕುರಿತಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಯಲಿಗೆಳೆದ ನಂತರ ಇದೀಗ ಸ್ಯಾಂಟ್ರೋ ರವಿಯ ಕರ್ಮಕಾಂಡ ಬಿಚ್ಚಿಕೊಳ್ಳುತ್ತಾ ಹೋಗುತ್ತಿದೆ.
ಸುಂದರ ಹೆಣ್ಣುಮಕ್ಕಳನ್ನು ಮರಳು ಮಾಡಿ ಮದುವೆಯಾಗುವುದಾಗಿ ನಂಬಿಸಿ ಅವರ ಬದುಕನ್ನೇ ಹಾಳುಮಾಡುತ್ತಿದ್ದ ಬಗ್ಗೆ ಅಲ್ಲದೆ ಗಣ್ಯರೊಂದಿಗೆ ಹಾಸಿಗೆ ಹಂಚಿಕೊಳ್ಳಲು ಒತ್ತಾಯ ಮಾಡುತ್ತಿದ್ದ ಒಪ್ಪದಿದ್ದರೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದ ವಿಚಾರವನ್ನು ಇದೀಗ ನಾಲ್ಕನೇ ಹೆಂಡತಿ ಎಡಿಜಿಪಿ ಅಲೋಕ್ ಕುಮಾರ್ ಎದುರು ಮೈಸೂರಿನಲ್ಲಿ ಬಿಚ್ಚಿಟ್ಟಿದ್ದಾಳೆ. ಅಲ್ಲದೆ ಹಲವು ರಹಸ್ಯಗಳನ್ನು ತಿಳಿಸಿದ್ದಾಳೆ.
ಇನ್ನೊಂದೆಡೆ ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರುಶು ಕೂಡ ಹಾಜರಾಗಿ ಸ್ಯಾಂಟ್ರೊ ರವಿಯ ಬಗ್ಗೆ ಫೋಟೋ, ವಿಡಿಯೋ ಸೇರಿದಂತೆ ದಾಖಲಾತಿಯ ಸಾಕ್ಷ್ಯ ನೀಡಿದ್ದಾರೆ. ಈ ಸಂಬಂಧ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅಲೋಕ್ ಕುಮಾರ್ ಅವರು ಬಂಧನಕ್ಕೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್ ಅವರು ಇಂಟರ್ ನ್ಯಾಷನಲ್ ಇಮಿಗ್ರೇಷನ್ ಚೆಕ್ ಪೋಸ್ಟ್ ನಲ್ಲಿ ಸ್ಯಾಂಟ್ರೊ ರವಿ ಬಗ್ಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಆತನ ಪತ್ನಿ ವನಜಾಕ್ಷಿಯನ್ನು ತನಿಖೆಗೆ ಒಳಪಡಿಸಿದ್ದೇವೆ. ಸ್ಯಾಂಟ್ರೊ ರವಿಯ ಹಣಕಾಸು ವ್ಯವಹಾರ, ಬ್ಯಾಂಕ್ ಖಾತೆ ಬಗ್ಗೆ ಕೂಡ ಮಾಹಿತಿ ಕಲೆ ಹಾಕಿದ್ದೇವೆ. ಸ್ಯಾಂಟ್ರೊ ರವಿ ಮೊಬೈಲ್ ಬಳಸುತ್ತಿಲ್ಲ. ಆದ ಕಾರಣ ಸಿಕ್ಕಿ ಬೀಳುತ್ತಿಲ್ಲ. ಆದರೂ ಶೀಘ್ರದಲ್ಲೇ ಬಂಧಿಸುವ ಭರವಸೆ ನೀಡಿದ್ದಾರೆ.