ಮೈಸೂರು: ಒಂಟಿಕೊಪ್ಪಲಿನ ಆದಿಪಂಪ ರಸ್ತೆಯಲ್ಲಿರುವ ಶಾರದ ನ್ಯಾಯ ಬೆಲೆ ಅಂಗಡಿಯಲ್ಲಿ ತಾರತಮ್ಯ ನಡೆಸಲಾಗುತ್ತಿದೆಯಲ್ಲದೆ, ಸಿಬ್ಬಂದಿಯ ಅವೈಜ್ಞಾನಿಕ ಸಮಯ ಪರಿಪಾಲನೆ ಮಾಡುತ್ತಿದ್ದಾರೆ ಎಂದು ಪಡಿತರದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂಟಿಕೊಪ್ಪಲು ಪಡುವಾರಹಳ್ಳಿ ವ್ಯಾಪ್ತಿಯ ಬಡವರ್ಗದ ಜನರು ಇಲ್ಲಿಂದಲೇ ಸರ್ಕಾರ ನೀಡುವ ದಿನಸಿ ಆಹಾರ ಪದಾರ್ಥಗಳನ್ನು ಪಡೆಯಬೇಕಾಗಿದೆ. ಆದರೆ ನ್ಯಾಯಬೆಲೆ ಅಂಗಡಿಯರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿರುವ ಪಡಿತರದಾರರು ಕೂಡಲೇ ಸಂಬಂಧಿಸಿದವರು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನ್ಯಾಯಬೆಲೆ ಅಂಗಡಿಯ ಕಾರ್ಯವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಒಂಟಿಕೊಪ್ಪಲಿನ ವರಲಕ್ಷ್ಮಿ ಅಜಯ್ ಅವರು, ಪ್ರತಿತಿಂಗಳು 20ನೇ ತಾರೀಖು ಬಂದರೆ ಆಹಾರಪದಾರ್ಥಗಳು ನೀಡಲು ಹಿರಿಯನಾಗರೀಕರು, ಮಹಿಳೆಯರನ್ನ ಮೂರು ಬಾರಿ ಅಲೆಸುತ್ತಾರೆ. ಇದು ಸರಿಯಲ್ಲ, ಸರ್ಕಾರದ ಸವಲತ್ತು ಬಡವರ್ಗದ ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ತಲುಪಲಿ ಎಂದು ನ್ಯಾಯಬೆಲೆ ಅಂಗಡಿಯನ್ನ ಬಡಾವಣೆಗಳ ವ್ಯಾಪ್ತಿಗೆ ಅನುಸಾರವಾಗಿ ಸರ್ಕಾರದ ನೀತಿ ನಿಯಾಮಾನುಸಾರ ತೆರೆಯಲಾಗಿರುತ್ತದೆ, ಆದರೆ ಆಹಾರ ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಸರಿಯಾದ ಸಮಯದಲ್ಲಿ ಆಹಾರ ಪದಾರ್ಥಗಳು ಸಿಗುತ್ತಿಲ್ಲ ಎಂದು ದೂರಿದ್ದಾರೆ.
ನ್ಯಾಯಬೆಲೆ ಅಂಗಡಿಯ ಸಿಬ್ಬಂದಿಗಳ ಧೋರಣೆಯಿಂದ ಬಡವರ್ಗದ ಜನರಿಗೆ ಸಮಸ್ಯೆಗಳು ಎದುರಾಗುತ್ತಿದೆ, ಮಹಿಳೆಯರು ಮನೆಕೆಲಸ ದಿನಗೂಲಿ ಕೆಲಸಕ್ಕೆ ಹೋಗಬೇಕಾಗಿರುತ್ತದೆ ಅಂಗಡಿಯವರು ಹೇಳಿರುವ ನಿಗದಿತ ದಿನಗಳಂತೆ ಬೆಳಗ್ಗೆ ಅಕ್ಕಿ, ರಾಗಿ, ಸಕ್ಕರೆ ಆಹಾರ ಪದಾರ್ಥಗಳು ಪಡೆಯಲು ಬಂದರೆ ಸಂಜೆ ಬನ್ನಿ ಎನ್ನುತ್ತಾರೆ. ಮಹಿಳೆಯರು ಹಿರಿಯ ನಾಗರೀಕರು ದಿನಸಿ ಆಹಾರ ಪದಾರ್ಥಗಳು ಪಡೆಯಲು ಸರದಿ ಸಾಲಿನಲ್ಲಿ ಪ್ರತಿದಿನ ನಿಂತಿರುತ್ತಾರೆ ಆದರೆ ಶಾರದ ನ್ಯಾಯಬೆಲೆ ಅಂಗಡಿಯವರು ಬೀಗ ಹಾಕಿರುತ್ತಾರೆ ಮತ್ತು ಸಿಬ್ಬಂದಿ ವರ್ಗದವರು ಸಂಪರ್ಕಕ್ಕೆ ಸಿಗುವುದಿಲ್ಲ, ಸಂಬಂಧ ಪಟ್ಟ ವ್ಯಕ್ತಿಯ ಹೆಸರು ಮತ್ತು ದೂರವಾಣಿ ಸಂಖ್ಯೆ ಅಂಗಡಿಯ ನಾಮಫಲಕಗಳಲ್ಲಿ ಇರುವದಿಲ್ಲ, ಮಹಿಳೆಯರು ಕಾದುಕಾದು ಬೇಸರದಿಂದ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೈಸೂರಿನ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಇಂತಹ ಪರಿಸ್ಥಿತಿಗಳಿವೆ ಈಗಲೇ ಆಹಾರ ಸರಬರಾಜು ಮತ್ತು ನಾಗರೀಕ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ನಾಗರೀಕರ ಸಮಸ್ಯೆಯನ್ನು ಬಗೆಹರಿಸಬೇಕು. ಕಡ್ಡಾಯವಾಗಿ ನಾಮ ಫಲಕಗಳಲ್ಲಿ ಸಂಬಂಧಪಟ್ಟವರ ಹೆಸರು ದೂರವಾಣಿ ಸಂಖ್ಯೆ ಪ್ರಕಟಿಸಲು ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಪ್ರತಿಭಟನೆಯ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ವೇಳೆ ಲಕ್ಷ್ಮಮ್ಮ, ಸೌಭಾಗ್ಯ, ನಳಿನಿ, ಲಲಿತಮ್ಮ, ಭಾಗ್ಯ, ಅನುಸೂಯ, ಗಿರಿಜ, ಮಹದೇವಮ್ಮ, ಪ್ರಮೀಳಾ, ರಂಜಿನಿ ಮುಂತಾದವರು ಇದ್ದರು.