ಮೈಸೂರು: ಮೈಸೂರಿನ ನಂಜನಗೂಡು ರಸ್ತೆಯಲ್ಲಿ ಗುಂಬಜ್ ಮಾದರಿಯಲ್ಲಿ ಪ್ರಯಾಣಿಕರ ನಿರ್ಮಿಸಿರುವುದಕ್ಕೆ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ ಭಾಷಣದ ತುಣುಕುಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿತ್ತು.
ಇದೀಗ ಅವರ ಭಾಷಣದ ಬೆನ್ನಲ್ಲೇ ಗುಂಬಜ್ ಮೇಲೆ ಕಳಸವಿಡುವ ಮೂಲಕ ಬದಲಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ಇಷ್ಟಕ್ಕೂ ಆಗಿದ್ದೇನು ಎಂಬುದನ್ನು ನೋಡಿದ್ದೇ ಆದರೆ ಮೈಸೂರಿನ ರಂಗಾಯಣದಲ್ಲಿ ಅಡ್ಡಂಡ ಕಾರ್ರ್ಯಪ್ಪರವರು ರಚಿಸಿದ ಟಿಪ್ಪು ನಿಜ ಕನಸುಗಳು ನಾಟಕದ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂಸದ ಪ್ರತಾಪ್ ಸಿಂಹ ಭಾಷಣ ಮಾಡುತ್ತಾ ಕೆಲವು ಪ್ರಯಾಣಿಕರ ತಂಗುದಾಣದಲ್ಲಿ ಗುಂಬಜ್ ಇರುವುದು ಗಮನಿಸಿದ್ದೇನೆ.
ಅಂತಹ ಗುಂಬಜ್ ಇರುವ ಬಸ್ ನಿಲ್ದಾಣ ತೆರವಿಗೆ ಹೇಳಿದ್ದೇನೆ. ಮಧ್ಯದಲ್ಲಿ ದೊಡ್ಡ ಗುಂಬಜ್ ಹಾಗೂ ಅಕ್ಕ ಪಕ್ಕ ಚಿಕ್ಕ ಗುಂಬಜ್ ಗಳಿದ್ರೆ ಅದು ಮಸೀದಿನೇ ಎಂದಿರುವ ಅವರು ಕೆಆರ್ ಐಡಿಎಲ್ ಇಂಜಿನಿಯರ್ ಗಳಿಗೆ 3-4 ದಿನದಲ್ಲಿ ಗುಂಬಜ್ ತೆರವುಗೊಳಿಸಲು ಸೂಚಿಸಿದ್ದೇನೆ. ಇಲ್ಲವಾದ್ರೆ ಜೆಸಿಬಿ ತಂದು ನಾನೇ ಒಡೆದು ಹಾಕುತ್ತೇನೆ ಎಂದು ಗುಡುಗಿದ್ದರು. ಇದಾದ ಬಳಿಕ ಪ್ರಯಾಣಿಕರ ತಂಗುದಾಣದ ಚಿತ್ರಣ ಬದಲಾಗಿದ್ದು, ಗುಂಬಜ್ ಮೇಲೆ ಕಳಸವನ್ನಿಡುವ ಕೆಲಸ ಮಾಡಲಾಗಿದೆ.
ಇನ್ನು ಭಾಷಣದಲ್ಲಿ ಟಿಪ್ಪುವಿನ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದು, ಮೈಸೂರಿನ ಪ್ರತಿಯೊಂದು ಸಂಕೇತವೂ ಮಹಾರಾಜರ ಕೊಡುಗೆ. ಹೀಗಾಗಿ ರೈಲ್ವೆ ಸ್ಟೇಷನ್ ಗೆ ಚಾಮರಾಜ ಒಡೆಯರ್ ಹೆಸರು ಇಡುವುದಾಗಿ ಭರವಸೆ ನೀಡಿದರು. ಅಷ್ಟೇ ಅಲ್ಲದೆ ಟಿಪ್ಪುವಿನ ಯಾವ ಗುರುತುಗಳು ಸಿಗದ ಹಾಗೇ ಮಾಡುವುದಾಗಿ ಗುಡುಗಿದ್ದಾರೆ.
ಇದೇ ಮೊದಲ ಬಾರಿಗೆ ರೈಲ್ವೆ ಇಲಾಖೆಯಲ್ಲಿ ರೈಲಿನ ಹೆಸರು ಬದಲಾಯಿಸಿದ್ದು ನಾಲ್ಕು ವರ್ಷ ಸತತ ಪ್ರಯತ್ನ ಮಾಡಿ ಹೆಸರು ಬದಲಾವಣೆ ಮಾಡಿದ್ದಾಗಿ ಹೇಳಿದರಲ್ಲದೆ, ಟಿಪ್ಪು ಹೆಸರು ರೈಲಿಗೆ ಇಟ್ಟಿರುವ ಕುರಿತು ಮಾತನಾಡಿದ ಅವರು ಎಸ್ ನಿಜಲಿಂಗಪ್ಪನವರ ಕಾರ್ ಡ್ರೈವರ್ ಆಗಿದ್ದ ಜಾಫರ್ ಶರೀಫ್, ರೈಲಿಗೆ ಟಿಪ್ಪು ಎಕ್ಸ್ಪ್ರೆಸ್ ಎಂದು ನಾಮಕರಣ ಮಾಡಿಸಿದರು ಅಷ್ಟೇ ಅಲ್ಲದೆ ಕಳ್ಳ ಕಿವಿ ಇಟ್ಟುಕೊಂಡು ಇಂದಿರಾಗಾಂಧಿ ಬಳಿ ಹೋಗಿ ಮಾಹಿತಿ ಕೊಟ್ಟು ಲೋಕಸಭಾ ಚುನಾವಣೆಗೆ ಟಿಕೆಟ್ ಪಡೆದು ಗೆಲುವು ರೈಲ್ವೆ ಸಚಿವರಾಗಿದ್ದವರು. ೧೯೮೦ ರಲ್ಲಿ ಟಿಪ್ಪು ಎಕ್ಸ್ಪ್ರೆಸ್ ಪ್ರಾರಂಭ ಮಾಡಿದ್ದಾರೆ. ಆದರೆ ಮುಂದೆ ಆತನ ಯಾವ ಗುರುತುಗಳು ಸಿಗದಂತೆ ಮಾಡುವುದಾಗಿ ಹೇಳಿದ್ದು ಇದು ಭಾರೀ ವೈರಲ್ ಆಗಿದೆ.