ಮಂಗಳೂರು: ಮೀನು ಹಿಡಿಯಲು ಬಳಸಿದ ಹಳೆಯ ಬಲೆಗಳು ಮತ್ತು ದುರಸ್ತಿಗೆ ತಂದಿರಿಸಿದ್ದ ಬಲೆಯ ರಾಶಿಗೆ ಬೆಂಕಿ ಬಿದ್ದು ಹೊತ್ತಿ ಉರಿದ ಘಟನೆ ನಗರದ ಮೀನುಗಾರಿಕೆ ದಕ್ಕೆಯಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ. ಇದರಿಂದ ಲಕ್ಷಾಂತರ ಮೊತ್ತದ ನಷ್ಟ ಸಂಭವಿಸಿದೆ.
ಬೋಟ್ ನಿರ್ಮಾಣ ಯಾರ್ಡ್ ಬಳಿ ಇರಿಸಿದ್ದ ಬಲೆಗಳಿಗೆ ರಾತ್ರಿ 11.30ರ ವೇಳೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ತಕ್ಷಣ ರಾಶಿಗೆ ಬೆಂಕಿ ಹರಡಿದೆ. ಸ್ಥಳಕ್ಕೆ ಧಾವಿಸಿದ ಪಾಂಡೇಶ್ವರ ಆಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.
ಯಾರೋ ಬೀಡಿ ಸೇದಿ ಎಸೆದಾಗ ಬೆಂಕಿ ಹೊತ್ತಿರುವ ಸಾಧ್ಯತೆ ಇದೆ. ದುರಸ್ತಿಗೆ ಬಂದ ಬಲೆಗಳಿಗೆ ₹ 60 ಸಾವಿರರಿಂದ ₹ 2 ಲಕ್ಷ ಮೌಲ್ಯದ ವರೆಗೆ ಬೆಲೆ ಇದೆ. ಹೀಗಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟ ಆಗಿರುವ ಸಾಧ್ಯತೆ ಇದೆ ಎಂದು ಮೀನುಗಾರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.