ಪಿರಿಯಾಪಟ್ಟಣ: ಅರಣ್ಯದಿಂದ ಸ್ಥಳಾಂತರಗೊಂಡು ಅರಣ್ಯದ ಹೊರಭಾಗದಲ್ಲಿ ವಾಸಿಸುತ್ತಿರುವ ಆದಿವಾಸಿ ಕುಟುಂಬಗಳಿಗೆ ಡಾ.ಮುಜಾಫರ್ ಅಸ್ಸಾದಿ ವರದಿ ಆಧಾರದಲ್ಲಿ ಶೀಘ್ರ ಪುನರ್ವಸತಿ ಕಲ್ಪಿಸುವಂತೆ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಕಾರ್ಯದರ್ಶಿ ಶೈಲೇಂದ್ರಕುಮಾರ್ ಅವರು ಪಿರಿಯಾಪಟ್ಟಣ ತಾಲೂಕಿನ ಮಾಲಂಗಿ ಚೌತಿ ಪಂಚವಳ್ಳಿ ಗ್ರಾ.ಪಂ ವ್ಯಾಪ್ತಿಗೆ ಬರುವ 452 ಕುಟುಂಬಗಳನ್ನು 1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ನಂತರ ಅರಣ್ಯ ಇಲಾಖೆಯವರು ಅರಣ್ಯದೊಳಗೆ ವಾಸಸುತ್ತಿದ್ದ ಅಷ್ಟು ಕುಟುಂಬಗಳನ್ನು ಯಾವುದೇ ಪರ್ಯಾಯ ಭೂಮಿ ಅಥವಾ ಪುನರ್ವಸತಿ ಕಲ್ಪಿಸದೆ ಏಕಾಏಕಿ ಅರಣ್ಯದಂಚಿನ ಕಂದಕದ ಬಳಿ ಉಳಿಯುವಂತೆ ಮಾಡಿರುವುದು ಖಂಡನೀಯ. ಅರಣ್ಯದೊಳಗೆ ವಾಸಿಸುವಾಗ ಸ್ಮಶಾನ, ದೇವಸ್ಥಾನ, ಉಳುಮೆ ಮಾಡುತ್ತಿದ್ದ ವ್ಯವಸಾಯದ ಭೂಮಿಯ ಬದು ಗದ್ದೆಗಳು, ನೀರು ಬಳಕೆ ಮಾಡುತ್ತಿದ್ದ ಕೆರೆ ತೋಡುಬಾವಿ ಇನ್ನಿತರ ಸಾಮುದಾಯಕ ಕುರುಹುಗಳು ಕಂಡು ಬರುತ್ತವೆ. ಅವುಗಳನ್ನು ಈಗಲೂ ಸಹ ಅವಲಂಬಿತಗೊಂಡು ಬದುಕುತ್ತಿದ್ದಾರೆ. ಶೀಘ್ರ ಅವರಿಗೆ ಡಾ.ಮುಜಾಫರ್ ಅಸ್ಸಾದಿ ವರದಿಯಂತೆ ಪುನರ್ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಕೇರಳ ಕೊರಗ ಸಮುದಾಯ ಅಭಿವೃದ್ಧಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪುತ್ರನ್ ಅವರು ಮಾತನಾಡಿ ಕಳೆದ 45 ಕ್ಕೂ ಹೆಚ್ಚು ದಿನದಿಂದ ಆದಿವಾಸಿಗಳು ತಮ್ಮ ಹಕ್ಕಿಗಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಶೀಘ್ರ ಸಮಸ್ಯೆ ಬಗೆಹರಿಸದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಒಕ್ಕೂಟದ ಶಿವಮೊಗ್ಗ ಜಿಲ್ಲಾ ಸಂಚಾಲಕ ರಾಮಣ್ಣ ಹಸಲರು ಅವರು ಮಾತನಾಡಿ ಅರಣ್ಯವಾಸಿಗಳು ತಮ್ಮ ಹಕ್ಕನ್ನು ಕೇಳುತ್ತಿದ್ದು ಅವರ ಹಕ್ಕು ಅವರಿಗೆ ನೀಡಲು ಏನು ತೊಂದರೆಯಾಗಿದೆ, ತಾಂತ್ರಿಕ ಸಮಸ್ಯೆಗಳಿದ್ದರೆ ಶೀಘ್ರ ಬಗೆಹರಿಸಬೇಕು ಇಲ್ಲವಾದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿಯೂ ಒಕ್ಕೂಟ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಹೇಳಿದರು.
ಒಕ್ಕೂಟದ ಕೊಡಗು ಪ್ರತಿನಿಧಿ ಪುಷ್ಪ ಅವರು ಮಾತನಾಡಿ ಹಲವು ವರ್ಷಗಳಿಂದ ಹಾಡಿ ನಿವಾಸಿಗಳ ಸಮಸ್ಯೆಯನ್ನು ಸರ್ಕಾರ ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದು ಅವರು ಸಹ ನಮ್ಮಂತೆಯೇ ಮನುಷ್ಯರಲ್ಲವೇ ಅವರಿಗೆ ಹಾಡಿ ನಿವಾಸಿಗಳ ಶೋಚನೀಯ ದುಸ್ಥಿತಿ ಕಾಣುತ್ತಿಲ್ಲವೆ ನಾವು ಸುಖವಾಗಿ ಬಾಳಲು ನಮ್ಮ ಹಕ್ಕನ್ನು ನಮಗೆ ನೀಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ಅಶೋಕ್, ಮಾಸ್ತಿಗುಡಿ ಅಯ್ಯಪ್ಪ, ರೇಣುಕಾ, ಶಾಂತಿ, ಜಾನು, ಪುಟ್ಟಬಸವಯ್ಯ, ಸಂಜೀವ್ ಮತ್ತಿತರಿದ್ದರು.