ಮೈಸೂರು: ಕರ್ನಾಟಕ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರು ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರ, ಮೈಸೂರು ಸಹಯೋಗದೊದಿಗೆ ಮೈಸೂರಿನಲ್ಲಿ ಜಿಲ್ಲಾ ಮಟ್ಟದ ಕಲಾವೈಭವ- ವಸ್ತು ಪ್ರದರ್ಶನ ಮತ್ತು ಮಾರಾಟವನ್ನು ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ನಲ್ಲಿ ಆ 12 ರಿಂದ 21. ರವರೆಗೆ 10 ದಿವಸಗಳ ಕಾಲ ಬೆಳಿಗ್ಗೆ 10 ರಿಂದ ರಾತ್ರಿ 9 ರವರೆಗೆ ಗೌರಿ- ಗಣೇಶ ಹಬ್ಬದ ಪ್ರಯುಕ್ತ ಆಯೋಜಿಸಲಾಗಿದೆ.
ಜಿಲ್ಲಾ ಕೈಗಾರಿಕಾ ಕೇಂದ್ರಗಳು ಆಯಾ ಜಿಲ್ಲೆಗಳಲ್ಲಿ ಉತ್ಪಾದನೆಯಾಗುವ ವಸ್ತುಗಳನ್ನು ಮಾರಾಟ ಮಾಡಲು ಪ್ರತಿ ವರ್ಷ ಕಲಾವೈಭವ ವಸ್ತುಪ್ರದರ್ಶನವನ್ನು ಆಯಾ ಜಿಲ್ಲೆಗಳಲ್ಲಿ ಏರ್ಪಡಿಸಿಕೊಂಡು ಬರುತ್ತಿದೆ. ಆ ಮೂಲಕ ರಾಜ್ಯದ ಮತ್ತು ಸ್ಥಳೀಯ ಕೈಗಾರಿಕೆಗಳು ಮತ್ತು ಗುಡಿ ಕೈಗಾರಿಕೆಗಳು, ಸ್ವಸಹಾಯ ಸಂಘಗಳು ಹಾಗೂ ಸ್ತ್ರೀ ಶಕ್ತಿ ಸಂಘಗಳು ತಯಾರಿಸಿದ ಉತ್ಪನ್ನಗಳಿಗೆ ಸ್ಥಳೀಯವಾಗಿ ಮಾರುಕಟ್ಟೆ ಸೌಲಭ್ಯ ಕಲ್ಪಿಸಿ ಆ ಮೂಲಕ ಅವುಗಳಿಗೆ ಉತ್ತೇಜನ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ.
ಮೈಸೂರಿನ ಜಿಲ್ಲಾ ಕೈಗಾರಿಕಾ ಕೇಂದ್ರವು ಈ ವರ್ಷ ಜೆಎಸ್ಎಸ್ ಅರ್ಬನ್ ಹಾತ್ನಲ್ಲಿ ಕೈಗಾರಿಕೆಗಳು, ಸಣ್ಣ ಕೈಗಾರಿಕೆಗಳು, ಸ್ವಸಹಾಯ ಗುಂಪುಗಳು, ಖಾದಿಗ್ರಾಮೋದ್ಯೋಗಗಳು, ಸ್ವಯಂ ಉದ್ಯೋಗಿಗಳು, ಕರಕುಶಲಕರ್ಮಿಗಳು, ಕೈಮಗ್ಗ ನೇಕಾರರ ಸಹಕಾರ ಸಂಘಗಳು ಮತ್ತು ಇತರೆ ಸಂಘ ಸಂಸ್ಥೆಗಳು ತಯಾರಿಸುವ ಒಳ್ಳೆ ಗುಣಮಟ್ಟವುಳ್ಳ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಈ ಕಲಾವೈಭವದಲ್ಲಿ 100ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಅವಕಾಶ ಮಾಡಿಕೊಡಲಾಗಿದೆ.
ಆಕರ್ಷಣೀಯ ಕರಕುಶಲ ವಸ್ತುಗಳು, ಕೈಮಗ್ಗ ವಸ್ತ್ರಗಳು, ಕೈಮಗ್ಗದ ರೇಷ್ಮೆ ಮತ್ತು ಕಾಟನ್ ಸೀರೆಗಳು, ಕೈಮಗ್ಗದ ಹೊದಿಕೆಗಳು, ವಿವಿಧ ಲೋಹ, ಜರಿ ಕಸೂತಿಗಳು, ಸಿದ್ದ ಉಡುಪುಗಳು, ಶಿಲ್ಪಗಳು, ಕುಂಬಾರಿಕೆ, ಚರ್ಮ ಮತ್ತು ಮರಗಳಿಂದ ಮಾಡಿದ ಆಟಿಕೆ ಮತ್ತು ಬೊಂಬೆಯ ಸಾಮಾನುಗಳು, ಗೃಹಬಳಕೆಯ ವಸ್ತುಗಳು, ಉತ್ತರ ಕರ್ನಾಟಕದ ರುಚಿಕರವಾದ ತಿಂಡಿ ಪದಾರ್ಥಗಳು, ಕಸೂತಿ ಮಾಡಿದ ಬ್ಯಾಗುಗಳು, ಕೃತಕ ಆಭರಣಗಳು, ಆಯುರ್ವೇದ ಮತ್ತು ಗಿಡಮೂಲಿಕೆ ಔಷಧಿಗಳು, ರುದ್ರಾಕ್ಷಿ ಮತ್ತು ಮಣಿಗಳು, ಬುಡಕಟ್ಟು ಜನಾಂಗದ ಆಭರಣ, ಬಿದ್ರಿ, ಕುಂದಣಕಲೆ, ಕಂಚಿನ ವಿಗ್ರಹ, ಕಸೂತಿ ಸೀರೆಗಳು, ಮೇಲು ಹಾಸುಗಳು, ಹೊದಿಕೆಗಳು, ಚನ್ನಪಟ್ಟಣದ ಗೊಂಬೆಗಳು, ಮಣ್ಣಿನಿಂದ ತಯಾರಿಸಿದ ಹೂಜಿಗಳು, ಹೂ-ಕುಂದಗಳು, ಹಾಗೂ ಮತ್ತಿತರ ಆಕರ್ಷಣೀಯ ಅಲಂಕಾರಿಕ ವಸ್ತುಗಳು ವಸ್ತುಪ್ರದರ್ಶನದಲ್ಲಿ ಇನ್ನೂ ಅನೇಕಾನೇಕ ವಸ್ತುಗಳು ಈ ವಸ್ತುಪ್ರದರ್ಶನದಲ್ಲಿರಲಿದೆ.