ಮಡಿಕೇರಿ, ಆ.10: ನೂತನವಾಗಿ ರಚನೆಗೊಂಡಿರುವ ಕೊಡಗು ಜಿಲ್ಲಾ ವರ್ಕ್ಫ ಸಮಿತಿಯಲ್ಲಿ ಜಿಲ್ಲೆಯ ಶಾಸಕರುಗಳ ಶಿಫಾರಸ್ಸನ್ನು ದಿಕ್ಕರಿಸಿ ಬಿಜೆಪಿಯೇತರರಿಗೆ ಸ್ಥಾನ ನೀಡಲಾಗಿದೆ ಎಂದು ಆರೋಪಿಸಿರುವ ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ಸೋಮಾವಾರಪೇಟೆ ತಾಲ್ಲೂಕು ಮಾಜಿ ಅಧ್ಯಕ್ಷ ಎಂ.ಹೆಚ್.ಮುಹಮ್ಮದ್, ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ನೂತನ ವಕ್ಫ್ ಸಮಿತಿಯನ್ನು ರಚಿಸುವ ಸಂದರ್ಭ ಶಾಸಕದ್ವಯರ ಸೂಚನೆಯಂತೆ ಕೊಡಗು ಜಿಲ್ಲೆಯ ಬಿಜೆಪಿ ಅಲ್ಪಸಂಖ್ಯಾತ ಕಾರ್ಯಕರ್ತರ ಪಟ್ಟಿಯನ್ನು ರಾಜ್ಯ ವಕ್ಫ್ ಮಂಡಳಿಗೆ ಕಳುಹಿಸಿ ಕೊಡಲಾಗಿತ್ತು. ಆದರೆ ಶಾಸಕರುಗಳ ಪಟ್ಟಿಯನ್ನು ಗಾಳಿಗೆ ತೂರಿದ ವಕ್ಫ್ ಮಂಡಳಿ ರಾಜ್ಯಾಧ್ಯಕ್ಷ ಶಾಫಿ ಸಅದಿ ಅವರು ತಮಗೆ ಬೇಕಾದವರಿಗೆ ಹಾಗೂ ಬಿಜೆಪಿ ವಿರುದ್ಧ ಮಾತನಾಡುವವರಿಗೆ ಸ್ಥಾನ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಜಿಲ್ಲೆಯ ಬಿಜೆಪಿ ಅಲ್ಪಸಂಖ್ಯಾತ ಕಾರ್ಯಕರ್ತರ ವಿರುದ್ಧ ಮತ್ತು ಪಕ್ಷದ ಮೇಲೆ ಟೀಕಾ ಪ್ರಹಾರ ನಡೆಸುತ್ತಿರುವವರನ್ನು ವಕ್ಫ್ ಸಮಿತಿಗೆ ಆಯ್ಕೆ ಮಾಡಿ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ. ಕಳೆದ ಬಿಜೆಪಿ ಸರ್ಕಾರ ಬಂದಾಗಲೂ ಬಿಜೆಪಿಯೇತರರಿಗೆ ಅಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಈ ಬೆಳವಣಿಗೆ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರುಗಳಿಗೆ ತೀವ್ರ ನೋವು ಮತ್ತು ನಿರಾಶೆಯನ್ನುಂಟುಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಕಾರಣಕರ್ತರಾದ ಸಮಿತಿಯ ರಾಜ್ಯಾಧ್ಯಕ್ಷ ಶಾಫಿ ಸಅದಿ ಅವರನ್ನು ಸರ್ಕಾರ ತಕ್ಷಣ ಅಧ್ಯಕ್ಷ ಸ್ಥಾನದಿಂದ ವಜಾ ಮಾಡಿ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಮತ್ತು ನೂತನ ಸಮಿತಿಯನ್ನು ರಚಿಸಬೇಕೆಂದು ಒತ್ತಾಯಿಸಿದ್ದಾರೆ. ನಾನು ಸೇರಿದಂತೆ ಪಕ್ಷದ ಹಲವು ನಿಷ್ಠಾವಂತ ಮುಖಂಡರು ಹಾಗೂ ಕಾರ್ಯಕರ್ತರು ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದರೂ ಯಾರಿಗೂ ಸಮಿತಿಯಲ್ಲಿ ಸ್ಥಾನ ನೀಡದೆ ಇರುವುದು ಬೇಸರವನ್ನು ತರಿಸಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರ ಗಮನ ಸೆಳೆದು ನೂತನ ಸಮಿತಿ ರಚನೆಗೆ ಮನವಿ ಮಾಡಲಾಗುವುದು.
ಸೂಕ್ತ ಸ್ಪಂದನೆ ದೊರೆಯದಿದ್ದಲ್ಲಿ ವಕ್ಫ್ ಸಮಿತಿಯ ರಾಜ್ಯ ಮತ್ತು ಜಿಲ್ಲಾ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು. ಹೋರಾಟದಿಂದಲೂ ಬೇಡಿಕೆ ಈಡೇರದಿದ್ದಲ್ಲಿ ಬಿಜೆಪಿಗೆ ಸಾಮೂಹಿಕ ರಾಜೀನಾಮೆ ನೀಡಲಾಗುವುದು ಎಂದು ಮುಹಮ್ಮದ್ ತಿಳಿಸಿದ್ದಾರೆ.