ಮೈಸೂರು: ಮೈಸೂರಿನ ಸ್ವರ್ಣನೃಸಿಂಹ ದತ್ತ ಸಾಯಿ ಪೀಠಿಕ ಸೇವಾ ಟ್ರಸ್ಟ್ ವತಿಯಿಂದ ಮೈಸೂರು- ಬನ್ನೂರು ರಸ್ತೆಯಲ್ಲಿರುವ ವಾಜಮಂಗಲದ ಆರ್.ಆರ್.ವೆಡ್ಡಿಂಗ್ ಬೆಲ್ಸ್ನಲ್ಲಿ ಗುರು ಪೂರ್ಣಿಮೆಯನ್ನು ಅತ್ಯಂತ ಸಂಭ್ರಮ-ಸಡಗರ ಮತ್ತು ವೈಭವದಿಂದ ಆಚರಿಸಲಾಯಿತು.
ಶ್ರೀವೆಂಕಟಾಚಲ ಅವಧೂತರ ದಿವ್ಯ ಸಾನಿಧ್ಯದಲ್ಲಿ 108 ಕಳಸ ಸ್ಥಾಪನೆ ಮತ್ತು ಭಗವತಿ ಆರಾಧನೆಯೊಂದಿಗೆ ಆರಂಭವಾದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಗುರು ನಾಮ ಸ್ಮರಣೆ ನಿರಂತರವಾಗಿ ನಡೆಯಿತು. ವ್ಯಾಸ ಪೂಜೆ, ಗಣಪತಿ ಹೋಮ, ಸುದರ್ಶನ ಹೋಮ, ದುರ್ಗಾ ಹೋಮ, ದತ್ತಾತ್ರೇಯ ಹೋಮ, ವೆಂಕಟಾಚಲ ಹೋಮಗಳೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಹೋಮಗಳನ್ನು ಋತ್ವಿಕರಾದ ಅರುಣ್ ಶರ್ಮಾ ನೇತೃತ್ವದ ತಂಡದವರು ನಡೆಸಿಕೊಟ್ಟರು. ಶ್ರೀ ಅರ್ಜುನ ಅವಧೂತರು ಪೂರ್ಣಾಹುತಿ ನೆರವೇರಿಸಿದರು.
ಶ್ರೀ ಅರ್ಜುನ ಅವಧೂತರು ಪ್ರವಚನದ ಮೂಲಕ ಮಂತ್ರಾಲಯದ ಗುರುರಾಯರ ದರ್ಶನ ಮಾಡಿಸಿ, ಗುರುವಿನ ಮಹತ್ವ ತಿಳಿಸಿದರಲ್ಲದೇ ತಂದೆ-ತಾಯಂದಿರೇ ಗುರುಗಳು ಎಂಬುದನ್ನು ವಿವರಿಸಿದರು. ನಂತರ ಗುರುಗಳು ಬಿಕ್ಷಾವಂದನೆ ಸ್ವೀಕರಿಸಿ, ಗುರು ಬಂಧುಗಳಿಗೆ ಆಶೀರ್ವಚನ ನೀಡಿದರು. ಚಲನಚಿತ್ರ ನಟರು, ಕಿರು ತೆರೆ ನಟ-ನಟಿಯರು ಮತ್ತು ಗಣ್ಯರು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಗುರುಗಳು ತಮ್ಮ ಮಾತೃಶ್ರೀ ರಂಗಲಕ್ಷ್ಮೀ ಅಮ್ಮನವರಿಗೆ ಪಾದ ಪೂಜೆ ನೆರವೇರಿಸಿದರು. ನಂತರ ಎಲ್ಲರಿಗೂ ಮಹಾ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಇದೇ ವೇಳೆ ಭಕ್ತರಿಗೆ ತುಳಸಿ ಗಿಡ ಮತ್ತು ಲಾಡು ಪ್ರಸಾದವನ್ನು ನಿಡಲಾಯಿತಲ್ಲದೆ, ‘ವಿದ್ಯಾನಂದಶ್ರೀ ಫಲಾನುಭವಿ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ವಿತರಿಸಲಾಯಿತು. ಟ್ರಸ್ಟ್ನ ವೆಬ್ಸೈಟ್ ಅನಾವರಣಗೊಳಿಸಲಾಯಿತು.