ಬಂಟ್ವಾಳ: ಉದ್ಯಾನವನಗಳು ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಮನಸ್ಸಿಗೆ ಆಹ್ಲಾದ ನೀಡುತ್ತವೆ. ಸರಕಾರವೂ ಗ್ರಾಮಕ್ಕೊಂದು ಉದ್ಯಾನವನ ಬೇಕೆಂದು ಸ್ವಾತಂತ್ಯದ ಅಮೃತ ಮಹೋತ್ಸವದ ಅಮೃತ ಗ್ರಾಮ ಪಂಚಾಯತ್ ಯೋಜನೆಯಲ್ಲಿ ಸೂಚಿಸಲಾಗಿದೆ. ಆ ಪ್ರಯುಕ್ತ ಬಂಟ್ವಾಳ ತಾಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯತ್ ಬಳಿ ಸುಂದರ ಸಾರ್ವಜನಿಕ ಅಮೃತ ಉದ್ಯಾನವನ ನಿರ್ಮಾಣಗೊಂಡಿದೆ.
ಗ್ರಾಮ ಪಂಚಾಯತ್ಗೆ ಅಮೃತ ಗ್ರಾಮ ಪಂಚಾಯತ್ ಯೋಜನೆಯಡಿ ೨೫ ಲಕ್ಷ ರೂ. ಅನುದಾನ ನೀಡಲಾಗುತ್ತಿದ್ದು, ಸೂಚಿತ ವಿವಿಧ ಕಾಮಗಾರಿಗಳನ್ನು ನಡೆಸುವುದರೊಂದಿಗೆ ಸಾರ್ವಜನಿಕ ಉದ್ಯಾನವನ ನಿರ್ಮಾಣವನ್ನು ಸೂಚಿಸಲಾಗಿದೆ.ಸಂಗಬೆಟ್ಟು ಗ್ರಾಮ ಪಂಚಾಯತ್ನ ಕೇಂದ್ರ ಸ್ಥಾನ ಸಿದ್ದಕಟ್ಟೆಯಲ್ಲಿ ಗ್ರಾಮ ಪಂಚಾಯತ್ ಕಚೇರಿ ಬಳಿ ಕೇಂದ್ರ ಮೈದಾನವಿದ್ದು ಅದರ ಪಕ್ಕ ಸಾರ್ವಜನಿಕ ಉದ್ಯಾನವನ ನಿರ್ಮಾಣಗೊಂಡಿದೆ.
ಸಂಗಬೆಟ್ಟು ಗ್ರಾಮ ಪಂಚಾಯತ್ ಕಚೇರಿಗೆ ತೆರಳುವ ದ್ವಾರದ ಬಳಿಯೂ ಇಕ್ಕೆಗಳಲ್ಲಿ ಸುಂದರ ಉದ್ಯಾನವನ ನಿರ್ಮಸಲಾಗಿದ್ದು, ನಯನ ಮನೋಹರವಾಗಿ ಆಕರ್ಷಿಸುತ್ತಿದೆ. ಇದರಿಂದ ಗ್ರಾಮ ಪಂಚಾಯತ್ ಕಚೇರಿಯ ಸೌಂದರ್ಯ ಇಮ್ಮಡಿಯಾಗಿದೆ.
ಉದ್ಯಾನವನ ಹಸುರು ಹುಲ್ಲುಗಾವಲಿನಿಂದ ಪ್ರಾಕೃತಿಕವಾಗಿ ಹಚ್ಚ ಹಸುರಿನಿಂದ ಕಂಗೊಳಿಸುತ್ತಿದೆ. ಮಕ್ಕಳಿಗೆ ಜೋಕಾಲಿಯಾಡಲು ಜೋಕಾಲಿ, ಜಾರು ಬಂಡಿ, ಹಿರಿಯ ನಾಗರಿಕರಿಗೆ ಕಾಲ್ನಡಿಗೆ ದಾರಿ, ಕುಳಿತುಕೊಳ್ಳಲು ಬೆಂಚ್ಗಳನ್ನು ಅಳವಡಿಸಲಾಗಿದೆ.ದ್ವಾರದ ಬಳಿ ನಿರ್ಮಿಸಲಾದ ಉದ್ಯಾನವನದಲ್ಲಿ ಹಸುರು ಲಾನ್, ಹೂ. ಹಣ್ಣು ಹಂಪಲುಗಳ ಗಿಡಗಳನ್ನು ನೆಡಲಾಗಿದೆ. ಸಂಜೆ ಹೊತ್ತು ಸಾರ್ವಜನಿಕರು, ಮಕ್ಕಳು ಉದ್ಯಾನವನದಲ್ಲಿ ವಿಹರಿಸುತ್ತಾರೆ.
ಸಂಗಬೆಟ್ಟು ಗ್ರಾಮ ಪಂಚಾಯತ್ ಅಮೃತ ಯೋಜನೆಗೆ ಆಯ್ಕೆಗೊಂಡಿದ್ದು, ಅಮೃತ ಉದ್ಯಾನವನಕ್ಕೆ ಅವಕಾಶ ಲಭಿಸಿತು. ಅದರಂತೆ ಉದ್ಯೋಗ ಖಾತರಿ ಯೋಜನೆಯಲ್ಲಿ ಸುಂದರ ಉದ್ಯಾನವನ ನಿರ್ಮಾಣಗೊಂಡಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಕೊಳ್ಳಬೇಕು.-ಸತೀಶ್ ಪೂಜಾರಿ ಅಲಕ್ಕೆ, ಅಧ್ಯಕ್ಷರು, ಸಂಗಬೆಟ್ಟು ಗ್ರಾ.ಪಂ.