ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅಭಿಮನ್ಯು ನೇತೃತ್ವದ ಗಜಪಡೆಗೆ ಭಾನುವಾರದಿಂದ ತಾಲೀಮು ಆರಂಭಿಸಿದ್ದು, ಬನ್ನಿಮಂಟಪದವರೆಗೆ 9 ಆನೆಗಳು ನಿರಾತಂಕವಾಗಿ ಸಾಗಿ ಹಿಂತಿರುಗುತ್ತಿವೆ.
ಈ ತಾಲೀಮು ದಸರಾ ಜಂಬೂಸವಾರಿ ವರೆಗೆ ನಡೆಯಲಿದೆ. ದಿನಕಳೆದಂತೆ ತಾಲೀಮು ಕಠಿಣಗೊಳ್ಳಲಿದೆ. ಇದೀಗ ಬೇರೆ ಬೇರೆ ಶಿಬಿರಗಳಿಂದ ಆನೆಗಳು ಬಂದಿದ್ದು ಅವುಗಳಿಗೆ ಅಭ್ಯಾಸ ಮಾಡುವ ಸಲುವಾಗಿ ತಾಲೀಮು ನಡೆಸಲಾಗುತ್ತಿದೆ.
ಕೊರೊನಾ ಕಾರಣದಿಂದ ಕಳೆದ ಎರಡು ವರ್ಷ ದಸರಾ ಅರಮನೆಗೆ ಸೀಮಿತವಾಗಿದ್ದರಿಂದ ಜಂಬೂ ಸವಾರಿ ಅರಮನೆಯಲ್ಲೇ ನಡೆದಿತ್ತು. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆ ಮಾಡುತ್ತಿದ್ದು, ಭಾನುವಾರದಿಂದ ಗಜಪಡೆಯನ್ನು ಜಂಬೂಸವಾರಿ ಮಾರ್ಗದಲ್ಲಿ ಕರೆದೊಯ್ಯಲಾಯಿತು. ಮೊದಲ ದಿನವೇ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ಎಲ್ಲಾ ಆನೆಗಳು ಶಾಂತ ರೀತಿಯಲ್ಲಿ ವರ್ತಿಸಿ ಅಧಿಕಾರಿಗಳಲ್ಲಿ ಭರವಸೆ ಮೂಡಿಸಿದವು.
ತಾಲೀಮಿಗೂ ಮುನ್ನ ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಾಲಯದ ಬಳಿ ದಸರಾ ಗಜಪಡೆಗೆ ಅರಣ್ಯ ಇಲಾಖೆ ವತಿಯಿಂದ ಅರ್ಚಕ ಎಸ್.ವಿ.ಪ್ರಹ್ಲಾದ್ರಾವ್ ಅವರಿಂದ ಪೂಜೆ ಸಲ್ಲಿಸಲಾಯಿತು. ಆನೆಗಳಿಗೆ ಪಾದತೊಳೆದು ಹರಿಶಿನ, ಕುಂಕುಮ, ಶ್ರೀಗಂಧ ಹಚ್ಚಿ ಪುಷ್ಪಾರ್ಚನೆ ಮಾಡಲಾಯಿತು. ನಂತರ ಪಂಚಫಲ ಅರ್ಪಿಸಲಾಯಿತು.
ಡಿಸಿಎಫ್ ಡಾ.ವಿ.ಕರಿಕಾಳನ್ ಆನೆಗಳಿಗೆ ಪುಷ್ಪನಮನ ಸಲ್ಲಿಸಿ, ತಾಲೀಮಿಗೆ ಚಾಲನೆ ನೀಡಿದರು. ಬಳಿಕ ಮೊದಲ ದಿನದ ತಾಲೀಮಿನಲ್ಲಿ ಎಲ್ಲಾ ಆನೆಗಳು ಒಂದಿಷ್ಟೂ ಹೆದರದೇ ಹೆಜ್ಜೆ ಹಾಕಿದವು.
ಅರಮನೆ ಆವರಣದಿಂದ ತಾಲೀಮಿಗಾಗಿ ಹೊರಟ ದಸರಾ ಗಜಪಡೆ ಎಲ್ಲಿಯೂ ನಿಲ್ಲದೆ ಸರಾಗವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನ ತಲುಪಿದವು. ಅರಮನೆ ಆವರಣದ ಆನೆ ಕ್ಯಾಂಪ್ ಸ್ಥಳದಿಂದ ಪಂಜಿನ ಕವಾಯತ್ ಮೈದಾನ 5ಕಿ.ಮಿ ದೂರವಿದ್ದು, ಈ ಅಂತರವನ್ನು ತಾಲೀಮಿನಲ್ಲಿ ದಸರಾ ಗಜಪಡೆ 1.15 ಗಂಟೆಯಲ್ಲಿಯೇ ತಲುಪಿದವು. ಇನ್ನು ಒಂದು ವಾರಗಳ ಕಾಲ ಒಣ ತಾಲೀಮು(ಬಾರ ಹೊರಿಸದೇ) ನಡೆಸಲಾಗುತ್ತದೆ.
ತಾಲೀಮು ಆರಂಭವಾದಾಗ ಅಂಬಾರಿ ಆನೆ ಅಭಿಮನ್ಯು ಮುಂದಾಳತ್ವದಲ್ಲಿ ದಸರಾ ಗಜಪಡೆಯನ್ನು ಸಾಲಾಗಿ ಕರೆದೊಯ್ಯಲಾಯಿತು. ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಿಂದ ಅರಮನೆಗೆ ವಾಪಸ್ಸಾಗುವಾಗ ಭೀಮ ಹಾಗೂ ಲಕ್ಷ್ಮೀ ಆನೆಯ ನೇತೃತ್ವದಲ್ಲಿ ಉಳಿದ ಆನೆಗಳನ್ನು ಸಾಲಾಗಿ ಕರೆದೊಯ್ಯಲಾಯಿತು. ವಾಪಸ್ಸಾಗುವಾಗ ಮೊದಲೇ ಭೀಮ ಸಾಗಿದರೂ ದೃತಿಗೆಡಲಿಲ್ಲ. ಭೀಮ ಹಾಗೂ ಲಕ್ಷ್ಮೀ ದಸರಾ ಮಹೋತ್ಸವದಲ್ಲಿ ಎರಡನೇ ಬಾರಿಗೆ ಪಾಲ್ಗೊಳ್ಳುತ್ತಿರುವುದರಿಂದ ಅವುಗಳ ವರ್ತನೆ ಗಮನಿಸಲು ಮುಂಚೂಣಿಯಲ್ಲಿ ಸಾಗಲು ಅವಕಾಶ ಮಾಡಿಕೊಡಲಾಯಿತು. ಅದರ ಹಿಂದೆ ಅರ್ಜುನ ಹಾಗೂ ಹೊಸ ಆನೆ ಮಹೇಂದ್ರ ಹೆಜ್ಜೆ ಹಾಕಿದವು. ಕೊನೆಯದಾಗಿ ಅಭಿಮನ್ಯು ಹೆಜ್ಜೆ ಹಾಕಿತು. ಇದರಿಂದ ಮೈಸೂರಿಗೆ ಬಂದಿರುವ 9 ಆನೆಗಳೂ ನಿರೀಕ್ಷೆಗೂ ಮೀರಿ ವರ್ತಿಸಿ, ಭರವಸೆ ಹೆಚ್ಚಿಸಿದವು.
ಕುಮ್ಕಿ ಆನೆಗಳಾದ ಕಾವೇರಿ, ಚೈತ್ರಾ, ಗೋಪಾಲಸ್ವಾಮಿ, ಧನಂಜಯ ಸಹ ರಾಜಬೀದಿಯಲ್ಲಿ ಗಾಂಭಿರ್ಯದಿಂದ ಹೆಜ್ಜೆ ಹಾಕಿದವ. ಅರಮನೆಯಿಂದ ಸಯ್ಯಾಜಿರಾವ್ ರಸ್ತೆ ಮೂಲಕ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಸಾಗಿದ ಗಜಪಡೆಯನ್ನು ಕಂಡು ಜನರು ಸಂಭಮಿಸಿದರು. ದಾರಿಯುದ್ದಕ್ಕೂ ರಸ್ತೆಯ ಎರಡೂ ಬದಿಯಲ್ಲೂ ನಿಂತಿದ್ದ ಜನ ದಸರಾ ಗಜಪಡೆಗೆ ಕೈಮುಗಿದು ನಮಿಸಿದರು. ಜತೆಗೆ ರಸ್ತೆ ಬದಿಯಿದ್ದ ವ್ಯಾಪಾರಿಗಳು ಗಜಪಡೆಗೆ ಎಂದಿನಂತೆ ಹೂವು, ಹಣ್ಣು ನೀಡಿದರು.
ಡಿಸಿಎಫ್ ಡಾ.ವಿ.ಕರಿಕಾಳನ್, ಆರ್ಎಫ್ಒ ಸಂತೋಷ್ಕುಮಾರ್, ಪಶುವೈದ್ಯ ಡಾ.ಮುಜೀಬ್, ಸಹಾಯಕರಾದ ರಂಗರಾಜು, ಅಕ್ರಮ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.