ಮೈಸೂರು: ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮೃತಪಟ್ಟಿರುವ ಘಟನೆ ಸರಗೂರು ತಾಲೂಕಿನ ನುಗು ವನ್ಯಜೀವಿ ವಲಯದ ವ್ಯಾಪ್ತಿಯ ಹಾದನೂರು ಗ್ರಾಮ ಪಂಚಾಯಿತಿಯ ಎತ್ತಿಗೆ ಗ್ರಾಮದಲ್ಲಿ ನಡೆದಿದೆ.
ಕೇರಳ ರಾಜ್ಯದ ವೈನಾಡು ಜಿಲ್ಲೆ ಪಾಲಮಂಗಲಂ ಮೂಲದ ಕೂಲಿಕಾರ್ಮಿಕ ಬಾಲನ್(60) ಎಂಬಾತನೇ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ದುರ್ದೈವಿ. ಈತ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಠಾತ್ ದಾಳಿ ಮಾಡಿದ ಕಾಡಾನೆ ಕೊಂದು ಹಾಕಿದೆ.
ಇನ್ನು ಹೆಡಿಯಾಲ ಮತ್ತು ಎಂ.ಸಿ.ತಳಲು ಗ್ರಾಮಕ್ಕೆ ಹೋಗುವ ಕಾಡಂಚಿನ ರಸ್ತೆಯ ಬದಿಯಲ್ಲಿ ಇರುವ ಜಮೀನಿನಲ್ಲಿ ಕಾಡಾನೆ ಚೆಂಡು ಹೂವಿನ ತೋಟದ ಬೆಳೆಯನ್ನು ನಾಶ ಮಾಡಿದ್ದು, ಪಕ್ಕದ ಜಮೀನಿನಲ್ಲಿ ಶುಂಠಿ ಬೆಳೆ ಕಾಯುತ್ತಿದ್ದ ಬಾಲನ್ ಮೇಲೆ ದಾಳಿ ಮಾಡಿ ಸಾಯಿಸಿದ ಬಳಿಕ ಅಕ್ಕಪಕ್ಕದ ಜಮೀನಿನ ರೈತರುಗಳು ಹಂದಿಗಳನ್ನು ಕಾಯಲು ಕಟ್ಟಿದ್ದ ಗುಡಿಸಲನ್ನು ನಾಶ ಮಾಡಿದೆ. ಈ ವೇಳೆ ಪರಮೇಶ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸಂದರ್ಭದಲ್ಲಿ ಅಕ್ಕ ಪಕ್ಕದ ಜಮೀನಲ್ಲಿ ಕೆಲಸ ಮಾಡುತ್ತಿದ್ದ ರೈತರು ಕೂಗಾಡಿದ ನಂತರ ಕಾಡಾನೆ ಆ ವ್ಯಕ್ತಿಯನ್ನು ಬಿಟ್ಟು, ಗ್ರಾಮದ ರೈತರುಗಳು ಕಾಡಾನೆಯನ್ನು ಕಾಡಿನೊಳಗೆ ಓಡಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹೆಡಿಯಾಲ ವಲಯದ ಎಸಿಎಫ್ ಪರಮೇಶ್, ಆರ್ ಎಫ್ ಓ ನಿವೇದಿತಾ, ಹಾಗೂ ಸಿಬ್ಬಂದಿ ವರ್ಗದ ಮೇಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾಕಾರರನ್ನು ಮನವೊಲಿಸಲು ಪ್ರಯತ್ನ ಮಾಡಿದರು ಕೂಡ ಗ್ರಾಮಸ್ಥರು ಪ್ರತಿಭಟನೆಯನ್ನು ಬಿಡದೆ ಮುಂದುವರಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು.
ಈ ವೇಳೆ ಗ್ರಾಪಂ ಸದಸ್ಯ ಪ್ರಕಾಶ್ ಮಾತನಾಡಿ ಅರಣ್ಯದಂಚಿನಲ್ಲಿರುವ ಸೋಲಾರ್, ವಿದ್ಯುತ್ ಸಂಪರ್ಕ ಹಾಗೂ ಕಾಡಾನೆಗಳು ಇಳಿಯುವ ಜಾಗದಲ್ಲಿ ಮಣ್ಣು ತೆಗೆಸಬೇಕು. ಮೃತ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಶಿವಲಿಂಗು ಮಾತನಾಡಿ ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಸಿಬ್ಬಂದಿಗಳು ರಾತ್ರಿ ವೇಳೆಯಲ್ಲಿ ಆನೆ ಕಾವಲಿಗೆ ಹೆಚ್ಚಿನ ಸಿಬ್ಬಂದಿ ನೇಮಿಸುವಂತೆ, ಅರಣ್ಯದಂಚಿನಲ್ಲಿ ರೈಲ್ವೆ ಕಂಬಿಗಳನ್ನು ಹಾಗೂ ಸೋಲಾರ್ ಅಡವಳಿಸಿಕೊಡಬೇಕೆಂದು ಹಾಗೂ ಹಗಲು ವೇಳೆಯಲ್ಲಿ ಹೆಚ್ಚಿನ ಸಿಬ್ಬಂದಿ ಗಳನ್ನು ನಿಯೋಜನೆ ಮಾಡಿ, ಎರಡು ವಾರಗಳ ಹಿಂದೆ ಹಾದನೂರು, ಒಡೆಯನ ಪುರ ಗ್ರಾಮದಲ್ಲಿ ಇಬ್ಬರು ಮೇಲೆ ಹುಲಿ ದಾಳಿ ಮಾಡಿದ ಬಳಿಕ ಅದರ ಬಗ್ಗೆ ಏನು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಹೆಡಿಯಾಲ ವಲಯದ ಎಸಿಎಫ್ ಪರಮೇಶ್ ಮಾತನಾಡಿ ಕಾಡುಪ್ರಾಣಿಗಳಿಂದ ದಾಳಿಗೊಳಗಾದ ಮೃತಪಟ್ಟ ಕುಟುಂಬಕ್ಕೆ ಸರ್ಕಾರದಿಂದ 7.5 ಲಕ್ಷ ನೀಡಲಿದ್ದು ಅಷ್ಟು ಪರಿಹಾರವನ್ನು ಮಾತ್ರ ಕೊಡಲು ಸಾಧ್ಯ, ಸ್ಥಳದಲ್ಲೇ 2 ಲಕ್ಷ ರೂ ಪರಿಹಾರ ನೀಡಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಉಳಿದ 5.5 ಲಕ್ಷ ರೂ ನೀಡಲಾಗುವುದೆಂದು ತಿಳಿಸಿದರು. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.