ಮೈಸೂರು: ಮಹಾರಾಜರು ನೇಮಿಸಿದ್ದ ಮಿಲ್ಲರ್ ಕಮಿಷನ್ ನಲ್ಲಿ ಬಲಿಜ ಜನಾಂಗ ಹಿಂದುಳಿದ ವರ್ಗದ ಪಟ್ಟಿಯಲ್ಲಿ ಉಲ್ಲೇಖವಿದೆ. ಹಾವನೂರು ವರದಿ, ಚಿನ್ನಪ್ಪ ರೆಡ್ಡಿ ವರದಿಗಳಲ್ಲಿಯೂ ಹಿಂದುಳಿದ ವರ್ಗದ ಪಟ್ಟಿಯಲ್ಲಿ ಸ್ಥಾನ ಪಡೆಯಲಾಗಿತ್ತು. ಶಿಕ್ಷಣ, ಉದ್ಯೋಗ, ಸಾಮಾಜಿಕ ಕ್ಷೇತ್ರಗಳಲ್ಲಿಯೂ 2ಎ ಮೀಸಲಾತಿ ಪಡೆಯಲಾಗಿತ್ತು. 1994 ರಲ್ಲಿ ಏಕಾಏಕಿ 2ಎ ಸೇರಿಸಲಾಗಿತ್ತು. ಸತತ ಹೋರಾಟದ ಫಲವಾಗಿ 2011ರಲ್ಲಿ ಶಿಕ್ಷಣಕ್ಕೆ ಮಾತ್ರ 2ಎ ಸೇರಿಸಲಾಗಿದೆ. ಪೂರ್ಣ ಪ್ರಮಾಣದ ಮೀಸಲಾತಿ ಪಡೆಯಲು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಲಿಜ ಸಂಕಲ್ಪ ಯಾತ್ರೆಯನ್ನು ಜನವರಿ 27ರಂದು ಆಯೋಜಿಸಲಾಗಿದೆ ಎಂದು ಕರ್ನಾಟಕ ಪ್ರದೇಶ ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ಸಿ. ಕೆ. ಜಗದೀಶ್ ತಿಳಿಸಿದರು.
ಮೈಸೂರಿನ ಸರಸ್ವತಿಪುರಂನಲ್ಲಿರುವ ಬಣಜಿಗ(ಬಲಿಜ) ಸಂಘದ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಕರ್ನಾಟಕ ಪ್ರದೇಶ ಬಲಿಜ ಸಂಘದ ಅಧ್ಯಕ್ಷ ಪೆರಿಕಲ್ ಎಂ ಸುಂದರ್ ಕರ್ನಾಟಕದ ಬಲಿಜ ಜನಾಂಗವು ಒಗ್ಗಟ್ಟಾಗಿ ನಮಗಿದ್ದ ಹಕ್ಕನ್ನು ಪಡೆಯಬೇಕಾಗಿದೆ. ಸಂಕಲ್ಪ ಯಾತ್ರೆಯು ಬಲಿಜರ ಸ್ವಾಭಿಮಾನದ ಸಂಕೇತವಾಗಿದೆ. ನಮ್ಮ ಜನಾಂಗದ ಭವಿಷ್ಯದ ದೃಷ್ಟಿಯಿಂದ ಈ ಹೋರಾಟ ಅತಿ ಅವಶ್ಯಕವಾಗಿದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆಯ ಮಾಜಿ ಅಧ್ಯಕ್ಷ ಎಚ್ಎ ವೆಂಕಟೇಶ್ ಅವರು, ಬೆಂಗಳೂರಿನಲ್ಲಿ ನಡೆಯಲಿರುವ ಬಲಿಜ ಸಂಕಲ್ಪ ಯಾತ್ರೆಯು ಸಮಾಜದ ಭವಿಷ್ಯದ ದೃಷ್ಟಿಯಿಂದ ಅತ್ಯಂತ ಪ್ರಾಮುಖ್ಯವಾಗಿರುವುದರಿಂದ ಜನವರಿ 23ರ ಸೋಮವಾರ ಬೆಳಿಗ್ಗೆ 11ಗಂಟೆಗೆ ಸರಸ್ವತಿಪುರಂನಲ್ಲಿರುವ ಬಲಿಜ ಹಾಸ್ಟೆಲ್ ನಲ್ಲಿ ಹೋರಾಟದ ರೂಪರೇಷೆಗಳನ್ನು ವಿವಿಧ ಬಲಿಜ ಸಂಘಟನೆಗಳೊಂದಿಗೆ ಚರ್ಚಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ತೀರ್ಮಾನಿಸಲಾಗುವುದೆಂದರು.
ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಗೋಪಾಲಕೃಷ್ಣ, ಚಲಪತಿ, ಕೆ .ಎನ್ .ಜಗದೀಶ್, ಬಿ.ಕೆ. ಸುರೇಶ್, ಡಾ. ಟಿ .ರಮೇಶ್, ವಿಜಯ್ ಕುಮಾರ್, ಟಿ.ಎಸ್. ರಮೇಶ್, ಆರ್ ಬಾಲರಾಜ್, ಎಚ್.ಎ. ಜಗದೀಶ್, ಪಾರ್ಥಸಾರಥಿ, ಕೆ .ರಾಜು, ನಂಜುಂಡಸ್ವಾಮಿ, ಕೆ. ಎನ್. ಶ್ರೀನಿವಾಸ್, ಮಹಾದೇವಪ್ಪ ,ಸುರೇಶ್, ಶಂಕರ್ ಮುಂತಾದ ಮುಖಂಡರು ಭಾಗವಹಿಸಿದ್ದರು.