ಮೈಸೂರು: ಮೈಸೂರಿನ ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆ, ಜವಳಿ ಮಂತ್ರಾಲಯ, ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳಿ ಸಹಕಾರದೊಂದಿಗೆ `ಸಂಸ್ಕೃತಿ- 2022 ನನ್ನ ಕೈಮಗ್ಗ ನನ್ನ ಹೆಮ್ಮೆ ಶೀರ್ಷಿಕೆಯಡಿ ಆಯೋಜಿಸಿರುವ ವಿಶೇಷ ಕೈಮಗ್ಗ ಮೇಳ ಆರಂಭಗೊಂಡಿದೆ.
ಡಿ.25 ರವರೆಗೆ ನಡೆಯುವ ಕೈಮಗ್ಗ ಉತ್ಪನ್ನಗಳ ಬೃಹತ್ ಪ್ರದರ್ಶನ ಮತ್ತು ಮಾರಾಟಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಜೆಎಸ್ಎಸ್ ಮೈಸೂರು ಅರ್ಬನ್ ಹಾತ್ ನಲ್ಲಿ ಆಯೋಜಿಸಿರುವ ಕೈಮಗ್ಗ ಮೇಳ ವಿಶೇಷವಾಗಿದೆ. ಹತ್ತು-ಹಲವು ವೈಶಿಷ್ಟ್ಯತೆಯುಳ್ಳ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತಿದ್ದು, ಮೈಸೂರಿಗರು ಹಾಗೂ ಪ್ರವಾಸಿಗರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರಲ್ಲದೆ ಮಾಗಿ ಉತ್ಸವ ಆಯೋಜನೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಎಂ.ಬಿ.ದ್ಯಾಬೇರಿ, ಜಿಪಂ ಸಿಇಓ ಬಿ.ಆರ್.ಪೂರ್ಣಿಮಾ, ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ಲಕ್ಷ್ಮಣ ತಳವಾರ್, ಕಾವೇರಿ ಹ್ಯಾಂಡ್ಲೂಮ್ಸ್ ವ್ಯವಸ್ಥಾಪಕ ನಿರ್ದೇಶಕ ಜೆ.ಪಿ.ಶ್ರೀನಿವಾಸ ಮೂರ್ತಿ, ಜೆಎಸ್ಎಸ್ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಲೆಕ್ಕ ಪರಿಶೋಧನೆ ವಿಭಾಗದ ನಿರ್ದೇಶಕ ಕೆ.ಆರ್.ಸಂತಾನಂ, ಹಣಕಾಸು ವಿಭಾಗದ ನಿರ್ದೇಶಕ ಎಸ್.ಪುಟ್ಟಸುಬ್ಬಪ್ಪ, ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಡಾ.ಹೆಚ್.ಆರ್.ಮಹದೇವಸ್ವಾಮಿ, ಯೋಜನಾಧಿಕಾರಿ ಶಿವನಂಜಸ್ವಾಮಿ ಮತ್ತಿತರರು ಇದ್ದರು.
ಆಕರ್ಷಣಿಯ ವಿಶೇಷ ಕೈಮಗ್ಗ ಮೇಳ ಮೇಳದಲ್ಲಿ 70ಕ್ಕೂ ಹೆಚ್ಚು ನೇಕಾರರು ಹಾಗೂ ನೇಕಾರರ ಸಹಕಾರ ಸಂಘಗಳು ಭಾಗವಹಿಸಿವೆ. ಮಧ್ಯಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧ ಜಿಲ್ಲೆಗಳ ನೇಕಾರರು ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ರೇಷ್ಮೆ, ಹತ್ತಿ ಮತ್ತು ಉಣ್ಣೆ ಹಾಗೂ ವಿವಿಧ ಮಿಶ್ರಿತ ನೂಲುಗಳಿಂದ ತಯಾರಿಸಲಾದ ಕೈಮಗ್ಗ ಉತ್ಪನ್ನಗಳು ಲಭ್ಯವಿವೆ.
ಕೈಮಗ್ಗದ ಉತ್ಪನ್ನಗಳನ್ನು ಶೇ.20 ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ರೇಷ್ಮೇ ಸೀರೆ, ಮೊಳಕಾಲ್ಮೂರು ಸೀರೆ, ಇಳಕಲ್ ಸೀರೆ, ಕಸೂತಿ ಸೀರೆ, ತಮಿಳುನಾಡಿನ ಕಾಂಚಿವರಂ ಸೀರೆ, ಬಿಹಾರದ ತಷರ್ ಸೀರೆ, ಕಾಂತ ಸೀರೆ, ಬಲಚುರಿ ಸೀರೆ, ಬುಟಿಕ್ ಸೀರೆ, ಪಶ್ಚಿಮಬಂಗಾಳದ ಬೆಂಗಾಲಿ ಕಾಟನ್ ಸೀರೆ, ಉತ್ತರಪ್ರದೇಶದ ಬನಾರಸ್ ಸೀರೆ, ಚಿಕನ್ ಎಂಬ್ರಾಯ್ಡಿರಿ ಸೀರೆ, ಮಧ್ಯಪ್ರದೇಶದ ಚಂದೇರಿ, ಮಹೇಶ್ವರಿ ಸೀರೆ ಲಭ್ಯವಿರಲಿವೆ. ಜೊತೆಗೆ ಡ್ರೆಸ್ ಮೆಟೀರಿಯಲ್, ಕಸೂತಿ ವಸ್ತ್ರ, ಟವಲ್, ಮೇಲು ಹಾಸು ಮತ್ತು ಹೊದಿಕೆಗಳು, ನೆಲಹಾಸು ಮತ್ತು ಇತರೆ ಕೈಮಗ್ಗ ಉತ್ಪನ್ನಗಳು ಆತ್ಯಾಕರ್ಷಣೀಯವಾಗಿವೆ.