ಹುಣಸೂರು: ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕಿನ ಬೆಲೆ ದಿಢೀರ್ ಕುಸಿದ ಹಿನ್ನಲೆಯಲ್ಲಿ ಶಾಸಕ ಎಚ್.ಪಿ. ಮಂಜುನಾಥ್ ಹರಾಜು ಮಾರುಕಟ್ಟೆಗೆ ಭೇಟಿ ನೀಡಿ ತಂಬಾಕು ಮಂಡಳಿ ಅಧಿಕಾರಿಗಳು ಹಾಗೂ ರೈತರೊಂದಿಗೆ ತುರ್ತು ಸಭೆ ನಡೆಸಿದರು.
ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಬೆಲೆ ಕುಸಿತದಿಂದ ಏಕಾಏಕಿ ಹರಾಜು ಮಾರುಕಟ್ಟೆಯನ್ನು ರೈತರು ಬಂದ್ ಮಾಡಿಸಿದ ಹಿನ್ನೆಲೆಯಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಹುಣಸೂರು ತಾಲೂಕಿನ ಕಟ್ಟೆ ಮಳಲವಾಡಿ ತಂಬಾಕು ಹರಾಜು ಮಾರುಕಟ್ಟೆಗೆ ಬಂದು ಅಧಿಕಾರಿಗಳು, ರೈತರು, ಕಾರ್ಮಿಕರ ಜೊತೆ ತುರ್ತು ಸಭೆ ಮಾಡಿ ಮಾತನಾಡಿ ಏಕಾಏಕಿ ಬೆಲೆ ಕುಸಿತವಾಗಿರುವುದು ಮಾರುಕಟ್ಟೆ ಅಚಲವಾದ (ಸ್ಟೇಬಲ್) ಇಲ್ಲ ಎಂದು ತೋರಿಸುತ್ತದೆ.
ಆರಂಭದಲ್ಲಿ ನಾನು ವ್ಯಾಪಾರಿಗಳ (ಟ್ರೇಡರ್ಸ್) ಮತ್ತು ತಂಬಾಕು ಅಧಿಕಾರಿಗಳಲ್ಲಿ ಉತ್ತಮ ಬೆಲೆ ನೀಡುವಂತೆ ಕೈ ಮುಗಿದು ವಿನಂತಿಸಿಕೊಂಡಿದ್ದೆ ಆರಂಭದಲ್ಲಿ 201 ರೂ ಗಳಿಗೆ ಹರಾಜು ಆಗುವ ಮೂಲಕ ರೈತರಿಗೆ ಶುಭ ಸೂಚನೆ ಸಿಕ್ಕಿತ್ತು. ಆದರೆ ಬುಧವಾರದ ಹರಾಜು ರೈತರಲ್ಲಿ ಆತಂಕ ಮೂಡಿಸಿದೆ.
ತಂಬಾಕು ಹರಾಜು ಮಾರುಕಟ್ಟೆ ಪ್ರಾರಂಭವಾಗುವ ಮೊದಲು ತಂಬಾಕು ಅಧಿಕಾರಿಗಳು, ರೈತರು, ಟ್ರೇಡರ್ಸ್ ಗಳು ಮತ್ತು ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳ ಸಭೆ ಮಾಡುವಂತೆ ಹಲವಾರು ಬಾರಿ ನಿಮಗೆ ತಿಳಿಸಿರುತ್ತೇನೆ ಆದರೆ ನೀವುಗಳು ನಮ್ಮ ಮಾತನ್ನು ಕೇಳುವುದಿಲ್ಲ. ನಮಗೆ ಅಪಮಾನವಾದರೂ ರೈತರಿಗೋಸ್ಕರ ಸಹಿಸಿಕೊಂಡೆ ಎಂದರು.
ರೈತರ ಒಂದು ವರ್ಷದ ಶ್ರಮ ಮತ್ತು ಅವರ ಮುಂದಿನ ಭವಿಷ್ಯವನ್ನು ನಿಮ್ಮ ಮುಂದೆ ಇಟ್ಟಿದ್ದಾರೆ. ರೈತ ಬಹಳ ಕಷ್ಟದಲ್ಲಿದ್ದಾನೆ. ಅವರ ಭವಿಷ್ಯದ ದೃಷ್ಟಿಯಿಂದ ನೀವುಗಳು ಅವರಿಗೆ ಲಾಭ ಕೊಡಬೇಡಿ ಅವನ ಒಂದು ವರ್ಷದ ಶ್ರಮ ಮತ್ತು ಮುಂದಿನ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಒಂದು ಉತ್ತಮ ಬೆಲೆ ನೀಡಿ ರೈತ ಉಳಿದರೆ ಮಾತ್ರ ನಾವೆಲ್ಲರೂ ಉಳಿಯಲು ಸಾಧ್ಯ. ಈ ವರ್ಷ ಮಳೆಯಿಂದ ಅರ್ಧಕ್ಕೆ ಅರ್ಧದಷ್ಟು ತಂಬಾಕು ನಷ್ಟವಾಗಿದೆ ಆದರೆ ರೈತನ ಶ್ರಮ ಅವನು ಹಾಕಿರುವ ಬಂಡವಾಳ ಜಾಸ್ತಿಯಾಗಿದೆ. ರೈತ ತಂಬಾಕು ಬೆಳೆಯಲು ಅನುಕೂಲವಾಗುವ ರೀತಿಯಲ್ಲಿ ನೀವು ಬೆಲೆ ನೀಡಬೇಕು. ಆದ್ದರಿಂದ ದಯಮಾಡಿ ತಂಬಾಕು ಅಧಿಕಾರಿಗಳು ಮತ್ತು ಖರೀದಿದಾರರು ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಉತ್ತಮ ಬೆಲೆ ನೀಡಬೇಕೆಂದರು.
ತಂಬಾಕು ಹರಾಜು ಅಧೀಕ್ಷಕ ಧನರಾಜ್ ಮಾತನಾಡಿ ಈ ಬಾರಿ ಮಳೆಯಿಂದ ರೈತ ಭಾರಿ ನಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ತಂಬಾಕು ಮಂಡಳಿ ಮತ್ತು ಬೈಯರ್ಸ್ ಗಳು ಅವರ ಸಹಾಯಕ್ಕೆ ಬರಬೇಕು. ಹರಾಜು ಈ ಬಾರಿ ಬಹಳಪಾರದರ್ಶಕವಾಗಿ ನಡೆಯುತ್ತದೆ. ನಾವು ರೈತರ ಪರವಿದ್ದೇವೆ. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದರು.
ಸಭೆಯಲ್ಲಿ ಹರಾಜು ಅಧೀಕ್ಷಕರಾದ ಸಿದ್ಧರಾಮ್ ಡಾಗೆ, ಚಂದ್ರಶೇಖರ್ ಹಾಗೂ ರೈತ ಮುಖಂಡರು ಹಾಗೂ ನೂರಾರು ತಂಬಾಕು ಬೆಳೆಗಾರರು ಭಾಗವಹಿಸಿದ್ದರು.