ಮೈಸೂರು: ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆ ಹಾಗೂ ಅಶ್ವದಳಕ್ಕೆ ಎರಡನೇ ಬಾರಿಗೆ ಸಿಡಿಮದ್ದಿನ ತಾಲೀಮನ್ನು ಶುಕ್ರವಾರ ನಡೆಸಲಾಯಿತು. ಆದರೆ ಕಳೆದ ತಾಲೀಮಿಗೆ ಹೋಲಿಸಿದರೆ ಈ ಬಾರಿ ಯಾವುದೇ ಆನೆಗಳಾಗಲೀ, ಕುದುರೆಗಳಾಗಲೀ ಅಷ್ಟೊಂದಾಗಿ ಬೆದರಲಿಲ್ಲ. ಹೀಗಾಗಿ ಮುಂದಿನ ತಾಲೀಮು ವೇಳೆಗೆ ಜಂಬೂಸವಾರಿಗೆ ಸಿದ್ಧವಾಗುವುದು ಖಚಿತವಾಗಿದೆ.
ಪ್ರತಿವರ್ಷ ಅರಮನೆ ಕೋಟೆ ಮಾರಮ್ಮ ದೇವಾಲಯದ ಬಳಿಯ ವಾಹನ ನಿಲುಗಡೆ ಪ್ರದೇಶದಲ್ಲಿ ಗಜಪಡೆ ಮತ್ತು ಅಶ್ವದಳಕ್ಕೆ ಸಿಡಿಮದ್ದು ತಾಲೀಮು ನಡೆಸಲಾಗುತ್ತಿತ್ತು. ಈ ವೇಳೆ ಫಿರಂಗಿಯಿಂದ ಭಾರಿ ಪ್ರಮಾಣದ ಸದ್ದು ಹೊರಬರುವುದರಿಂದ ಪಾರಂಪರಿಕ ಕಟ್ಟಡವಾದ ಅರಮನೆ ಮತ್ತು ಸುತ್ತುಗೋಡೆ ಬಿರುಕು ಬಿಡುವ ಸಾಧತೆಗಳಿದೆಯೆಂದು ಅರಮನೆ ಮಂಡಳಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿತ್ತು. ಇದರಿಂದಾಗಿ ಪಕ್ಕದ ವಸ್ತುಪ್ರದರ್ಶನ ಆವರಣದಲ್ಲಿ ಸಿಡಿಮದ್ದು ತಾಲೀಮು ನಡೆಸಲಾಯಿತು.
ತಾಲೀಮಿನಲ್ಲಿ ಆನೆ ಅಭಿಮನ್ಯು ನೇತೃತ್ವದ 12 ಆನೆಗಳು, 41 ಆಶ್ವಗಳಿಗೆ 7 ಪಿರಂಗಿಗಳಲ್ಲಿ ಮೂರು ಸುತ್ತಿನಂತೆ ಒಟ್ಟು 21 ಕುಶಾಲತೋಪು ಸಿಡಿಸುವ ಮೂಲಕ ಭಾರಿ ಶಬ್ಧದ ಪರಿಚಯ ಮಾಡಿಸಲಾಯಿತು. ಮೊದಲ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿರುವ ಪಾರ್ಥಸಾರಥಿ, ಮೂರನೇ ಬಾರಿಗೆ ಭಾಗವಹಿಸುತ್ತಿರುವ ಧನಂಜಯ ಹೆಚ್ಚು ಬೆದರಿದವು. ಮೊದಲ ಸಾಲಿನಲ್ಲಿ ಅರ್ಜುನ, ಅಭಿಮನ್ಯು, ಗೋಪಾಲಸ್ವಾಮಿ, ಭೀಮ, ಗೋಪಿ, ಕಾವೇರಿ, ವಿಜಯ ಆನೆಗಳನ್ನು ನಿಲ್ಲಿಸಲಾಗಿತ್ತು. ಎರಡನೇ ಸಾಲಿನಲ್ಲಿ ಸುಗ್ರೀವ, ಶ್ರೀರಾಮ, ಪಾರ್ಥಸಾರಥಿ, ಮಹೇಂದ್ರ ಆನೆಗಳನ್ನು ನಿಲ್ಲಿಸಿದ್ದರೆ, ಧನಂಜಯನನ್ನು ಪ್ರತ್ಯೇಕವಾಗಿ ನಿಲ್ಲಿಸಲಾಗಿತ್ತು. ಕುಶಾಲತೋಪಿನಿಂದ ಕಿವಿಗಡಚಿಕ್ಕುವ ಶಬ್ದ ಹೊರಹೊಮ್ಮುತ್ತಿದ್ದಂತೆ ಧನಂಜಯ ವಿಚಲಿತನಾಗಿ ಅತ್ತಿಂದಿತ್ತ ಚಲಿಸಲಾರಂಭಿಸಿದ. ಕಿರಿಯ ಆನೆ ಪಾರ್ಥಸಾರಥಿ ಬೆದರಿ ಹಿಂದಿದೆ ಚಲಿಸುತ್ತಿದ್ದ. ಈ ವೇಳೆ ಮಾವುತರು ಆನೆಗಳನ್ನು ನಿಯಂತ್ರಿಸಿದರು. ಮೊದಲ ಕುಶಾಲತೋಪು ತಾಲೀಮಿಗಿಂತ ಎರಡನೇ ತಾಲೀಮಿನಲ್ಲಿ ಆನೆಗಳು ಹೆಚ್ಚು ಧೈರ್ಯ ಪ್ರದರ್ಶಿಸಿದ್ದು ವಿಶೇಷವಾಗಿತ್ತು.