ಮೈಸೂರು: ಮೈಸೂರು ದಸರಾ ಜಂಬೂಸವಾರಿಯ ರೂವಾರಿಯಾಗಿರುವ ಗಜಪಡೆಗೆ ತಾಲೀಮು ಶುರುವಾಗಿದೆ. ಈಗಾಗಲೇ ಅಭಿಮನ್ಯು ನೇತೃತ್ವದ ಗಜಪಡೆ ಭಾರದ ತಾಲೀಮು ಆರಂಭಿಸಿದ್ದು, ದಿನದಿಂದ ದಿನಕ್ಕೆ ತಾಲೀಮು ಕಠಿಣವಾಗುತ್ತಾ ಹೋಗಲಿದೆ.
ಗುರುವಾರದಿಂದ ಆರಮಭವಾಗಿರುವ ಭಾರ ಹೊರಿಸುವ ತಾಲೀಮು ಶುರುವಾಗಿದ್ದು, ಅಂಬಾರಿ ಹೊರುವ ಅಭಿಮನ್ಯು ಸುಮಾರು 550 ಕೆಜಿ ತೂಕದ ಮರಳು ಮೂಟೆ ಹೊತ್ತು ಸಾಗುತ್ತಿದ್ದಾನೆ. ದಿನಕ್ಕೆ ಸುಮಾರು 5.5 ಕಿ.ಮೀ. ದೂರ ಸಾಗುತ್ತಿರುವ ಗಜಪಡೆ ಅರಮನೆಯಿಂದ ಬನ್ನಿಮಂಟಪದವರೆಗೆ ತೆರಳಿ ಹಿಂತಿರುಗುತ್ತಿವೆ.
ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗ ಆನೆಯ ಬೆನ್ನಿಗೆ ಗಾದಿ, ನಮ್ದಾವಿಟ್ಟು ಅದರ ಮೇಲೆ ಮರಳಿನ ಮೂಟೆಗಳನ್ನಿಟ್ಟು ತಾಲೀಮು ನಡೆಸಲಾಗುತ್ತಿದೆ. ಇದರ ತೂಕ ಹೇಗಿದೆ ಎಂದರೆ 250 ಕೆ.ಜಿ. ತೋಕದ ಗಾದಿ, ನಮ್ದಾ ಹಾಗೂ 300ಕೆ.ಜಿ ತೂಕದ ಮರಳು ಮೂಟೆಯನ್ನಿಟ್ಟು ಭಾರ ಹೊರುವ ತಾಲೀಮು ನಡೆಯುತ್ತಿದೆ. ದಿನಕ್ಕೆ ಎರಡು ಬಾರಿಯಂತೆ 5 ಕಿ.ಮೀ ನಡೆಸಲಾಗುತ್ತಿದೆ.
ಇರುವ ಒಂಬತ್ತು ಆನೆಗಳ ಪೈಕಿ ಅರ್ಜುನ ಬಿಟ್ಟು ಉಳಿದ ಐದು ಗಂಡಾನೆಗಳಿಗೆ ಭಾರ ಹೊರಿಸುವ ತಾಲೀಮನ್ನು ದಿನಕ್ಕೊಂದರಂತೆ ನಡೆಸಲಾಗುತ್ತದೆ. ಜತೆಗೆ ಭಾರದಲ್ಲಿಯೂ ದಿನದಿಂದ ದಿನಕ್ಕೆ ಹೆಚ್ಚಳ ಮಾಡುತ್ತಾ 750 ಕೆಜಿ ಭಾರಕ್ಕೆ ತಂದು ನಿಲ್ಲಿಸಲಾಗುತ್ತದೆ. ಬಳಿಕ ಮರದ ಅಂಬಾರಿಯ ತಾಲೀಮು ನಡೆಯಲಿದೆ. ಪ್ರತಿ ದಿನವೂ ಗಜಪಡೆ ಮೈಸೂರು ನಗರದ ರಾಜಮಾರ್ಗದಲ್ಲಿ ತೆರಳುವ ಮೂಲಕ ತಾಲೀಮು ನಡೆಸುತ್ತಿದ್ದು ಇದರಿಂದ ಮೈಸೂರು ನಗರಕ್ಕೆ ದಸರಾ ಕಳೆ ಬಂದಿರುವುದು ಗೋಚರಿಸುತ್ತಿದೆ.