ಹೆಚ್.ಡಿ.ಕೋಟೆ: ಕೇರಳ ಗಡಿಗೆ ಹೊಂದಿಕೊಂಡಿರುವ ಅರೆಮಲೆನಾಡು ಪ್ರದೇಶವಾಗಿರುವ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಾಲ್ಕು ಜಲಾಶಯ ಸೇರಿದಂತೆ ಕೆರೆಗಳಿದ್ದು, ಈಗ ಜಲಾಶಯ ಮತ್ತು ಕೆರೆಗಳಲ್ಲಿ ನೀರು ಬತ್ತಿ ಹೋಗುತ್ತಿರುವುದರಿಂದ ರೈತರು ಆತಂಕಗೊಂಡಿದ್ದಾರೆ.
ಪ್ರತಿ ವರ್ಷವೂ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ತಾಲೂಕಿನ ಪ್ರಮುಖ ಕಬಿನಿ ಜಲಾಶಯ ಭರ್ತಿಯಾಗುತ್ತದೆ. ಜತೆಗೆ ಕೇರಳಗಡಿಗೆ ಹೊಂದಿಕೊಂಡಿರುವುದರಿಂದ ಮಳೆಯೂ ಇಲ್ಲಿ ಉತ್ತಮವಾಗಿ ಸುರಿಯುತ್ತದೆ. ಹೀಗಾಗಿ ಇಲ್ಲಿ ಕೆರೆಗಳಿದ್ದು, ಅವುಗಳೆಲ್ಲವೂ ಸಾಮಾನ್ಯವಾಗಿ ಮಳೆಗಾಲದಲ್ಲಿ ಭರ್ತಿಯಾಗುತ್ತವೆ. ಈ ಕೆರೆ ನೀರನ್ನು ರೈತರು ಕೃಷಿಗೆ, ಜಾನುವಾರುಗಳಿಗೆ ಕುಡಿಯಲು ಬಳಸಿಕೊಳ್ಳುತ್ತಾರೆ.
ಬೇಸಿಗೆ ವೇಳೆಯಲ್ಲಿ ಕೆರೆಯ ನೀರನ್ನು ಬಳಸಿಕೊಳ್ಳಲಾಗುತ್ತಿತ್ತು. ಜತೆಗೆ ಅಂತರ್ಜಲವೂ ಹೆಚ್ಚಾಗುತ್ತಿತ್ತು. ಆದರೀಗ ಕೆರೆಗಳಲ್ಲಿ ನೀರು ಬತ್ತಿಹೋಗುತ್ತಿರುವುದು ರೈತರು ಸೇರಿದಂತೆ ಜನಸಾಮಾನ್ಯರಲ್ಲಿ ಆತಂಕ ತಂದಿದೆ. ಮುಂದಿನ ಬೇಸಿಗೆಯ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ಎದುರಾಗುವ ಸಾಧ್ಯತೆಯಿದ್ದು ಇದನ್ನು ನಿಭಾಯಿಸುವುದು ಹೇಗೆ ಎಂಬ ಭಯವೂ ಶುರುವಾಗಿದೆ.
ಇನ್ನೊಂದೆಡೆ ತಾಲೂಕಿನಲ್ಲಿ ನಾಲ್ಕು ಜಲಾಶಯಗಳಿದ್ದರೂ ತಾಲೂಕಿನ ಭಾಗಶಃ ರೈತರನ್ನು ಹೊರತುಪಡಿಸಿ ಹೆಚ್ಚಿನವರು ಮಳೆಯಾಶ್ರಿತ ಬೆಳೆಗಳ ಕೃಷಿ ಚಟುವಟಿಕೆಗೆ ಹೆಚ್ಚು ಆದ್ಯತೆ ನೀಡುತ್ತಾ ಬಂದಿದ್ದಾರೆ. ಆದರೆ ಈ ಬಾರಿ ಮಳೆಯಿಲ್ಲದ ಕಾರಣ ರೈತರು ನಷ್ಟ ಅನುಭವಿಸಿದ್ದಾರೆ. ಈ ನಡುವೆ ಕೆರೆಗಳಲ್ಲಿ ನೀರಿಲ್ಲದ ಕಾರಣ ಯಾವುದೇ ಬೆಳೆ ಬೆಳೆಯುವುದು ಸಾಧ್ಯವಾಗದ ಮಾತಾಗಿದೆ.
ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಈ ಬಾರಿ ಶೇ.86 ರಷ್ಟು ಮಳೆ ಕೊರತೆಯಾಗಿರುವ ಹಿನ್ನಲೆಯಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾದರೂ ಅಚ್ಚರಿಯಿಲ್ಲ. ಹೀಗಾಗಿ ಸಕಾಲದಲ್ಲಿ ಮಳೆಯಾಗಿ ಕೆರೆಗಳಲ್ಲಿ ಜೀವಕಳೆ ಬಂದರೆ ಜನಜೀವನ ಸಮೃದ್ಧಿಯಾಗಲು ಸಾಧ್ಯವಾಗಲಿದೆ.