ಮೈಸೂರು: ಜಿಲ್ಲೆಯ ಗಡಿ ತಾಲೂಕು ಕೇರಳಕ್ಕೆ ಹೊಂದಿಕೊಂಡಿರುವ ಮತ್ತು ಸಸ್ಯ ಸಂಪತ್ತಿನಿಂದ ಸಮೃದ್ಧವಾಗಿರುವ ಹೆಚ್.ಡಿ.ಕೋಟೆ ತಾಲೂಕು ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಇಲ್ಲಿರುವ ಕಬಿನಿ, ನುಗು, ತಾರಕ, ಹಬ್ಬಳ್ಳ ಜಲಾಶಯಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿರುವುದು ರೈತಾಪಿ ಜನರಲ್ಲಿ ಹರ್ಷ ಮೂಡಿಸಿದೆ.
ಆಷಾಢದ ಆರಂಭದಿಂದಲೇ ಜಿಟಿ ಜಿಟಿ ಮಳೆಯೊಂದಿಗೆ ಆಗೊಮ್ಮೆ ಈಗೊಮ್ಮೆ ಬಿರುಸು ಪಡೆದುಕೊಳ್ಳುತ್ತಿರುವ ಮಳೆ ಈ ಬಾರಿ ಉತ್ತಮವಾಗಿ ಸುರಿಯುವ ಲಕ್ಷಣ ಕಂಡು ಬರುತ್ತಿದೆ. ಕಳೆದ ವರ್ಷ ಹಿಂಗಾರು ಮಳೆ ಡಿಸೆಂಬರ್ ತನಕವೂ ಸುರಿದಿತ್ತು. ಹೀಗಾಗಿ ಕೆರೆಕಟ್ಟೆಗಳು ತುಂಬಿದ್ದವು. ಅಂತರ್ಜಲವೂ ಹೆಚ್ಚಾಗಿತ್ತು. ಹೀಗಾಗಿ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಂಡಿರಲಿಲ್ಲ.
ಈ ನಡುವೆ ಮೇ ತಿಂಗಳಲ್ಲಿ ವಾರಾನುಗಟ್ಟಲೆ ಸುರಿದ ಅಕಾಲಿಕ ಮಳೆಯೂ ಕೆರೆ ಕಟ್ಟೆಗಳಿಗೆ ನೀರು ಹರಿದು ಬರುವಂತೆ ಮಾಡಿತ್ತು. ಹೀಗಾಗಿ ಈ ಬಾರಿ ಮುಂಗಾರು ಆರಂಭದಲ್ಲಿಯೇ ಕೆರೆಕಟ್ಟೆಗಳು ಕೋಡಿ ಬೀಳುವ ಮತ್ತು ಜಲಾಶಯಗಳು ಬಹುಬೇಗ ಭರ್ತಿಯಾಗುವ ಸಾಧ್ಯತೆ ದಟ್ಟವಾಗಿದೆ.
ಕಳೆದ ಐದು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದ ಜಲಾಶಯ, ಕೆರೆಕಟ್ಟೆಗಳು ತುಂಬುತ್ತಿವೆ. ಐದು ವರ್ಷದ ಹಿಂದೆ ಕಬಿನಿ ಹೊರತು ಪಡಿಸಿದರೆ ಮತ್ತೆ ಯಾವ ಜಲಾಶಯಗಳು ಭರ್ತಿಯಾಗುತ್ತಿರಲಿಲ್ಲ. ಇದರಿಂದ ರೈತರು ಕೃಷಿ ಮಾಡಲು ತೊಂದರೆ ಪಡುವಂತಾಗಿತ್ತು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಜಲಮೂಲಗಳೆಲ್ಲವೂ ಭರ್ತಿಯಾಗುತ್ತಿದೆ.
ಬಹಳಷ್ಟು ವರ್ಷಗಳ ಕಾಲ ಮಳೆಯ ಕೊರತೆಯಿಂದಾಗಿ ಹೆಬ್ಬಳ್ಳ ಜಲಾಶಯ ಭರ್ತಿಯಾಗುತ್ತಿರಲಿಲ್ಲ. ಆದರೆ ಈ ಬಾರಿ ಈ ಬಾರಿ ಪೂರ್ವ ಮುಂಗಾರು ಆರ್ಭಟ ಮತ್ತು ಈಗ ಮುಂಗಾರು ಬಿರುಸು ಪಡೆದುಕೊಳ್ಳುತ್ತಿರುವುದರಿಂದಾಗಿ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದಿದೆ. ಇದರಿಂದ ಸುತ್ತಮುತ್ತಲಿನ ಕೆರೆಗಳು ಭರ್ತಿಯಾಗುತ್ತಿವೆ. ಇದರಿಂದ ತಾಲ್ಲೂಕಿನ ರೈತರು ಹರ್ಷಗೊಂಡಿದ್ದು, ಕೃಷಿ ಚಟುವಟಿಕೆಯತ್ತ ಹೆಚ್ಚಿನ ಆಸಕ್ತಿ ವಹಿಸುತ್ತಿರುವುದು ಕಂಡು ಬಂದಿದೆ.
ಮಳೆ ಸುರಿಯುತ್ತಿರುವ ಪರಿಣಾಮ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಹಚ್ಚ ಹಸಿರಿನಿಂದ ಶೃಂಗಾರಗೊಳ್ಳುತ್ತಿದೆ, ಪ್ರಾಣಿ ಸಂಕುಲ ಮಳೆಯಲ್ಲಿ ಮಿಂದೇಳುತ್ತಿವೆ. ಮುಂದಿನ ದಿನಗಳಲ್ಲಿ ಮಳೆ ಇದೇ ರೀತಿ ಸುರಿದರೆ, ವೈನಾಡಿನಲ್ಲಿ ಮಳೆ ತೀವ್ರತೆ ಹೆಚ್ಚಾಗಿ ನೀರು ಹರಿದು ಬಂದರೆ ಕಬಿನಿ ಜಲಾಶಯ ಭರ್ತಿಯಾಗುವುದರೊಂದಿಗೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಹೆಚ್ಚಾಗಿದೆ.