ಕೆ.ಆರ್.ಪೇಟೆ: ಉಳ್ಳವರು ಬಡವರಿಗೆ ಮತ್ತು ದೀನದಲಿತರಿಗೆ ನೊಂದವರಿಗೆ ಕೈಲಾದ ನೆರವು ನೀಡುವ ಮೂಲಕ ಸಾಮಾಜಿಕ ಕಳಕಳಿ ಕಾಳಜಿ ವಹಿಸಿದರೆ ದೇವರು ಮೆಚ್ಚುತ್ತಾನೆ ಎಂದು ಸಮಾಜ ಸೇವಕರಾದ ಅಲಂಬಾಡಿಕಾವಲು ಮಲ್ಲಿಕಾರ್ಜುನ್ ಅವರು ಅಭಿಪ್ರಾಯಪಟ್ಟರು.
ತಾಲೂಕಿನ ಕಸಬಾ ಹೋಬಳಿಯ ಬೊಮ್ಮೇನಹಳ್ಳಿ ಸಮೀಪವಿರುವ ಶ್ರೀ ಮುತ್ತುರಾಯಸ್ವಾಮಿ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ತೆಂಗಿನ ಗಿಡಗಳನ್ನು ನೆಟ್ಟು ನೀರುಣಿಸುವುದರ ಮೂಲಕ ಉದ್ಘಾಟಿಸಿ ನಂತರ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಎಲ್ಲಾ ಶ್ರೀಮಂತರಿಗೆ ದಾನ ಮಾಡುವ ಗುಣಗಳಿರುವುದಿಲ್ಲ. ಕೆಲವೇ ಮಂದಿಗೆ ದಾನ ಮಾಡುವಂತಹ ಹೃದಯ ಶ್ರೀಮಂತಿಕೆ ಇರುತ್ತದೆ. ದೇಶದಲ್ಲಿ ಇರುವ ಎಲ್ಲ ಶ್ರೀಮಂತರು ಬಡವರಿಗೆ ಸಹಾಯ ಮಾಡಿದರೆ ದೇಶದಲ್ಲಿನ ಬಡತನವನ್ನು ಹೋಗಲಾಡಿಸಬಹುದು. ಬಡವರಿಗೆ ದಾನಧರ್ಮ ಮಾಡುವುದರಿಂದ ಬಡವರ ಸೇವೆ ಭಗವಂತನ್ನು ಕಾಣಬಹುದು. ನಾನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಕೈಲಾದ ಸಮಾಜ ಸೇವೆಯನ್ನು ಮಾಡಿಕೊಂಡು ಬರುತ್ತಿದ್ದಾನೆ. ಕಷ್ಟದಲ್ಲಿರುವಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಮಳೆ ಅತಿವೃಷ್ಟಿಯಿಂದ ಮನೆ ಕಳೆದುಕೊಂಡವರಿಗೆ ನೆರವು. ಬಡ ಹೆಣ್ಣುಮಕ್ಕಳಿಗೆ ವಿವಾಹಕ್ಕೆ ಆರ್ಥಿಕ ನೆರವನ್ನು ಯಾವುದೇ ಪ್ರಚಾರವಿಲ್ಲದೇ ನೀಡುತ್ತಾ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ತಾಲೂಕಿನ ಜನರ ಸೇವೆ ಮಾಡುವ ಅವಕಾಶ ಸಿಕ್ಕಿದ್ದಲ್ಲಿ ಹೆಚ್ಚಿನ ರೀತಿಯಲ್ಲಿ ಸೇವೆ ಮಾಡಲು ಸದಾ ಸಿದ್ದನಾಗಿರುತ್ತೇನೆ. ಇದಕ್ಕೆ ತಮ್ಮಗಳ ಬೆಂಬಲ ಹಾಗೂ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಮಲ್ಲಿಕಾರ್ಜುನ್ ಜನರಲ್ಲಿ ಮನವಿ ಮಾಡಿದರು.
ತಾಲೂಕು ಜೆಡಿಎಸ್ ಯುವ ಮುಖಂಡ ಕೆ ಎನ್ ಕಿರಣ್ ಮಾತನಾಡಿ ಮಲ್ಲಿಕಾರ್ಜುನ್ ಅವರು ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿ ಅಲಂಬಾಡಿಕಾವಲು ಗ್ರಾಮದ ಸುಪುತ್ರರಾಗಿದ್ದು ತಾಲ್ಲೂಕಿನಲ್ಲಿ ಸಮಾಜ ಸೇವೆ ಮಾಡುವ ಹಂಬಲವನ್ನು ಹೊಂದಿದ್ದಾರೆ. ಈಗಾಗಲೇ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಇಂತಹ ಸಾಮಾಜಿಕ ಕಳಕಳಿಯುಳ್ಳವರು ಅಧಿಕವಾದರೆ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಮಾಜಿ ಸದಸ್ಯ, ಜೆಡಿಎಸ್ ಯುವ ಮುಖಂಡ ಕಿರಣ್(ಗುಂಡ), ಉದ್ಯಮಿ ಕೆ.ಸುರೇಶ್(ಪಿರಿಯಾಪಟ್ಟಣ), ಆಟೋ ಮಾಲಿಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ವಾಸುದೇವ್, ಶಶಿಧರ್, ಉಮೇಶ್, ಹರಿಹರಪುರ ಗ್ರಾ.ಪಂ.ಸದಸ್ಯೆ ಲತಾಹರೀಶ್, ಬೊಮ್ಮೇನಹಳ್ಳಿ ರಾಮಕೃಷ್ಣೇಗೌಡ, ನಾಗೇಶ್, ಬೋರೇಗೌಡ, ಪುಟ್ಟರಾಜು, ಹರಿಹರಪುರ ಅರುಣ್, ಮಡವಿನಕೋಡಿ ಉಮೇಶ್ ಸೇರಿದಂತೆ ಸಾವಿರಾರು ಜನರು ಉಪಸ್ಥಿತರಿದ್ದರು.