ಹುಣಸೂರು: ತಾಲೂಕಿನ ಮರೂರು ಗ್ರಾಮದ ಶ್ರೀ ಆಂಜನೇಯಸ್ವಾಮಿ ಮೀನುಗಾರರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಸರ್ವ ಸದಸ್ಯರು ಬಹಿಷ್ಕರಿಸಿ ಹೊರನಡೆದ ಘಟನೆ ನಡೆದಿದೆ.
ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಮರೂರು ಗ್ರಾಮದಲ್ಲಿ ವಾರ್ಷಿಕ ಮಹಾಸಭೆಗೆ ಸಹಕಾರ ಇಲಾಖೆಯ ಅಧಿಕಾರಿಗಳು ವಾರ್ಷಿಕ ಸಭೆಗೆ ಬಂದು ಮಾಹಿತಿ ನೀಡದೆ ಕೇವಲ ಆಡಳಿತ ಮಂಡಳಿ ಕಾರ್ಯದರ್ಶಿಗಳು ಸಭೆಯನ್ನು ಮಾಡುತ್ತಿರುವುದನ್ನು ವಿರೋಧಿಸಿ ಸಭೆ ಬಹಿಷ್ಕರಿಸಿದರೆ ಕೆಲವು ಸದಸ್ಯರು ನಮಗೆ ವಾರ್ಷಿಕ ಸಭೆಗೆ ಆಹ್ವಾನ ಪತ್ರಿಕೆ ನೀಡಿಲ್ಲ ಜೊತೆಗೆ ಅಹ್ವಾನ ಪತ್ರಿಕೆಯಲ್ಲಿ ಸಂಪೂರ್ಣವಾದ ಲೆಕ್ಕಪರಿಶೋಧಕರವರದಿ (ಆಡಿಟ್ ರಿಪೋರ್ಟ್) ಮಾಹಿತಿ ಇಲ್ಲದೆ ಕೇವಲ ಆಡಳಿತ ಮಂಡಳಿಯ ಹೆಸರು ಹಾಗೂ ಸಹಕಾರ ಇಲಾಖೆ ಅಧಿಕಾರಿಗಳ ಹೆಸರನ್ನು ನಮೂದಿಸಿ ಆಹ್ವಾನ ಪತ್ರಿಕೆ ನೀಡಿದ್ದಾರೆ ಎಂದು ದೂರಿದ್ದಾರೆ.
ಇದರಲ್ಲಿ ಮಾಹಿತಿ ಕೊರತೆಯಿದೆ ಇದಲ್ಲದೆ ಸಂಘದಲ್ಲಿ ಇದುವರೆಗೂ ಯಾವುದೇ ಸೌಲಭ್ಯಗಳನ್ನು ಷೇರುದಾರರಿಗೆ ನೀಡಿಲ್ಲ ಜೊತೆಗೆ ಎಷ್ಟು ಲಾಭಾಂಶ ಗಳಿಸಿದೆ ಎಂಬ ಮಾಹಿತಿಯನ್ನು ನೀಡಿಲ್ಲ. ಸದ್ಯಸರಿಗೆ 7 ದಿನ ಮುಂಚಿತವಾಗಿ ಆಹ್ವಾನ ಪತ್ರಿಕೆ ನೀಡಬೇಕಾಗಿತ್ತು. ಆದರೆ 2-3 ದಿನ ಸಭೆ ಇರುವಾಗ ಆಹ್ವಾನ ಪತ್ರಿಕೆ ನೀಡಿದ್ದಾರೆ. ಜೊತೆಗೆ ಸಭೆಯ ಪ್ರಾರಂಭದಲ್ಲಿ ಸರ್ವಸದಸ್ಯರ ಸಹಿ ಮಾಡಿಸಿಕೊಳ್ಳಲು ಕಾರ್ಯದರ್ಶಿ ಪ್ರಯತ್ನಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.