ಹುಣಸೂರು: ಗಾವಡಗೆರೆ ಹೋಬಳಿಯಾದ್ಯಂತ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ನೀರು ರೈತರ ಜಮೀನಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ.
ಈಗಾಗಲೇ ಮಳೆಯಿಂದ ಕೆರೆಕಟ್ಟೆಗಳು ತುಂಬಿದ್ದು ಕೆಲವು ಗ್ರಾಮಗಳ ಕೆರೆ ಕೋಡಿ ಒಡೆದು ನೀರು ಜಮೀನಿಗೆ ನುಗ್ಗಿದೆ. ಜಾಬಗೆರೆ ಗ್ರಾಮದ ಮುದ್ದೆ ಗೌಡನ ಕೆರೆ ಕೋಡಿ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ ಯಲ್ಲದೆ? ಮನುಗನಹಳ್ಳಿ, ಕಟ್ಟೆಮಳಲವಾಡಿಯ ಗ್ರಾಮದ ಕೆರೆಯ ಕೋಡಿ ಒಡೆದು ಹೋಗಿ ಅಪಾರ ನಷ್ಟ ಸಂಭವಿಸಿದೆ.
ಕಂತೆ ಗೌಡನ ಕೊಪ್ಪಲು ಗ್ರಾಮದ ರೈತನ ಹಸು ಜಾರಿಬಿದ್ದು ಕಾಲು ಮುರಿದು ಹೋಗಿದ್ದರೆ, ಗಾವಡಗೆರೆ ವ್ಯಾಪ್ತಿಯ ಉಂಡವಾಡಿ, ಮುಳ್ಳೂರು, ಜಾಬಗೆರೆ, ಹಿರೀಕ್ಯಾತನಹಳ್ಳಿ, ತೊಂಡಾಳು, ಸೇರಿದಂತೆ 15ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ.
ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ ಕೊಳ್ಳದ ಪ್ರದೇಶದ ಜಮೀನಿನಲ್ಲಿ ನಾಟಿ ಮಾಡಿದ ತಂಬಾಕು ಸಂಪೂರ್ಣ ಜಲಾವೃತವಾಗಿ ನಾಟಿ ಮಾಡಿ ಗೊಬ್ಬರ ಹಾಕಿದ ಸಸಿಗಳು ಕೊಳೆತು ಹೋಗಿವೆ. ಇದರ ಜತೆಗೆ ರೈತ ಬೆಳೆದ ಟೊಮ್ಯಾಟೊ, ಹೂಕೋಸು, ಕುಂಬಳ ನೀರಿನಲ್ಲಿ ಕೊಳೆಯುತ್ತಿವೆ. ಇನ್ನೊಂದೆಡೆ ತಗ್ಗು ಪ್ರದೇಶಕ್ಕೆ ನೀರು ನುಗ್ಗಿದ್ದರಿಂದ ಜಮೀನು ಕೆರೆಯಂತಾಗಿದೆ.
ವಿಪರೀತ ಮಳೆಯಿಂದಾಗಿ ರೈತರಿಗೆ ನಷ್ಟವಾಗಿರುವ ಬೆಳೆ ಬಗ್ಗೆ ಸಮೀಕ್ಷೆ ನಡೆಸಿ ನಂತರ ಕಂತೆಗೌಡನಕೊಪ್ಪಲು ಗ್ರಾಮದ ರೈತನ ಹಸು ಕಾಲು ಮುರಿದ ಸ್ಥಳಕ್ಕೆ ಶಾಸಕ ಎಚ್ ಪಿ ಮಂಜುನಾಥ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ರೈತರ ಕಷ್ಟ ಆಲಿಸಿದರು. ಹಲವು ಗ್ರಾಮಗಳಿಗೆ ಉಪ ತಹಸಿಲ್ದಾರ್ ವೆಂಕಟೇಶ್ ಹಾಗೂ ವಿವಿಧ ಗ್ರಾಮಗಳಿಗೆ ಗ್ರಾಮ ಲೆಕ್ಕಿಗರು ಭೇಟಿ ನೀಡಿ ಗ್ರಾಮಗಳಲ್ಲಿ ಆಗಿರುವ ಮನೆ ಹಾನಿ ಹಾಗೂ ಬೆಳೆ ಬಗ್ಗೆ ರೈತರಿಂದ ಮಾಹಿತಿ ಪಡೆದುಕೊಂಡಿದ್ದಾರೆ.