ಹುಣಸೂರು: ರಸ್ತೆ ಬದಿಯಲ್ಲಿ ಕಟ್ಟಿದ್ದ ಎತ್ತುಗಳ ಮೇಲೆ ಖಾಸಗಿ ಶಾಲಾ ವಾಹನ ಹರಿದ ಪರಿಣಾಮ ಒಂದು ಎತ್ತು ಸ್ಥಳದಲ್ಲಿಯೇ ಮೃತಪಟ್ಟು ಮತ್ತೊಂದು ಎತ್ತು ಗಂಭೀರ ಗಾಯಗೊಂಡಿರುವ ಘಟನೆ ಸಣ್ಣೇನಹಳ್ಳಿ ಗ್ರಾಮದ ನಡೆದಿದೆ.
ಹುಣಸೂರು ತಾಲೂಕು ಸಣ್ಣೇನಹಳ್ಳಿ ಗ್ರಾಮದ ದ್ಯಾವಪ್ಪ ಎಂಬುವರಿಗೆ ಸೇರಿದ ಜೋಡಿ ಎತ್ತುಗಳ ಮೇಲೆ ವಾಹನ ಹರಿದಿದ್ದು, ಎತ್ತುಗಳನ್ನು ಕಳೆದುಕೊಂಡ ಅವರು ಆತಂಕಗೊಂಡಿದ್ದಾರೆ.
ದ್ಯಾವಪ್ಪ ಅವರು, ಎಂದಿನಂತೆ ಮನೆಯ ಮುಂದಿನ ರಸ್ತೆ ಬದಿಯಲ್ಲಿ ಎತ್ತುಗಳನ್ನು ಕಟ್ಟಿ ಹಾಕಿದ್ದರು. ಹುಣಸೂರು ನಗರದ ನ್ಯೂಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ನ ಖಾಸಗಿ ಶಾಲಾ ವಾಹನ ಈ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಚಾಲಕ ಬಳಿಗೆ ಬಾವುಲಿ ನುಗ್ಗಿದ್ದು ಈ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಬದಿಯಲ್ಲಿ ಕಟ್ಟಿ ಹಾಕಿದ್ದ ಎತ್ತುಗಳ ಮೇಲೆ ಹರಿದಿದೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.