ಹುಲ್ಲಹಳ್ಳಿ: ಕುಟುಂಬ ಕಲಹದ ಹಿನ್ನಲೆಯಲ್ಲಿ ವ್ಯಕ್ತಿಯೋರ್ವನ ಸಾವಿಗೆ ಕಾರಣನಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹುಲ್ಲಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹದೇವಸ್ವಾಮಿ ಅಲಿಯಾಸ್ ಜೀಪ್ ಕುಳ್ಳ ಬಂಧಿತ ಆರೋಪಿ. ಈತ ಪೊಲೀಸರು ತನ್ನನ್ನು ಬಂಧಿಸುತ್ತಾರೆ ಎಂದು ಹೆದರಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ವೇಳೆ ಪೊಲೀಸರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಚೇತರಿಸಿಕೊಂಡ ನಂತರ ಬಂಧಿಸಿದ್ದಾರೆ.
ಘಟನೆ ವಿವರ: ಮಹದೇವಸ್ವಾಮಿ ಅಲಿಯಾಸ್ ಜೀಪ್ ಕುಳ್ಳ ಜವರನಾಯಕ ಎಂಬಾತನೊಂದಿಗೆ ಪಾರ್ಟಿ ಮಾಡಿ ಹಳೆ ವಿಷಯ ವಿಚಾರದಲ್ಲಿ ಕ್ಯಾತೆ ತೆಗೆದು ಗಲಾಟೆ ಮಾಡಿ ಇಬ್ಬರು ಬಾರ್ನಿಂದ ಹೊರಬಂದ ನಂತರ ಮಹದೇವಸ್ವಾಮಿ, ಜವರನಾಯಕನಿಗೆ ಕಲ್ಲಿನಿಂದ ಹೊಡೆದಿದ್ದನು. ಪರಿಣಾಮ ಜವರನಾಯಕ ತೀವ್ರ ರಕ್ತ ಸ್ರಾವದಿಂದ ಕೆಳಬಿದ್ದಿದ್ದನು. ಆ ನಂತರ ಆತ ಸತ್ತಿದ್ದಾನೆ ಎಂದು ಭಾವಿಸಿ ಜವರನಾಯಕನ್ನು ವಾಟರ್ ಟ್ಯಾಂಕ್ ಬಳಿ ತಂದು ಹಾಕಿದ್ದಾನೆ.
ಹುಲ್ಲಹಳ್ಳಿಯ ಬಾರ್ ಮತ್ತು ರೆಸ್ಟೋರೆಂಟ್ ಬಳಿ ಇರುವ ವಾಟರ್ ಟ್ಯಾಂಕ್ ಬಳಿ ಜವರನಾಯಕ ತೀವ್ರವಾಗಿ ಗಾಯಗೊಂಡ ಸ್ಥಿತಿಯಲ್ಲ ಕಂಡು ಬಂದಿದ್ದು ಹುಲ್ಲಹಳ್ಳಿ ಪೊಲೀಸರು ಜವರನಾಯಕನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರಾದರೂ ಜವರನಾಯಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಹುಲ್ಲಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದರು.
ತನ್ನ ಮೇಲೆ ಅನುಮಾನ ಬಂದಿರುವುದನ್ನು ಮನಗಂಡ ಮಹದೇವಸ್ವಾಮಿ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಎಸ್.ಪಿ.ಚೇತನ್ ಮಾರ್ಗದರ್ಶದಲ್ಲಿ ಡಿವೈಎಸ್ಪಿ ಗೋವಿಂದರಾಜ್, ವೃತ್ತ ನಿರೀಕ್ಷಕ ಲಕ್ಷ್ಮಿಕಾಂತ್ ತಳವಾರ್, ನೇತೃತ್ವದಲ್ಲಿ ತನಿಖೆ ಕೈಗೊಂಡು ಹುಲ್ಲಹಳ್ಳಿ ಠಾಣಾ ಪಿಎಸ್.ಐ ಮಹೇಶ್ ಕುಮಾರ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.