ಕಾಸರಗೋಡು: ಅಗ್ನಿಪಥ್ ಯೋಜನೆಯನ್ನು ಹಿಂಪಡೆಯಬೇಕು. ರಾಹುಲ್ ಗಾಂಧಿರವರ ಕಚೇರಿ ಮೇಲೆ ದಾಳಿ ನಡೆಸಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು, ಕೇಂದ್ರ – ರಾಜ್ಯ ಸರಕಾರಗಳ ದುರಾಡಳಿತ ಕೊನೆಗೊಳಿಸಬೇಕು ಎಂದು ಒತ್ತಾಯಿಸಿ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿ ತ್ತಾನ್ ಸೋಮವಾರ ಕಾಸರಗೋಡು ಪ್ರಧಾನ ಅಂಚೆ ಕಚೇರಿ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು.
ಬಫರ್ ಝೋನ್ ಕುರಿತು ಎಸ್ ಆಫ್ ಐ ಪ್ರತಿಭಟನೆ ನಡೆಸಬೇಕಾಗಿರುವುದು ರಾಹುಲ್ ಗಾಂಧಿರವರ ಕಚೇರಿಗಲ್ಲ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರ ಕಚೇರಿಗೆ ನಡೆಸಲಿ ಎಂದು ಹೇಳಿದ ಅವರು, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರಕಾರ ಅಗ್ನಿಪಥ್ ಯೋಜನೆಯನ್ನು ಹಿಂದಕ್ಕೆ ಪಡೆಯಬೇಕು. ಎಲ್ಲಾ ವಲಯವನ್ನು ಕೇಸರಿಕರಣಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಕೆ ಫೈಸಲ್ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ವಿನೋದ್ ಕುಮಾರ್ , ಮಾಜಿ ಶಾಸಕ ಕೆ .ಪಿ ಕು೦ಞ ಕಣ್ಣನ್, ಮಾಜಿ ಸಚಿವ ಸಿ.ಟಿ ಅಹಮ್ಮದಾಲಿ, ಹರೀಶ್ ಬಿ. ನಂಬ್ಯಾರ್ , ಕೆ. ನೀಲಕಂಠನ್ , ಎಂ. ಹಸೈನಾರ್, ಕೆ. ಕೃಷ್ಣನ್, ಶಾಂತಮ್ಮ ಫಿಲಿಪ್, ಮೀನಾಕ್ಷಿ ಬಾಲಕೃಷ್ಣನ್, ಧನ್ಯಾ ಸುರೇಶ್, ಸೋಮಶೇಖರ ಶೇಣಿ, ಸುಂದರ ಆರಿಕ್ಕಾಡಿ, ಜೋಮೋನ್ ಜೋಸ್ ಮೊದಲಾದವರು ಉಪಸ್ಥಿತರಿದ್ದರು.