ಪಿರಿಯಾಪಟ್ಟಣ: ತಾಲೂಕಿನ ತೆಲಗಿನಕುಪ್ಪೆ ಗ್ರಾಮದ ಮರಕಟ್ಟೆ ಕೆರೆಯ ಸೋಪಾನ ಕಟ್ಟೆ ಒಡೆದು ಅಪಾರ ಪ್ರಮಾಣದ ನೀರು ಹೊರ ಹೋಗುತ್ತಿರುವುದಕ್ಕೆ ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಐದಾರು ತಿಂಗಳ ಹಿಂದಷ್ಟೇ ಅಭಿವೃದ್ಧಿಯಾಗಿದ್ದ ತೆಲಗಿನಕುಪ್ಪೆ ಗ್ರಾಮದ ಮರಕಟ್ಟೆ ಕೆರೆಯ ಸೋಪಾನ ಕಟ್ಟೆ ಒಡೆದು ಅಪಾರ ಪ್ರಮಾಣದ ನೀರು ಹೊರಹೋಗುತ್ತಿರುವುದರಿಂದ ಕೆರೆ ಏರಿ ಒಡೆದು ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗುವ ಆತಂಕವಿದೆ ಎಂದು ಗ್ರಾಮದ ಮುಖಂಡರಾದ ಟಿ.ಆರ್ ಕಿರಣ್, ಶರತ್, ಅನಿಲ್, ಮಂಜುನಾಥ್, ನಟರಾಜ್, ಮನು, ಕೃಷ್ಣ, ಈಶ್ವರ್, ಶಿವಲಿಂಗ ಅವರು ಆಕ್ರೋಶ ವ್ಯಕ್ತಪಡಿಸಿ ಕಾಮಗಾರಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಯುವ ಮುಖಂಡ ಅನಿಲ್ ಅವರು ಮಾತನಾಡಿ ಕೆರೆಯಲ್ಲಿ ಮೀನುಗಾರಿಕೆ ಮಾಡುವ ಸಂಬಂಧ ಹರಾಜಿನಲ್ಲಿ ಅಧಿಕ ಮೊತ್ತಕ್ಕೆ ಬಿಡ್ ಮಾಡಿದ್ದೇನೆ, ಸೋಪಾನಕಟ್ಟೆ ಕಳಪೆ ಕಾಮಗಾರಿಯಿಂದ ನೀರು ಪೋಲಾಗುತ್ತಿರುವುದರಿಂದ ನಮ್ಮ ಆದಾಯಕ್ಕೆ ನಷ್ಟ ಉಂಟಾಗುವ ಸಂಭವವಿದೆ, ಕೆರೆ ಏರಿ ಅಭಿವೃದ್ಧಿಪಡಿಸಿದ ಗುತ್ತಿಗೆದಾರರಿಗೆ ಕರೆ ಮಾಡಿ ಸಮಸ್ಯೆ ಬಗ್ಗೆ ಹೇಳಿದರೆ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಮತ್ತೋರ್ವ ಗ್ರಾಮಸ್ಥ ಕಿರಣ್ ಅವರು ಮಾತನಾಡಿ ಕೆರೆ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿರುವುದರಿಂದ ಸಮಸ್ಯೆ ಉಂಟಾಗಿದ್ದು ಶೀಘ್ರ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಿ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿದ್ದಾರೆ.
ಜಿ.ಪಂ ಎಇಇ ಹರ್ಷದ್ ಪಾಷಾ, ತೆಲಗಿನಕುಪ್ಪೆ ಗ್ರಾಮದ ಮರಕಟ್ಟೆ ಕೆರೆ ಅಭಿವೃದ್ಧಿ ಸಮಸ್ಯೆ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಸೋಪಾನಕಟ್ಟೆ ಕಾಮಗಾರಿ ಸ್ಥಳಿಯ ಗ್ರಾ.ಪಂ ವತಿಯಿಂದ ನರೇಗಾ ಯೋಜನೆಯಡಿ ನಿರ್ಮಿಸಲಾಗಿದೆ. ಕೆರೆ ಏರಿ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿರುವುದಾಗಿ ಗ್ರಾಮಸ್ಥರು ದೂರಿದ್ದ, ಕೆರೆ ನೀರು ಹೆಚ್ಚು ಪೋಲಾಗಿ ರೈತರಿಗೆ ತೊಂದರೆಯಾಗದಂತೆ ಶೀಘ್ರ ಅಗತ್ಯ ಕ್ರಮ ಕೈಗೊಂಡು ಸಮಸ್ಯೆ ಬಗೆಹರಿಸಲಾಗುವುದು ಎಂದರು.