ಮೈಸೂರು: ಸಂಸತ್ ಭವನದ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮನೋರಂಜನ್ ಮನೆಗೆ ಭೇಟಿ ನೀಡಿದ ದೆಹಲಿ ವಿಶೇಷ ತನಿಖಾ ತಂಡದ ಪೊಲೀಸರು ಪರಿಶೀಲನೆ ನಡೆಸಿ ಮನೆಯವರನ್ನು ತೀವ್ರ ವಿಚಾರಣೆ ನಡೆಸಿದ್ದಾರೆ.
ಮೈಸೂರಿನ ವಿಜಯನಗರ ಎರಡನೇ ಹಂತದಲ್ಲಿರುವ ಮನೆಗೆ ಆಗಮಿಸಿದ ಇಂಟಲಿಜನ್ಸ್ ಬ್ಯೂರೋ ವಿಭಾಗದ ಇಬ್ಬರು ಹಾಗೂ ಇಬ್ಬರು ದೆಹಲಿ ಪೊಲೀಸರು ಹಾಗೂ ಮಹಿಳಾ ಸಿಬ್ಬಂದಿಯನ್ನು ಒಳಗೊಂಡ ತನಿಖಾ ತಂಡ ಮನೋರಂಜನ್ ಕೊಠಡಿ ತೆರೆದು ತಪಾಸಣೆ ಮಾಡಿದರು. ನಂತರ ಮನೋರಂಜನ್ ಕುಟುಂಬಸ್ಥರನ್ನು ತೀವ್ರ ವಿಚಾರಣೆಗೊಳಪಡಿಸಿದರು. ದೆಹಲಿಯ ಸ್ಪೆಷಲ್ ಸೆಲ್ ಪೊಲೀಸರು ವಿಚಾರಣೆ ನಡೆಸಿದ್ದು, ಮೊದಲೇ ಪ್ರಶ್ನೆಗಳನ್ನು ಸಿದ್ದಪಡಿಸಿಕೊಂಡು ಬಂದಿದ್ದು, ಅದರನ್ವಯ ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
ತನಿಖಾ ತಂಡಕ್ಕೆ ಭಾಷೆಯ ತೊಡಕು ಹಿನ್ನೆಲೆಯಲ್ಲಿ ಸ್ಥಳೀಯ ಭಾಷಾಂತರಕಾರರನ್ನು ಕೂರಿಸಿಕೊಂಡು ಕುಟುಂಬಸ್ಥರಿಗೆ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಸಾಗರ್ ಶರ್ಮ ಪರಿಚಯ ನಿಮಗಿದಿಯಾ. ಎಷ್ಟು ದಿನಗಳ ಹಿಂದೆ ಸಾಗರ್ ಶರ್ಮ ಬಂದಿದ್ದ. ಸಾಗರ್ ಶರ್ಮನನ್ನು ಮನೋರಂಜನ್ ಏನೆಂದು ಪರಿಚಯಿಸಿದ್ದ. ಸಾಗರ್ ಶರ್ಮ ಒಬ್ಬನೇ ಬಂದಿದ್ದನಾ ಜತೆಗೆ ಇನ್ಯಾರು ಬಂದಿದ್ದರು. ಇಂಜಿನಿಯರಿಂಗ್ ಏತಕ್ಕಾಗಿ ಅರ್ಧಕ್ಕೆ ನಿಲ್ಲಿಸಿದ. ಕೆಲಸ ಮಾಡದಿದ್ದ ಮೇಲೆ ಅವನಿಗೆ ಹಣ ಎಲ್ಲಿಂದ ಬರುತಿತ್ತು ನೀವು ಮನೋರಂಜನ್ಗೆ ಏನನ್ನು ಪ್ರಶ್ನೆ ಮಾಡುತ್ತಿರಲಿಲ್ಲವೆ ಎಂಬುದು ಸೇರಿದಂತೆ ಒಂದರ ಮೇಲೊಂದು ಪ್ರಶ್ನೆಯನ್ನು ವಿಶೇಷ ತನಿಖಾ ತಂಡ ಮನೋರಂಜನ್ ಕುಟುಂಬಸ್ಥರನ್ನು ಕೇಳಿದೆ ಎನ್ನಲಾಗಿದೆ.
ಮನೋರಂಜನ್ ತಂದೆ ದೇವರಾಜೇಗೌಡ ಅವರು ತೋಟದ ಮನೆಗೆ ತೆರಳಿದ್ದರಿಂದ ತಾಯಿ ಶೈಲಜಾ ಅವರನ್ನು ತನಿಖಾ ತಂಡ ವಿಚಾರಣೆಗೊಳಪಡಿಸಿತು. ತಾಯಿ ಶೈಲಜಾ ವಿಚಾರಣೆ ನಂತರ ಮನೋರಂಜನ್ ಕೊಠಡಿ ತೆರೆದು ಅಧಿಕಾರಿಗಳು ತಪಾಸಣೆ ಮಾಡಿದರು. ದೆಹಲಿಯಿಂದ ಬಂದ ತನಿಖಾ ತಂಡದ ಅಧಿಕಾರಿಗಳಿಗೆ ಮೈಸೂರಿನ ವಿಜಯನಗರ ಪೊಲೀಸರು ಸಾಥ್ ನೀಡಿದರು.
ಈ ನಡುವೆ ತನಿಖೆ ತೀವ್ರಗೊಳಿಸಿರುವ ಗುಪ್ತಚರ ಇಲಾಖೆಯ ಅಧಿಕಾರಿಗಳು, ಮನೋರಂಜನ್ ಬ್ಯಾಂಕ್ ಖಾತೆ, ಆತನ ಪೋನ್ಗೆ ಬಂದ ಕಾಲ್ ಡಿಟೇಲ್ಸ್ ಹಾಗೂ ಮತ್ತೊಬ್ಬ ಆರೋಪಿ ಸಾಗರ್ ಶರ್ಮಾ ಮೈಸೂರಿನಲ್ಲಿ ಎಲ್ಲೆಲ್ಲಿ ಓಡಾಡಿದ್ದ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಮೈಸೂರಿನಲ್ಲಿ ಬೀಡುಬಿಟ್ಟಿರುವ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಹಾಗೂ ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಮನೋರಂಜನ್ ಹಾಗೂ ಆತನ ಕುಟುಂಬದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.