News Karnataka Kannada
Tuesday, April 30 2024
ಚಾಮರಾಜನಗರ

ಕೊರೋನಾ: ಗುಂಡ್ಲುಪೇಟೆ ಗಡಿಯಲ್ಲಿ ನಿರ್ಲಕ್ಷ್ಯದ ಆರೋಪ

ಕೇರಳದಲ್ಲಿ ಕರೋನಾ ಹಾಗೂ ಹೊಸ ಸೋಂಕು ಪತ್ತೆಯಾಗಿದ್ದರೂ ಜಿಲ್ಲಾಡಳಿತ ತಾಲೂಕಿನ ಗಡಿಯಲ್ಲಿ ಸೋಂಕು ತಡೆಗಟ್ಟಲು ಯಾವುದೇ ಮುನ್ನೆಚ್ಚರಿಕೆ ಕೈಗೊಳ್ಳದೆ ನಿರ್ಲಕ್ಷ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Photo Credit : By Author

ಗುಂಡ್ಲುಪೇಟೆ: ಕೇರಳದಲ್ಲಿ ಕರೋನಾ ಹಾಗೂ ಹೊಸ ಸೋಂಕು ಪತ್ತೆಯಾಗಿದ್ದರೂ ಜಿಲ್ಲಾಡಳಿತ ತಾಲೂಕಿನ ಗಡಿಯಲ್ಲಿ ಸೋಂಕು ತಡೆಗಟ್ಟಲು ಯಾವುದೇ ಮುನ್ನೆಚ್ಚರಿಕೆ ಕೈಗೊಳ್ಳದೆ ನಿರ್ಲಕ್ಷ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಕೊರೋನಾ ಕಡಿಮೆಯಾಗಿತ್ತು. ಹೀಗಾಗಿ ಅದರ ಬಗ್ಗೆ ಜನ ಕೂಡ ಮರೆತು ನೆಮ್ಮದಿಯಾಗಿದ್ದರು, ಆದರೆ ಇದೀಗ ಕೊರೋನಾ ವೈರಸ್ ಹೊಸ ರೂಪದೊಂದಿಗೆ ಮತ್ತೆ ಶೀಘ್ರಗತಿಯಲ್ಲಿ ಹರಡಲು ಆರಂಭಿಸಿರುವುದು ಜನ ಬೆಚ್ಚಿ ಬೀಳುವಂತೆ ಮಾಡಿದೆ. ಅದರಲ್ಲೂ ಕೇರಳದಲ್ಲಿ ಸೋಂಕು ಹೆಚ್ಚಳವಾಗುತ್ತಿರುವುದರಿಂದ ಗಡಿಹಂಚಿಕೊಂಡಿರುವ ಜಿಲ್ಲೆಯ ಜನ ಎಚ್ಚರವಾಗಿರುವಂತೆ ಸೂಚಿಸಲಾಗಿದೆ ಆದರೆ ಗಡಿಯಲ್ಲಿ ಯಾವುದೇ ರೀತಿಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈಗಾಗಲೇ ಕೊರೋನಾ ಅಲೆ ತೀವ್ರವಾಗಿ ಇಡೀ ಜಗತ್ತೇ ಅದರಿಂದ ತಲ್ಲಣವಾಗಿದೆ. ಅಲ್ಲದೆ ಕೊರೋನಾ ಬಳಿಕ ರೂಪಾಂತರ ತಳಿಗಳು ಬಂದು ಹೋಗಿದ್ದು ಎಲ್ಲ ಸಂಕಷ್ಟವನ್ನು ಜನರು ಎದುರಿಸಿದ್ದಾರೆ. ಆದರೆ ಈಗ ಮತ್ತೆ ರೂಪ ಬದಲಿಸಿ ಆರ್ಭಟಿಸಲು ಆರಂಭಿಸಿದ್ದು, ಓಮಿಕ್ರಾನ್‌ನ ಉಪ ತಳಿಯಾದ ಜೆಎನ್.1 ಆತಂಕವನ್ನು ಹುಟ್ಟುಹಾಕಿದೆ. ಈಗಾಗಲೇ ಕೊರೋನಾ ಹೊಡೆತದಿಂದ ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿಯೇ ಮತ್ತೆ ಸೋಂಕು ಕಾಣಿಸಿಕೊಂಡಿರುವುದರಿಂದ ಆತಂಕ ಸೃಷ್ಟಿಯಾಗಿದೆ.

ದೇಶದಲ್ಲಿ ಪ್ರಕರಣ ನಿಧಾನವಾಗಿ ಹೆಚ್ಚಳವಾಗುತ್ತಿದೆ. ಅದರಲ್ಲೂ ದೇವರನಾಡು ಕೇರಳದಲ್ಲಿ ಕೊರೋನಾ ತೀವ್ರಗತಿಗೆ ಹೋಗುತ್ತಿರುವುದು ಗಡಿ ಹಂಚಿಕೊಂಡಿರುವ ಚಾಮರಾಜನಗರ ಜಿಲ್ಲೆಯ ಜನರನ್ನು ಭಯಭೀತರನ್ನಾಗಿಸಿದೆ. ಪ್ರತಿದಿನವೂ ಕೇರಳದೊಂದಿಗೆ ಸಂಪರ್ಕ ಹೊಂದಿರುವ ಜಿಲ್ಲೆಯ ಜನ ಭಯದಲ್ಲಿ ಜೀವನ ಮಾಡುವಂತಾಗಿದೆ. ಜಿಲ್ಲೆಯ ಜನ ಕೇರಳಕ್ಕೂ ಕೇರಳದ ಜನ ಜಿಲ್ಲೆಗೂ ಬಂದು ಹೊಗುವುದರಿಂದ ಸೋಂಕು ಹರಡಬಹುದು ಎಂಬ ಆತಂಕದಲ್ಲಿ ಜನರಿದ್ದಾರೆ.

ಇನ್ನು ಗುಂಡ್ಲುಪೇಟೆ ತಾಲೂಕು ಕೇರಳದೊಂದಿಗೆ ಗಡಿ ಹಂಚಿಕೊಂಡಿರುವುದರಿಂದ ಒಂದು ವೇಳೆ ಸೋಂಕಿತರು ಪತ್ತೆಯಾದರೆ ಅವರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಮೀಸಲಿರಿಸಿಲ್ಲದಿರುವುದು ಕಂಡು ಬಂದಿದೆ, ಪ್ರತಿ ದಿನವೂ ಸಾವಿರಾರು ಜನರು ತಾಲೂಕಿನಿಂದ ನೆರೆಯ ಕೇರಳ ಹಾಗೂ ತಮಿಳುನಾಡು

ಗಳಿಗೆ ತಮ್ಮ ಕೆಲಸಕಾರ್ಯಗಳಿಗೆ ಹೋಗಿ ಬರುತ್ತಿದ್ದಾರೆ. ಕಳೆದ ತಿಂಗಳಿನಿಂದಲೂ ತಾಲೂಕಿನ ನಾನಾ ಗ್ರಾಮಗಳ ಸಾವಿರಾರು ಭಕ್ತರು ಶಬರಿಮಲೆ ಯಾತ್ರೆ ಕೈಗೊಂಡಿದ್ದಾರೆ. ಗ್ರಾಮಾಂತರ ಪ್ರದೇಶಗಳ ಯಾತ್ರಾರ್ಥಿಗಳು ಶಬರಿ ಮಲೆ ಯಾತ್ರೆಗೆ ಹೋಗುತ್ತಿದ್ದು ಯಾತ್ರೆ ಮುಗಿದ ನಂತರ ತಮ್ಮ ತಮ್ಮ ಊರುಗಳಿಗೆ ಹೋಗುತ್ತಿದ್ದಾರೆ.

ಜಿಲ್ಲಾಡಳಿತ ಗಡಿಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲದಿರುವುದರಿಂದ ಸೋಂಕು ವ್ಯಾಪಕವಾಗಿ ಹರಡುವ ಭೀತಿ ಎದುರಾಗಿದೆ. ಕಳೆದ ಬಾರಿಯೂ ಜಿಲ್ಲಾಡಳಿತದ ನಿರ್ಲಕ್ಷದಿಂದ ಕೇರಳ ಮೂಲಕವೇ ಕೊರೋನಾ ವ್ಯಾಪಿಸಿದ್ದರಿಂದ ಪರಿತಪಿಸುವಂತಾಗಿತ್ತು ಎಂದು ತಾಲೂಕಿನ ಜನತೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಗಡಿ ಚೆಕ್ ಪೋಸ್ಟ್ ಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ನಿಯೋಜಿಸಿ ಸೋಂಕಿತರ ಪತ್ತೆಗೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿರುವ ಡಿಹೆಚ್ ಓ ಡಾ.ಚಿದಂಬರ್ ಅವರು ಆರೋಗ್ಯ ಸಚಿವರ ನೇತೃತ್ವದಲ್ಲಿ ಡಿ.19 ರಂದು ಸಭೆ ಕರೆಯಲಾಗಿದ್ದು ಅಲ್ಲಿಯ ತೀರ್ಮಾನ ನಂತರ ಕ್ರಮಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು