ಹುಣಸೂರು: ಕ್ಯಾಂಟರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ದಂಪತಿ ಸಾವನ್ನಪ್ಪಿದ ಘಟನೆ ಪಟ್ಟಣದ ಕನಕ ಭವನದ ಎದುರಿನ ಹುಣಸೂರು – ಮೈಸೂರು ಮುಖ್ಯ ರಸ್ತೆಯಲ್ಲಿ ನಡೆದಿದೆ.
ಹುಣಸೂರು ನಗರದ ಮಂಜುನಾಥ ಬಡಾವಣೆಯ ನಿವಾಸಿ ನಿವೃತ್ತ ಪೋಸ್ಟ್ ಮ್ಯಾನ್ ರಾಜು (64) ಮತ್ತು ಪತ್ನಿ ಸುನಂದ(55) ಸಾವನ್ನಪ್ಪಿದ ದುರ್ದೈವಿಗಳು.
ತಾಲೂಕಿನ ಬನ್ನಿಕುಪ್ಪೆ ಗ್ರಾಮದಲ್ಲಿ ವಾಸವಿದ್ದ ರಾಜುರವರ ತಾಯಿ ಗುರುವಾರ ನಿಧನರಾಗಿದ್ದರು. ಹೀಗಾಗಿ ರಾಜು ಮತ್ತು ಪತ್ನಿ ಸುನಂದ ಬನ್ನಿಕುಪ್ಪೆಗೆ ತೆರಳಿ ಅಂತ್ಯಕ್ರಿಯೆ ಮುಗಿಸಿ ಹುಣಸೂರು ಮಂಜುನಾಥ ಬಡಾವಣೆಯಲ್ಲಿರುವ ತಮ್ಮ ಮನೆಗೆ ಶುಕ್ರವಾರ ಮಧ್ಯಾಹ್ನ ಹಿಂತಿರುಗುತ್ತಿದ್ದರು. ಪಟ್ಟಣದ ಕನಕ ಭವನದ ಎದುರು ಬರುತ್ತಿದ್ದಂತೆಯೇ ಹುಣಸೂರು ಕಡೆಯಿಂದ ವೇಗವಾಗಿ ತೆರಳುತ್ತಿದ್ದ ಕ್ಯಾಂಟರ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದಿದೆ ಪರಿಣಾಮ ರಾಜು ಅವರ ತಲೆ ಹಾಗೂ ಮುಖದ ಭಾಗಗಳಿಗೆ ಪೆಟ್ಟಾಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದರೆ, ಗಂಭೀರ ಗಾಯಗೊಂಡ ಪತ್ನಿ ಸುನಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತ ದಂಪತಿಗೆ ಓರ್ವ ಪುತ್ರನಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.