ಮೈಸೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ವಿಶ್ವದ ಗಮನ ಸೆಳೆದಿರುವ ಬೆನ್ನಲ್ಲೇ ರಾಮಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ಬಾಲರಾಮನ ಮೂರ್ತಿ ಕೆತ್ತನೆಗೆ ಬಳಕೆ ಮಾಡಿರುವ ಕೃಷ್ಣಶಿಲೆ ದೊರೆತ ಸ್ಥಳದಲ್ಲಿ ರಾಮ ದೇಗುಲ ನಿರ್ಮಾಣ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ.
ಈ ಕುರಿತಂತೆ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ ಅವರು, ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿರುವ ಬಾಲರಾಮನ ಮೂರ್ತಿ ಮೈಸೂರು ತಾಲೂಕಿನ ಹಾರೋಹಳ್ಳಿ ಸಮೀಪದ ಜಮೀನಿನಲ್ಲಿ ಲಭಿಸಿದ ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ. ಕೃಷ್ಣಶಿಲೆ ದೊರೆತ ಈ ಸ್ಥಳ ಸದ್ಯ ಎಲ್ಲರ ಗಮನ ಸೆಳೆದಿದ್ದು, ಈ ಹಿನ್ನೆಲೆಯಲ್ಲಿ ರಾಮಮಂದಿರ ಉದ್ಘಾಟನೆಗೊಳ್ಳಲಿರುವ ಜ.22ರಂದು ಮೈಸೂರು ತಾಲೂಕಿನ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಹಾರೋಹಳ್ಳಿಯಲ್ಲಿ ಭೂಮಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಶ್ರೀ ರಾಮಮಂದಿರ ನಿರ್ಮಾಣವಾಗುತ್ತಿದ್ದು, ಇಡೀ ದೇಶದ ಜನರು ನೋಡುತ್ತಿರುವ ಬಾಲರಾಮನ ವಿಗ್ರಹ ಕೆತ್ತನೆಗಾಗಿ ಬಳಸಿರುವ ಕೃಷ್ಣಶಿಲೆ ಹಾರೋಹಳ್ಳಿಯ ದಲಿತ ಸಮುದಾಯದ ಮುಖಂಡ ರಾಮದಾಸ್ ಅವರ ಜಮೀನಿನಲ್ಲಿ ಸಿಕ್ಕಿರುವುದು ಸಂತೋಷದ ಸಂಗತಿ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೈಸೂರಿಗೆ ಬಂದಿದ್ದ ವೇಳೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಿದ್ದರು. ಈಗ ಇದೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಾಲರಾಮನ ಮೂರ್ತಿಯ ಶಿಲೆ ಸಿಕ್ಕಿದ್ದು, ಹೀಗಾಗಿ ಕೃಷ್ಣಶಿಲೆ ದೊರೆತ ಸ್ಥಳದಲ್ಲಿ ವಿಶೇಷ ಪೂಜೆ ನಡೆಸಲಾಗುತ್ತದೆ ಎಂದರು.
ಜ.22ರಂದು ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುವ ಸಂದರ್ಭದಲ್ಲಿ ಕೃಷ್ಣಶಿಲೆ ದೊರೆತ ಸ್ಥಳದಲ್ಲಿ ನಾವು ಪೂಜೆ ಮಾಡುತ್ತೇವೆ. ಅಂದು ಬೆಳಗ್ಗೆ 6ರಿಂದ ೮ರವರೆಗೆ ಭೂಮಿಪೂಜೆ ಮಾಡಲಿದ್ದು, ಇದೇ ವೇಳೆ ಗ್ರಾಮಸ್ಥರನ್ನು ಸೇರಿಸಿ ಭಜನಾ ಕಾರ್ಯಕ್ರಮ ಕೂಡ ನಡೆಸುತ್ತೇವೆ. ನಾವು ಚಿಕ್ಕವನಿದ್ದಾಗ ರಾಮನ ಫೋಟೋ ಹಿಡಿದು ಧನುರ್ಮಾಸದಲ್ಲಿ ರಾಮನ ಭಜನೆ ಮಾಡುತ್ತಿದ್ದೆವು, ಇದೀಗ ಈ ರೀತಿಯ ಸೌಭಾಗ್ಯ ನನಗೆ ಮತ್ತೆ ಸಿಕ್ಕಿದೆ. ದಲಿತ ಬಾಂಧವರ ಜಮೀನಿನಲ್ಲಿ ಈ ಕೃಷ್ಣಶಿಲೆ ದೊರೆತಿದ್ದರೆ, ಬಾಲರಾಮನ ಮೂರ್ತಿಯನ್ನು ಕೆತ್ತನೆ ಮಾಡಿರುವವರು ನಮ್ಮ ಮೈಸೂರಿನವರು ಎಂಬುದು ಸಂತಸದ ಸಂಗತಿ ಎಂದು ತಿಳಿಸಿದರು.
ರಾಮದಾಸ್ ಅವರ ಜಮೀನಿನಲ್ಲಿ ದೊರೆತ ಕೃಷ್ಣಶಿಲೆ ಹೊರತೆಗೆದು ಅಯೋಧ್ಯೆಗೆ ಕಳುಹಿಸಲು ನೆರವಾದ ಶ್ರೀನಿವಾಸ್ ಮಾತನಾಡಿ, ನಮ್ಮ ತಾತನ ಕಾಲದಿಂದಲೂ ಕಲ್ಲು ಗಣಿಗಾರಿಕೆ, ಶಿಲೆಗಳನ್ನು ಕೆತ್ತನೆ ಮಾಡಲು ಅಗತ್ಯವಿರುವ ಕಲ್ಲು ಪೂರೈಸುವ ಕೆಲಸ ಮಾಡುತ್ತಾ ಬಂದಿದ್ದೇವೆ. ರಾಮದಾಸ್ ಅವರ ಜಮೀನಿನನ್ನು ಸ್ವಚ್ಛಗೊಳಿಸಿ, ಕಲ್ಲನ್ನು ಮೂರು ಭಾಗ ಮಾಡಿ ಹೊರತೆಗೆಯಲಾಗಿತ್ತು. 8-9 ದಿನಗಳ ಕಾಲ ಏಳೆಂಟು ಜನರು ಕೆಲಸ ಮಾಡಿ, ಕಲ್ಲನ್ನು ಹೊರತೆಗೆದು, 9 ಅಡಿ 8 ಇಂಚು ರಾಮನ ಕಲ್ಲು, ಸೀತಾ ವಿಗ್ರಹಕ್ಕೆ 7ಅಡಿ ಕಲ್ಲನ್ನು ಕಳುಹಿಸಲಾಯಿತು. ಭರತ, ಲಕ್ಷ್ಮಣ ಹಾಗೂ ಶತ್ರುಜ್ಞನ ಮೂರ್ತಿಗಳನ್ನು ಕೆತ್ತನೆ ಮಾಡಲು ಮೂರು ಕಲ್ಲುಗಳನ್ನು ಕಳುಹಿಸಲಾಗಿದೆ. ಅಯೋಧ್ಯೆಯಿಂದ ಆಗಮಿಸಿದ್ದ ಗುರುಗಳು ಶಿಲೆ ದೊರೆತ ಜಾಗದಲ್ಲಿ ಪೂಜೆ ಮಾಡಿ, ಆಶೀರ್ವಾದ ಮಾಡಿದ್ದರು. ತಾತನ ಕಾಲದಿಂದಲೂ ಮಾಡಿಕೊಂಡು ಬಂದ ಕೆಲಸದಿಂದ ಈ ಅವಕಾಶ ಸಿಕ್ಕಿದ್ದು ನಮ್ಮ ಪುಣ್ಯ ಎಂದರಲ್ಲದೆ, ಕಲ್ಲು ದೊರೆತ ಭೂಮಿಯಲ್ಲಿ ರಾಮಮಂದಿರ ನಿರ್ಮಿಸಲು ತೀರ್ಮಾನಿಸಿದ್ದು, ಅವರಿಗೆ ಜಾಗ ನೀಡುವುದಾಗಿ ಹೇಳಿದರು.