ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನ ಗ್ರಾಮ ಹಾಗೂ ಬುಡಕಟ್ಟು ಸಮುದಾಯ ವಾಸಿಸುವ ಹಾಡಿ ಜನರ ಆರೋಗ್ಯ ಸೇವೆಗಾಗಿ ದಿನದ 24 ಗಂಟೆಯೂ ಆಂಬ್ಯುಲೆನ್ಸ್ ಸೇವೆ ಆರಂಭಿಸಲಾಗಿದೆ.
ಹುಲಿ ಸಂರಕ್ಷಿತ ಪ್ರದೇಶವಾಗಿ 50 ವರ್ಷ ಪೂರೈಸಿದ ಸಂಭ್ರಮದಲ್ಲಿರುವ ಬಂಡೀಪುರ ಅಭಯಾರಣ್ಯದ ವತಿಯಿಂದ ರೂಪಿಸಿರುವ ಕಾರ್ಯಕ್ರಮಗಳಲ್ಲಿ ಆದಿವಾಸಿ ಹಾಗೂ ಕಾಡಂಚಿನ ಜನರಿಗಾಗಿ ತುರ್ತು ಆರೋಗ್ಯ ಸೇವೆ ಒದಗಿಸುವುದು ಸೇರಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹುಲಿ ಸಂರಕ್ಷಣಾ ಪ್ರತಿಷ್ಠಾನ ಎರಡು ಆಂಬ್ಯುಲೆನ್ಸ್ ನೀಡಿದ್ದು, ಕಾಡಂಚಿನ ಗ್ರಾಮಗಳಲ್ಲಿ ಅನಾರೋಗ್ಯ ಪೀಡಿತರಾದವರಿಗೆ ಸಕಾಲದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಸಹಕಾರಿಯಾಗಲಿದೆ. 53 ಹಾಡಿ-ಗ್ರಾಮಗಳಿಗೆ ನೆರವು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕಾಡಂಚಿನಲ್ಲಿ 53 ಹಾಡಿ ಮತ್ತು ಗ್ರಾಮಗಳಿವೆ. ಇವುಗಳಲ್ಲಿ ಬುಡಕಟ್ಟು ಸಮುದಾಯ ಸೇರಿದಂತೆ ಇನ್ನಿತರ ಸಮುದಾಯಗಳ 50ರಿಂದ 70 ಸಾವಿರ ಜನ ವಾಸಿಸುತ್ತಿದ್ದಾರೆ. ಬಂಡೀಪುರ ಅರಣ್ಯದ ನಡುವೆ ಹಾದು ಹೋಗಿರುವ ರಸ್ತೆಗಳಲ್ಲಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ವಾಹನ ಸಂಚಾರ ನಿರ್ಬಂಧವಿರುವುದರಿಂದ ಕಾಡಂಚಿನ ಗ್ರಾಮಗಳ ಜನರಿಗೆ ರಾತ್ರಿ ವೇಳೆ ಅನಾರೋಗ್ಯ ಸಮಸ್ಯೆ ಉಂಟಾದರೆ ಆಸ್ಪತ್ರೆಗೆ ಕರೆದೊಯ್ಯಲು ಕಷ್ಟವಾಗುತ್ತಿತ್ತು.
ಆರಂಬಿಕ ಹಂತದಲ್ಲಿ ಎರಡು ಆಂಬುಲೆನ್ಸ್ ಸೇವೆ ಆರಂಬಿಸಲಾಗಿದ್ದು, ಒಂದು ಆಂಬುಲೆನ್ಸ್ ಅನ್ನು ಮಂಗಲ, ಎಲ್ಚೆಟ್ಟಿ, ಚಿಕ್ಕ ಎಲ್ಚೆಟ್ಟಿ, ಜಕ್ಕಳ್ಳಿ ಸೇರಿದಂತೆ ಇನ್ನಿತರ ಗ್ರಾಮ ಮತ್ತು ಹಾಡಿ ಜನರ ಸೇವೆಗಾಗಿ ನಿಯೋಜಿಸಲಾಗಿದೆ. ಮತ್ತೊಂದನ್ನು ಮದ್ದೂರು ಕಾಲೋನಿಯಲ್ಲಿರಿಸಲಾಗಿದ್ದು, ಆ ಭಾಗದಲ್ಲಿ 25 ಹಾಡಿಗಳ ಜನರ ಸೇವೆಗೆ ಕಾಯ್ದಿರಿಸಲಾಗಿದೆ. ಈ ಎರಡೂ ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಸಿಲಿಂಡರ್ ವ್ಯವಸ್ಥೆ ಹಾಗೂ ತುರ್ತು ಚಿಕಿತ್ಸೆ ಬೇಕಾದ ಔಷಧಿ ಇಡಲಾಗಿದೆ. ರಾತ್ರಿ ವೇಳೆ ಮಾತ್ರ ಈ ಆಂಬುಲೆನ್ಸ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಹಗಲಿನ ವೇಳೆ ನುರಿತ ಚಾಲಕ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಗುಂಡ್ಲುಪೇಟೆ, ಮೈಸೂರು ಅಥವಾ ಚಾಮರಾಜನಗರಕ್ಕೆ ಕರೆದೊಯ್ಯಲಿದ್ದಾರೆ.
ಹುಲಿ ಸಂರಕ್ಷಣಾ ಫೌಂಡೇಷನ್ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವತಿಯಿಂದಲೇ ನಡೆಸುತ್ತಿರುವ ಸಂಸ್ಥೆಯಾಗಿದ್ದು, ಆಂಬುಲೆನ್ಸ್ ಸೇವೆಯನ್ನು ಶಾಶ್ವತವಾಗಿ ಮುಂದುವರೆಸುವ ಆಲೋಚನೆ ಇದೆ. ಆರಂಭದಲ್ಲೇ ಆಂಬುಲೆನ್ಸ್ ಸೇವೆಗೆ ಪ್ರಶಂಸೆ ವ್ಯಕ್ತವಾಗಿರುವುದರಿಂದ ಹಾಗೂ ಜನರ ಬೇಡಿಕೆಗೆ ಅನುಗುಣವಾಗಿ ಸೇವೆ ಮುಂದುವರೆಸಲು ನರ್ಧರಿಸಲಾಗಿದೆ. ಇದಕ್ಕೆ ಬೇಕಾಗುವ ಅನುಧಾನವನ್ನು ಹುಲಿ ಸಂರಕ್ಷಣಾ ಫೌಂಡೇಷನ್ ಭರಿಸಲಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ -ಡಾ.ಪಿ.ರಮೇಶ್ ಕುಮಾರ್ ಅವರು, ಹುಲಿ ಮತ್ತು ಬುಡಕಟ್ಟು (ಟೈಗರ್ ಅಂಡ್ ಟ್ರೈಬ್ಸ್) ಸಮುದಾಯ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಎರಡು ಕಣ್ಣುಗಳಿದ್ದಂತೆ. ಇವರ ಹಿತ ಕಾಯ್ದರೆ ಬಂಡೀಪುರ ಅರಣ್ಯ ಸಂಪದ್ಭರಿತವಾಗಿರುತ್ತದೆ. ಆರೋಗ್ಯ ಸೇವೆಗೆ ಅಂಬ್ಯುಲೆನ್ಸ್ ನೀಡಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗುವುದು. ಪಾಳು ಬಿಟ್ಟಿರುವ ಜಮೀನಿನಲ್ಲಿ ಬಿತ್ತನೆ ಮಾಡಲು ಬೀಜ ಕೊಡಲಾಗುವುದು ಎಂದು ಹೇಳಿದ್ದಾರೆ.