ಮೈಸೂರು : ನೂತನ ತಾಲ್ಲೂಕು ರಚನೆಗೊಂಡ ಬಳಿಕ ಸಾಲಿಗ್ರಾಮ ಪಟ್ಟಣದಲ್ಲಿ ನಿರ್ಮಿಸಿರುವ ತಾಲ್ಲೂಕು ಆಡಳಿತ ಕಚೇರಿಯನ್ನು ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಉದ್ಘಾಟಿಸಿದ್ದಾರೆ.
ಈ ವೇಳೆ ಮಾತನಾಡಿದ ದೇವೇಗೌಡರು, ಹೆಚ್ ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸಾರಾ ಮಹೇಶ್ ಅವರು ಸಾಲಿಗ್ರಾಮವನ್ನು ಹೊಸ ತಾಲ್ಲೂಕು ಕೇಂದ್ರ ಮಾಡಲು ಬಹಳ ಶ್ರಮಿಸಿದ್ದರು. ಅವರ ಶ್ರಮದ ಫಲವೇ ಇಂದು ತಾಲ್ಲೂಕು ಕಚೇರಿ ಉದ್ಘಾಟನೆ ಗೊಂಡಿದೆ. ಇದರಿಂದ ತಾಲ್ಲೂಕಿನ ಗಡಿಭಾಗದ ಜನರಿಗೆ ತುಂಬಾ ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಉಳಿದ ಸಕಾ೯ರಿ ಕಚೇರಿಗಳು ಪ್ರಾರಂಭಗೊಳ್ಳುತ್ತವೆ. ಹೊಸ ತಾಲ್ಲೂಕು ರಚನೆಯಿಂದ ಈ ಭಾಗದ ಜನರ ಆಥಿ೯ಕ ಸ್ಥಿತಿ ಉತ್ತಮಗೊಳ್ಳುತ್ತದೆ ಎಂದು ಹಷ೯ ವ್ಯಕ್ತ ಪಡಿಸಿದರು.
ರಾಜ್ಯದಲ್ಲಿ 2023 ಕ್ಕೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು. ರಸ್ತೆಯಲ್ಲಿ ನಗಾರಿ ಬಾರಿಸಿದರೆ ನ್ಯಾಯ ಸಿಗುವುದಿಲ್ಲ, ಮೇಕೆದಾಟು ಯೋಜನೆಗೆ ಸಂಬಂಧಿಸಿದ ಪ್ರಕರಣ ಸುಪ್ರೀಂ ಕೋರ್ಟ್ ನಲ್ಲಿ ಇರುವಾಗ ಕಾಂಗ್ರೆಸ್ ನಾಯಕರು ರಾಜಕೀಯ ಲಾಭ ಪಡೆಯಲು ಬೀದಿಗಿಳಿದು ನಗಾರಿ ಬಾರಿಸಿದರೆ ತೀರ್ಪು ನಮ್ಮ ಪರವಾಗುತ್ತದೆಯೇ ಎಂದು ಅವರು ಪ್ರಶ್ನಿಸಿದರು.
ಅಂತರರಾಜ್ಯ ನದಿ ವಿಚಾರದಲ್ಲಿ ರಸ್ತೆಯಲ್ಲಿ ನಿಂತು ಹೋರಾಟ ಮಾಡಿದರೆ ಪ್ರಯೋಜನವಿಲ್ಲ. ಸಮಸ್ಯೆ ಕೂಡ ಬಗೆಹರಿಯುವುದಿಲ್ಲ. ಮೇಕೆದಾಟು ಪಾದಯಾತ್ರೆಯನ್ನು ತಡೆಗಟ್ಟಲು ಬಿಜೆಪಿ ನೇತೃತ್ವದ ಸರ್ಕಾರ ವಿಫಲವಾಗಿದ್ದರಿಂದ ಕೋರ್ಟ್ ಮದ್ಯ ಪ್ರವೇಶ ಮಾಡಬೇಕಾಯಿತು. ಪಾದಯಾತ್ರೆ ಮಾಡುವುದು ಅಥವಾ ನಿಲ್ಲಿಸುವುದು ಮುಖ್ಯವಲ್ಲ ಬದಲಿಗೆ ರಾಜ್ಯದ ಜನತೆಗೆ ನ್ಯಾಯ ಕೊಡುವುದು ಮುಖ್ಯ ಎಂದು ಹೇಳಿದರು.
ಕಾಯ೯ಕ್ರಮದಲ್ಲಿ ಶಾಸಕ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಸಿ ಎನ್ ಮಂಜೇಗೌಡ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಮಿರ್ಲೆ ಅಣ್ಣೇಗೌಡ, ಚಿಕ್ಕನಾಯಕನಹಳ್ಳಿ ವಾಸು, ಗೋಪಾಲ, ಎಂ ಟಿ ಕುಮಾರ್, ಮಾಜಿ ಮೇಯರ್ ಚಿನ್ನಿರವಿ, ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರ ಶೇಖರ್, ಇನ್ನಿತರರು ಇದ್ದರು.