ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವ ಕೆ.ರಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿಖಾನ್ ಅವರನ್ನು ಎರಡನೇ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ಕಾಂಗ್ರೆಸ್ ಸೋಮವಾರ ತೆಗೆದುಕೊಂಡ ನಿರ್ಧಾರವು ಕಾಂಗ್ರೆಸ್ ಅಥವಾ ಬಿಜೆಪಿಯಿಂದ ಹೆಚ್ಚುವರಿ ಮತಗಳ ಸಹಾಯದಿಂದ ಒಂದು ಸ್ಥಾನವನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದ ಜೆಡಿಎಸ್ಗೆ ಅಸಮಾಧಾನವನ್ನುಂಟು ಮಾಡಿದೆ.
ಸೋಮವಾರ ಸಂಜೆ ಬಿಜೆಪಿ ತನ್ನ ಮೂರನೇ ಅಭ್ಯರ್ಥಿಯಾಗಿ ಮಾಜಿ ಎಂಎಲ್ಸಿ ಲೆಹರ್ ಸಿಂಗ್ ಸಿರೋಯಾ ಅವರ ಹೆಸರನ್ನು ಘೋಷಿಸಿದ್ದು, ಇದು ಜೆಡಿಎಸ್’ನ ಲೆಕ್ಕಾಚಾರಗಳು ತಲೆಕೆಳಕಾಗುವಂತೆ ಮಾಡಿದೆ.
ಈ ನಡುವೆ ಚುನಾವಣೆ ಕುರಿತು ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಚುನಾವಣೆಯಲ್ಲಿ ಗೆಲ್ಲಲು ನಮಗೆ ನಮ್ಮದೇ ಲೆಕ್ಕಾಚಾರವಿದ್ದು, ಕಳೆದ ಬಾರಿ ಗೌರವ ಸೂಚಕವಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ರಾಜ್ಯಸಭೆಯ ನಾಲ್ಕನೇ ಸೀಟಿಗೆ ಮೂರೂ ಪಕ್ಷಗಳಲ್ಲಿ ಮತಗಳ ಕೊರತೆಯಿದೆ. ಈ ಸಂಬಂಧ ಕೆಲವು ಚರ್ಚೆಗಳು ನಡೆದಿದ್ದು, ಅದನ್ನು ಬಹಿರಂಗಪಡಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಂದು ಹೇಳಿದ್ದಾರೆ.
ಹೆಚ್’ಡಿ.ದೇವೇಗೌಡ ಅವರು ಈಗಾಗಲೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ಮಾತುಕತೆ ನಡೆಸಿದ್ದು, ನಾಲ್ಕನೇ ಸ್ಥಾನಕ್ಕೆ ನಡೆಯುವ ಕುದುರೆ ವ್ಯಾಪಾರವನ್ನು ತಪ್ಪಿಸುವಂತೆ ಮನವಿ ಮಾಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಈ ನಡುವೆ ಶಿವಕುಮಾರ್ ಮತ್ತು ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರನ್ನು ಭಾನುವಾರ ಭೇಟಿ ಮಾಡಿ, ಬೆಂಬಲ ಕೋರಿದ ರಾಜ್ಯಸಭಾ ಮಾಜಿ ಸದಸ್ಯ ಕುಪೇಂದ್ರ ರೆಡ್ಡಿ ಅವರನ್ನು ಜೆಡಿಎಸ್ ಕಣಕ್ಕಿಳಿಸುವ ಸಾಧ್ಯತೆ ಇದೆ. ಆದರೆ ಖಾನ್ ಮತ್ತು ಲೆಹರ್ ಸಿಂಗ್ ಕಣದಲ್ಲಿರುವುದರಿಂದ, ರೆಡ್ಡಿಯ ಅವಕಾಶಗಳು ಮಸುಕಾಗುವಂತೆ ಮಾಡಿದೆ.
ಬಿಜೆಪಿ ಮೊದಲ ಅಭ್ಯರ್ಥಿಗಳಾಗಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ನಟ ಜಗದೀಶ್ ಅವರನ್ನು ಆಯ್ಕೆ ಮಾಡುವುದರಿಂದ ಮೂರನೇ ಅಭ್ಯರ್ಥಿಯಾಗಿರುವ ಲೆಹರ್ ಸಿಂಗ್ ಸಿರೋಯಾ ಅವರ ಆಯ್ಕೆಗೆ 16 ಮತಗಳ ಕೊರತೆ ಎದುರಾಗಿದೆ. ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು, ಈ ನಡುವಲ್ಲೇ ಶಾಸಕಾಂಗ ಪಕ್ಷದ ಸಭೆ ನಡೆಸುವ ಜೆಡಿಎಸ್ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ನಾಮಪತ್ರ ಹಿಂಪಡೆಯಲು ಜೂ.3 ಕೊನೆಯ ದಿನವಾಗಿದ್ದು, ಈಗಾಗಲೇ ಕಾಂಗ್ರೆಸ್ ಹಾಗೂ ಜೆಡಿಎಸ್ ಹೆಚ್ಚುವರಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ರಾಜ್ಯಸಭಾ ಚುನಾವಣೆ ರಂಗೇರುವಂತೆ ಮಾಡಿವೆ.