ಮೈಸೂರು: ದೇಶದ ಅಭಿವೃದ್ಧಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದ ಮೇಲೆ ಅವಲಂಬಿತವಾಗಿರುವುದರಿಂದ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಹೇಳಿದರು.
ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕೆರಿಯರ್ ಹಬ್ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 10-20 ವರ್ಷಗಳ ಹಿಂದೆ ಒಂದು ಕೊಠಡಿಯಲ್ಲಿ ಕಂಪ್ಯೂಟರ್ ಇಡಲಾಗುತ್ತಿತ್ತು. ನಂತರ, ಲ್ಯಾಪ್ಟಾಪ್, ಟ್ಯಾಬ್, ವಾಟ್ಸಾಪ್ ಹೀಗೆ ವಿಜ್ಞಾನ ಕ್ಷೇತ್ರದಲ್ಲಿ ಹತ್ತಾರು ಬದಲಾವಣೆಗಳು ಆಗಿವೆ. ಚೀನಾ ವೇಗವಾಗಿ ಬೆಳೆಯಲು ಮತ್ತು ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಹೊಂದಲು ವಿಜ್ಞಾನ ಕ್ಷೇತ್ರಕ್ಕೆ ಜಿಡಿಪಿಯಲ್ಲಿ ಹೆಚ್ಚಿನ ಸ್ಥಾನ ಕೊಡಲಾಗಿದೆ. ಅದೇ ರೀತಿ ಭಾರತದಲ್ಲೂ ನೀಡಬೇಕು ಎಂದು ಹೇಳಿದರು.
ಯಾವುದೇ ದೇಶ ಮುಂದುವರಿಯಲು ವಿಜ್ಞಾನ ಕ್ಷೇತ್ರಕ್ಕೆ ಪ್ರೋತ್ಸಾಹಿಸಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸುವಂತೆ ಮಾಡಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ಇಂದು ಎಲ್ಲ ಕ್ಷೇತ್ರಗಳ ಬೆಳವಣಿಗೆಗೆ ಪೂರಕವಾಗಿ ನಿಂತಿದೆ. ಹೊಸ ಹೊಸ ಆನ್ವೇಷಣೆಗಳು ನಡೆದಷ್ಟೂ ಬದಲಾವಣೆಗೆ ದಾರಿಯಾಗಿದೆ. ಮೊದಲು ವಿಜ್ಞಾನ ಎಂದರೆ ಮೂಗುಮುರಿಯುತ್ತಿದ್ದರು. ಆದರೆ, ಈ ವಿಷಯದಲ್ಲಿ ಪದವಿ ಮಾಡಿದವರಿಗೆ ಅವಕಾಶಗಳು ಒದಗಿ ಬರುತ್ತಿದ್ದಂತೆ ಹೆಚ್ಚಿನ ಬೇಡಿಕೆ ಬಂದಿತು ಎಂದು ಹೇಳಿದರು.
ವಿಜ್ಞಾನ ಪದವೀಧರರು ಸರ್ಕಾರಿ ಉದ್ಯೋಗವನ್ನೇ ನಂಬಿ ಕೂರಬಾರದು. ತಮ್ಮ ಸ್ವಂತ ಉದ್ಯೋಗಕ್ಕೆ ಅವಕಾಶ ಸಿಗುವಂತೆ ನೋಡಿಕೊಳ್ಳಬೇಕು. ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಅವಕಾಶ ಮಾಡಿಕೊಡಬೇಕು ಎಂದರು.
ಕಾಲೇಜು ಪ್ರಾಂಶುಪಾಲ ಬಾಲಕೃಷ್ಣ, ವಿಜಯ್ ವಿಠಲ್, ಪ್ರೊ.ಕೆಂಪೇಗೌಡ ಹಾಜರಿದ್ದರು.