ಬೆಂಗಳೂರು- ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಸಾವಿರಾರು ಎಕರೆ ಭೂಮಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನದಲ್ಲಿ ರಾಜ್ಯ ಸರ್ಕಾರ ಕೈ ಚೆಲ್ಲಿದೆ. ಮೈಸೂರಿನ ಸರ್ವೆ ನಂಬರ್ 4 ರ ಭೂಮಿ ಸ್ವಾಮ್ಯತೆಯ ಬಿ ಖರಾಬ್ ನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ. ಈ ಮೂಲಕ ಮೈಸೂರು ರಾಜ ಮನೆತನ ಸೇರಿದಂತೆ ಅಲ್ಲಿನ ಭೂ ಮಾಲೀಕರು ಕಾನೂನು ಹೋರಾಟದಲ್ಲಿ ಜಯ ಗಳಿಸಿದ್ದಾರೆ.
ಮೈಸೂರಿನ ಸರ್ವೆ ನಂಬರ್ 4 ಮಾತ್ರವಲ್ಲದೆ, ಚೌಡಳ್ಳಿ ಸರ್ವೆ ನಂಬರ್ 39 ಮತ್ತು ಆಲನಹಳ್ಳಿ ಸರ್ವೆ ನಂಬರ್ 41 ರಲ್ಲಿನ ಸುಮಾರು 2 ಸಾವಿರ ಎಕರೆ ಭೂಮಿಯಲ್ಲಿನ ಸ್ವಾಮ್ಯತೆಯ ಬಿ ಖರಾಬ್ ನ್ನು ಸರ್ಕಾರ ರದ್ದು ಮಾಡಿದೆ. ಈ ಮೂಲಕ ಈ ಸರ್ವೆ ನಂಬರ್ ಗಳ ಭೂಮಿ ಎ ಖರಾಬ್ ಆಗಿ ಪರಿವರ್ತನೆಗೊಂಡಿದೆ.ಬಿ ಖರಾಬ್ ಅಂದರೆ ಸರ್ಕಾರದ ಭೂ ಮಾಲಿಕತ್ವ ಹಾಗೂ ಎ ಖರಾಬ್ ಅಂದರೆ ಖಾಸಗಿಯವರ ಭೂ ಮಾಲೀಕತ್ವವಾಗಿದೆ.
ಎರಡು ಸಾವಿರ ಎಕರೆ ಭೂಮಿ ನಮ್ಮದು ಎಂದು ಮೈಸೂರು ರಾಜಮನೆತನ ತಮ್ಮ ಹಕ್ಕಿನ ವಾದ ಮಾಡಿದರೆ, ಇದು ನಮ್ಮ ಹಕ್ಕು ಎಂದು ಸರ್ಕಾರ ವಾದಿಸುತ್ತಿತ್ತು.ಕಾನೂನು ಹೋರಾಟದಲ್ಲಿ ಮೈಸೂರಿನ ಕೆಳ ನ್ಯಾಯಾಲಯದಿಂದ ಸುಪ್ರೀಂ ಕೋರ್ಟ್ ಮೈಸೂರು ರಾಜಮನೆತದ ಪರವಾಗಿ ತೀರ್ಪು ನೀಡಿದೆ. ಆದರೆ ಸರ್ಕಾರ ಮಾತ್ರ ಭೂ ಹಕ್ಕು ನಮ್ಮದು ಅಂತ ಮೇಲ್ಮನವಿ ಸಲ್ಲಿಸುತ್ತಿತ್ತು.ಅಂತಿಮವಾಗಿ ಹೈಕೋರ್ಟ್, ಖಾಸಗಿ ಭೂ ಮಾಲೀಕರಿಗೆ ಹಕ್ಕು ಪತ್ರ ನೀಡದಿದ್ದರೆ ನ್ಯಾಯಾಂಗ ನಿಂದನೆ ಆಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು,ಅಷ್ಟಾಗಿ ಕೂಡ ಸರ್ಕಾರ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
ಅರ್ಜಿ ಅಂಗೀಕಾರಕ್ಕೂ ಮೊದಲೆ ಸರ್ಕಾರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶ ಪಾಲಿಸದ ಸರ್ಕಾರಕ್ಕೆ ಛೀಮಾರಿ ಹಾಕಿತು, ಹೈಕೋರ್ಟ್ ಆದೇಶ ಪಾಲಿಸದಿದ್ದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿತು.ಈಗ ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಅಡ್ವಕೇಟ್ ಜನರಲ್ ಅವರ ಸಲಹೆ ಮೇರೆಗೆ ಬಿ ಖರಾಬ್ ರದ್ದು ಮಾಡಿದೆ.ಈ ಮೂಲಕ ಸರ್ಕಾರ ಭೂ ಮಾಲೀಕರಿಗೆ ಖಾತೆ ಮಾಡಿಕೊಡಬೇಕಿದೆ.ರಾಜ ಮನೆತನದವರಿಂದ ಭೂಮಿ ಖರೀದಿ ಮಾಡಿದವರಿಗೂ ಕೂಡ ಸರ್ಕಾರ ಖಾತೆ ಮಾಡಿಕೊಡಬೇಕಿದೆ.
ಚಾಮುಂಡಿ ಬೆಟ್ಟದ ತಪ್ಪಲಿನ ಸಾವಿರಾರು ಎಕರೆ ಭೂಮಿ ಮತ್ತೆ ರಾಜಮನೆತನದ ವಶಕ್ಕೆ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.