ಇವತ್ತು ನಾವು ಮಾನಸಿಕ ಮತ್ತು ದೈಹಿಕವಾಗಿ ಬಳಲುತ್ತಿದ್ದೇವೆ. ಇದರಿಂದ ನಮಗೆ ಗೊತ್ತಿಲ್ಲದಂತೆ ಕಾಯಿಲೆಗಳು ಅಡರಿಕೊಳ್ಳುತ್ತಿವೆ. ಏಕೆ ಹೀಗಾಗುತ್ತಿದೆ ಎಂಬುದನ್ನು ನೋಡುವುದಾದರೆ ಮುಖ್ಯವಾಗಿ ನಮ್ಮಲ್ಲಿನ ಮಾನಸಿಕ ಶಿಸ್ತಿನ ಕೊರತೆಯೇ ಕಾರಣವಾಗಿದೆ
ನಮ್ಮ ದಿನನಿತ್ಯದ ಕಾರ್ಯಗಳಲ್ಲಿ ಶಿಸ್ತು ಅಳವಡಿಸಿಕೊಳ್ಳುವ ಮೂಲಕ ಬದುಕನ್ನು ಉತ್ತಮ ಹಾದಿಯಲ್ಲಿ ಕೊಂಡೊಯ್ಯುವಂತೆ ಚಂಚಲವಾಗಿ ಅಂಡಲೆಯುವ ಮನಸ್ಸಿಗೂ ಒಂದು ಕ್ರಮ ಬದ್ಧವಾದಂತಹ ಶಿಸ್ತು ಅಳವಡಿಸಿಕೊಳ್ಳಬೇಕು ಆಗ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.
ನಮ್ಮ ಮನಸ್ಸನ್ನು ಹಿಡಿತಕ್ಕೆ ತರಬೇಕಾದರೆ ಆಧ್ಯಾತ್ಮದ ಮೂಲಕವೇ ಸಾಧ್ಯ ಎನ್ನುವುದನ್ನು ಚಿಂತಕರು ಮಾಡಿತೋರಿಸಿದ್ದಾರೆ. ದೇವರ ಬಗ್ಗೆ ಯಾರಿಗೆ ನಂಬಿಕೆಯಿದೆಯೋ ಅವರು ಸುಲಭವಾಗಿ ಮನಸ್ಸನ್ನು ಹಿಡಿತಕ್ಕೆ ತರಬಹುದು. ಮನಸ್ಸು ದುರ್ಮಾಗದತ್ತ ಸೆಳೆಯುತ್ತಿದೆ ಎಂಬುದು ನಮ್ಮ ಅನುಭವಕ್ಕೆ ಬಂದಾಗ ತಕ್ಷಣ ದೇವರ ಧ್ಯಾನದಲ್ಲಿ ತೊಡಗಿದ್ದೇ ಆದರೆ ಮನಸ್ಸು ಆ ಕಡೆಯಿಂದ ಹಿಂತಿರುಗಿ ಬಿಡುತ್ತದೆ ಎಂಬುದು ಆಧ್ಯಾತ್ಮಿಕ ಚಿಂತಕರ ಅಭಿಪ್ರಾಯವಾಗಿದೆ.
ಮನುಷ್ಯ ತನ್ನ ಮನಸ್ಸನ್ನು ಹತೋಟಿಗೆ ತರುವಲ್ಲಿ ಎರಡು ರೀತಿಯ ಆಂತರಿಕ ಶಿಸ್ತುಗಳನ್ನು ರೂಢಿಸಿಕೊಳ್ಳಬಹುದಾಗಿದೆ ಯಂತೆ. ಅವುಗಳೆಂದರೆ ಮೊದಲನೆಯದಾಗಿ ಸ್ಥಾಯಿಯಾದ ಮೂಲಭೂತ ಕಾರ್ಯವಿಧಾನಗಳನ್ನು ರೂಪಿಸಿಕೊಳ್ಳುವುದು. ಎರಡನೆಯದಾಗಿ ಅತ್ಯಂತ ಪ್ರಬಲವಾದ ನಿರೋಧಕಗಳನ್ನು ಅಣಿಗೊಳಿಸುವುದು.
ಈ ಎರಡು ಪ್ರಕಾರದ ಶಿಸ್ತುಗಳಲ್ಲಿ ಮೊದಲನೆಯದು ಮನಸ್ಸಿಗೆ ಆರೋಗ್ಯ ಪೂರ್ಣವಾದ ನಿರ್ದೇಶನವನ್ನು ಒದಗಿಸಿದರೆ, ಎರಡನೆಯದು ತುರ್ತುಪರಿಸ್ಥಿತಿಗಳಲ್ಲಿ ಮನಸ್ಸನ್ನು ದಿಕ್ಕೆಡದಂತೆ ಕಾಪಾಡುತ್ತದೆ. ಈ ಎರಡು ಅತ್ಯುತ್ತಮವಾಗಿದ್ದು, ಮೊದಲನೆಯ ಪ್ರಕಾರದ ಶಿಸ್ತನ್ನು ರೂಢಿಸಿಕೊಳ್ಳದಿದ್ದರೆ, ಎರಡನೆಯದನ್ನು ರೂಢಿಸಿಕೊಳ್ಳಲು ಸಾಧ್ಯವಾಗದು. ಮೊದಲನೆಯದನ್ನು ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳದಿದ್ದರೆ ಎರಡನೆಯದಕ್ಕೆ ಅಗತ್ಯವಾದ ಶಕ್ತಿ ಸಾಮರ್ಥ್ಯ ದೊರೆಯಲಾರದು. ಇದೆರಡು ಒಂದಕ್ಕೊಂದು ಸಂಬಂಧಿಸಿದ್ದಾಗಿರುವುದರಿಂದ ಎರಡನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುವುದು ಬಹು ಮುಖ್ಯವಾಗಿದೆ.
ಮನಸ್ಸು ಅಷ್ಟು ಸುಲಭಕ್ಕೆ ನಮ್ಮ ಹಿಡಿತಕ್ಕೆ ಸಿಲುಕುವುದಿಲ್ಲ. ಅದು ಎಲ್ಲೆಲ್ಲೋ ಅಲೆಯುತ್ತಲೇ ಇರುತ್ತದೆ. ಹೀಗಾಗಿ ನಾವು ಅನುಭವಿಸುವ ಕಷ್ಟನಷ್ಟಗಳಿಗೆ ನಮ್ಮ ಮನಸ್ಸು ಕೂಡ ಕಾರಣವಾಗಿ ಬಿಡುತ್ತದೆ. ಹೀಗಾಗಿ ಅದರತ್ತ ಸದಾ ಎಚ್ಚರವಾಗಿರಬೇಕು. ಮನಸ್ಸನ್ನು ಹಿಡಿತಕ್ಕೆ ತಂದುಕೊಳ್ಳಬೇಕಾದರೆ ಮನಸ್ಸಿನ ಮಾಮೂಲಿ ಸ್ವಭಾವವಾದ ಚಾಂಚಲ್ಯವನ್ನು ತಡೆಗಟ್ಟುವುದು ಅಗತ್ಯ.
ಯಾರಿಗೆ ನೈತಿಕವಾದ ಅಥವಾ ಇನ್ನಾವುದೇ ನಿಯಮಗಳಿಲ್ಲವೋ ಮತ್ತು ಬದುಕಿಗೆ ಒಂದು ವ್ಯವಸ್ಥೆ ಇಲ್ಲವೋ ಅಂತಹವರು ಮನಸ್ಸನ್ನು ಹತೋಟಿಗೆ ತರುವುದು ಅಸಾಧ್ಯವೆಂದು ಹೇಳಿದರೆ ತಪ್ಪಾಗಲಾರದು. ಆದರೂ ಮೊದಲಿಗೆ ನಾವು ಮನಸ್ಸನ್ನು ಪರಿಶುದ್ಧವಾಗಿರುವಂತೆ ನೋಡಿಕೊಳ್ಳಬೇಕು. ಮನಸ್ಸು ಪರಿಶುದ್ಧವಾದರೆ ಶಿಸ್ತು ರೂಢಿಸಿಕೊಳ್ಳುವುದು ನಮಗೆ ಕಷ್ಟವಾಗುವುದಿಲ್ಲ. ಶಿಸ್ತು ನಮ್ಮಲ್ಲಿದ್ದರೆ ಆರೋಗ್ಯಯುತ ಬದುಕು ನಮ್ಮದಾಗುತ್ತದೆ.