ಮೈಸೂರು: ಯುಗಾದಿಗೆ ಹಬ್ಬಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಿದ್ಧತೆ ಜೋರಾಗಿದ್ದು, ಬೆಲೆ ಏರಿಕೆ ನಡುವೆಯೂ ಅಗತ್ಯ ವಸ್ತುಗಳ ಖರೀದಿ ಜೋರಾಗಿ ನಡೆಯುತ್ತಿದೆ.
ನಗರದ ವಿವಿಧ ಭಾಗಗಳಲ್ಲಿರುವ ದೇವರಾಜ ಮಾರುಕಟ್ಟೆ, ಚಿಕ್ಕ ಗಡಿಯಾರ ವೃತ್ತ, ಶಿವಾರಾಂ ಪೇಟೆ, ವಾಣಿವಿಲಾಸ, ಮಂಡಿ ಮಾರ್ಕೆಟ್, ಅಗ್ರಹಾರ ವೃತ್ತ, ನಂಜುಮಳಿಗೆ ವೃತ್ತ ಸೇರಿದಂತೆ ಪ್ರಮುಖ ಮಾರುಕಟ್ಟೆ, ವೃತ್ತಗಳು ಹಾಗೂ ರಸ್ತೆ ಬದಿಯಲ್ಲಿ ಹಬ್ಬಕ್ಕೆ ಬೇಕಿರುವ ಅಗತ್ಯ ವಸ್ತುಗಳ ವ್ಯಾಪಾರ ಜೋರಾಗಿ ನಡೆಯಿತು.
ಮಾರುಕಟ್ಟೆಗೆ ದಾಂಗುಡಿಯಿಟ್ಟ ಗ್ರಾಹಕರು ಹೂ, ಹಣ್ಣು, ತರಕಾರಿ, ಬೇವು ಬೆಲ್ಲ, ಹೊಸ ಬಟ್ಟೆ ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸಲು ಮುಗಿಬಿದ್ದರು. ಮೈಸೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದ ರೈತರು ಬೇವಿನ ಸೊಪ್ಪನ್ನು ನಗರದ ಪ್ರಮುಖ ವೃತ್ತಗಳಲ್ಲಿ ಮಾರಾಟ ಮಾಡುತ್ತಿದ್ದುದು ಕಂಡು ಬಂತು.
ಯುಗಾದಿ ಹಬ್ಬದ ಹಿನ್ನೆಲೆ ನಗರದಲ್ಲಿ ಹೂವಿನ ಬೆಲೆ ದುಪ್ಪಟ್ಟಾಗಿದ್ದು, ಸಾಮಾನ್ಯ ದಿನಕ್ಕಿಂತ 30ರಿಂದ 50ರೂ. ಏರಿಕೆಯಾಗಿದೆ. ಸೇವಂತಿಗೆ 80-100 ರೂ. ಮಲ್ಲಿಗೆ ಮೀಟರ್ಗೆ 100 ರೂ., ಕನಕಾಂಬರ, ಕಾಕಡ 100 ರೂ. ಹಾಗೂ ಬಾಳೆ ಹಣ್ಣು ಕೆಜಿಗೆ 65-80 ರೂ.ಗೆ ಮಾರಾಟವಾಯಿತು. ತರಕಾರಿ ಮತ್ತು ಹಣ್ಣುಗಳು ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿವೆ. ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸುವ ಸಲುವಾಗಿ ಜವಳಿ ಅಂಗಡಿಗಳಿಗೆ ದಾಂಗುಡಿಯಿಟ್ಟ ಜನರು ತಮಗಿಷ್ಟ ಬಂದ ಬಟ್ಟೆ ಖರೀದಿಸಿದರು.