ಮೈಸೂರು: ಮೈಸೂರು ನಗರದಲ್ಲಿ ಅನಗತ್ಯವಾಗಿ ಗಿಡಮರಗಳನ್ನು ಕಡಿಯುವ ಮೂಲಕ ಪರಿಸರ ನಾಶವಾಗುತ್ತಿದೆ ಎಂದು ದೂರಿರುವ ಪರಿಸರ ಸಂರಕ್ಷಣಾ ಸಮಿತಿ ಕೂಡಲೇ ಪರಿಸರವನ್ನು ರಕ್ಷಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದೆ.
ಮನವಿ ಸಲ್ಲಿಕೆ ವೇಳೆ ಮಾತನಾಡಿದ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷೆ ಭಾನು ಮೋಹನ್ ಅವರು ಮೈಸೂರಿನಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಮಾಡುವ ಕೆಲಸ ನಡೆಯುತ್ತಿದೆ.
ಅಭಿವೃದ್ಧಿ ಮಾಡಲಿ ಆದರೆ ರಸ್ತೆ ಬದಿಯಲ್ಲಿ ಇರುವ ಮರ ಹನನ, ಕಟ್ಟಡ ನಿರ್ಮಾಣ ಮಾಡಲು ನೂರಾರು ಎಕರೆ ಹಸಿರು ನಾಶ , ಇದರ ಜೊತೆಗೆ ಮೈಸೂರು ನಗರಾಭಿವೃದ್ಧಿ ಮತ್ತು ಮೈಸೂರು ಮಹಾನಗರ ಪಾಲಿಕೆ ಯವರು ಉದ್ಯಾನವನದಲ್ಲಿ ಲೈಬ್ರರಿ, ತಂಗುದಾಣ, ಯೋಗ ಮಂದಿರ, ವೇದಿಕೆ, ಹೀಗೆ ಹಲವು ಕಟ್ಟಡಗಳನ್ನು ಕಟ್ಟುತ್ತಾ ಹೋದರೆ ಪರಿಸರ ಉಳಿಯುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಮರಗಳ ನಾಶವಾದರೆ ಪಕ್ಷಿಗಳು ಬದುಕುವುದು ಹೇಗೆ? ಮರಗಳಿದ್ದರೆ ನೆರಳು, ಗಾಳಿ ಸಿಗುತ್ತದೆ, ಮತ್ತೆ ಗಾಳಿಯಲ್ಲಿ ಬರುವ ವೈರಾಣುಗಳನ್ನು ಸೆರೆ ಹಿಡಿಯುತ್ತದೆ. ವಾಹನದ ಹೊಗೆಯನ್ನು ಹೀರುತ್ತದೆ. ಹೀಗೆ ಹಲವಾರು ಉಪಯುಕ್ತವಿರುವ ಮತ್ತು ಪರಿಸರ ಸಮತೋಲನವನ್ನು ಹಿಡಿದಿಟ್ಟುಕೊಳ್ಳುವ ಪರಿಸರವನ್ನು ನಾಶ ಮಾಡಿದರೆ ಮುಂದೆ ಬದುಕುವುದಾದರೂ ಹೇಗೆ ? ಸರ್ಕಾರ ಇತ್ತ ಗಮನಹರಿಸಲಿ ಎಂದು ಮನವಿ ಮಾಡಿದರು.