ಮೈಸೂರು: ಜಿಲ್ಲಾಡಳಿತ, ಜಿಪಂ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಗರದ ಹಾರ್ಡಿಂಜ್ ವೃತ್ತದ ಬಳಿ ಇರುವ ಕುಪ್ಪಣ್ಣ ಪಾರ್ಕ್ನಲ್ಲಿ ಮೂರು ದಿನಗಳ ಮಾವು ಮೇಳ ಆರಂಭವಾಗಿದ್ದು, ಆ ಮೂಲಕ ಉತ್ಪಾದಕರಿಂದ ಗ್ರಾಹಕರಿಗೆ ನೇರವಾಗಿ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ.
ಮೇಳ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾತನಾಡಿ ನೈಸರ್ಗಿಕವಾಗಿ ಮಾಗಿಸುವ ಹಣ್ಣುಗಳು ದೊರೆಯುವುದರಿಂದ ಗ್ರಾಹಕರಿಗೆ ತುಂಬಾ ಅನುಕೂಲವಾಗಲಿದೆ. ಹೇರ್ ಕಂಡೀಷನ್ ಮಳಿಗೆಗಳಲ್ಲಿ ಸಿಗುವ ಹಣ್ಣಿಗೆ ಬೆಲೆ ಜಾಸ್ತಿ. ನೈಸರ್ಗಿಕವಾಗಿ ಹಾಗೂ ರೈತರೇ ನೇರವಾಗಿ ತರುವುದರಿಂದ ಹೆಚ್ಚು ಬೆಲೆ ಇರುವುದಿಲ್ಲ. ಗ್ರಾಹಕರು ರೈತರನ್ನು ಪ್ರೋತ್ಸಾಹಿಸಲು ಮಾವು ಮೇಳಕ್ಕೆ ಆಗಮಿಸಿ ಖರೀದಿಸುವಂತೆ ಸಲಹೆ ನೀಡಿದರು.
ಮೈಸೂರು, ಮಂಡ್ಯ, ರಾಮನಗರ, ಉತ್ತರ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಸಿಗುವಂತಹ ಮಾವಿನ ಹಣ್ಣುಗಳನ್ನು ಒಂದೇ ಸೂರಿನಡಿ ಮಾರಾಟ ಮಾಡಲಾಗುತ್ತಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಮೈಸೂರಿಗೆ ಬರುತ್ತಿರುವುದರಿಂದ ಹೆಚ್ಚಿನ ವಹಿವಾಟು ನಡೆಯುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಂದೇ ಸೂರಿನಡಿ 16 ವಿವಿಧ ತಳಿಯ ಮಾವಿನಹಣ್ಣುಗಳು ದೊರೆಯುತ್ತಿದ್ದು, ಸಾರ್ವಜನಿಕರು ಮೊದಲ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ತಮಗೆ ಇಷ್ಟವಾದ ಹಣ್ಣುಗಳನ್ನು ಖರೀದಿಸಿದರು. ಉದ್ಯಾನವನದ ಆವರಣದಲ್ಲಿ 26 ಮಳಿಗೆಗಳನ್ನು ತೆರೆಯಲಾಗಿದ್ದು, ರೈತರಿಗೆ ಉಚಿತವಾಗಿ ಮಳಿಗೆಗಳನ್ನು ನೀಡಲಾಗಿದೆ. ಮೈಸೂರು, ರಾಮನಗರ ಜಿಲ್ಲೆಯಿಂದ ತಲಾ 11 ಮಳಿಗೆಗಳು, ಮಂಡ್ಯ ಜಿಲ್ಲೆಯ 4 ಮಳಿಗೆಗಳನ್ನು ತೆರೆಯಲಾಗಿದೆ.
ರಾಮನಗರ ಜಿಲ್ಲೆಯ ರೈತರು ಸಕ್ಕರೆಗುತ್ತಿ, ಮಲ್ಲಿಕಾ, ಬಾದಾಮಿ ಮಾವಿನ ಹಣ್ಣಿನ ಮಳಿಗೆಗಳನ್ನು ತೆರೆದಿದ್ದರೆ, ಮೈಸೂರು ಜಿಲ್ಲೆಯಲ್ಲಿ ಬಾದಾಮಿ, ಅಲ್ಫೋನ್ಸಾ, ರಸಪುರಿ ಮೊದಲಾದ ಹಣ್ಣುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕಿಡಲಾಗಿದೆ. ಪ್ರತಿಯೊಂದು ಮಳಿಗೆಗಳ ಮುಂದೆ ದರ ಪಟ್ಟಿಯನ್ನು ಹಾಕಲಾಗಿದ್ದು, ಗ್ರಾಹಕರಿಗೆ ಯಾವುದೇ ಕಡಿಮೆ ಮತ್ತು ಹೆಚ್ಚಿನ ಬೆಲೆಗೆ ಮಾರಾಟ ಮಾಡದಂತೆ ರೈತರಿಗೆ ಸೂಚಿಸಲಾಗಿದೆ.
ಮಾವಿನ ಮೇಳದಲ್ಲಿ ಬಾದಾಮಿ 100, ರಸಪುರಿ 80, ಮಲ್ಲಿಕಾ 80, ಅಮ್ರಪಾಲಿ 110, ಹಿಮಾಮ್ ಪಸಂದ್ 150, ಸೇಂದುರ 50, ದಶೇರಿ 120, ಮಲಗೋವಾ 150, ತೋತಾಪುರಿ 40, ಸಕ್ಕರೆಗುತ್ತಿ 150, ಕಾಲಪಹದ್ 120, ಬೈದನ್ಪಲ್ಲಿ 100 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ.