ಮೈಸೂರು : ಮಗಳ ಸಾವಿನಿಂದ ನೊಂದಿದ್ದ ತಂದೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಜೆಪಿನಗರದಲ್ಲಿ ನಡೆದಿದೆ. ಜೆ.ಪಿ.ನಗರದ ನಿವಾಸಿ ಮಹದೇವಶೆಟ್ಟಿ (46) ಹೃದಯಾಘಾತದಿಂದ ಮೃತಪಟ್ಟಿರುವ ವ್ಯಕ್ತಿ. ಇವರ ಮಗಳು ನಂದಿನಿ ಒಂದು ತಿಂಗಳ ಹಿಂದೆ ಟಿ.ಕೆ.ಲೇಔಟ್ನಲ್ಲಿರುವ ಗಂಡನ ಮನೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು.
ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ ಮಗಳು ಸಾವನ್ನಪ್ಪಿದ್ದಾಳೆ ಎಂದು ಅವರ ತಂದೆ ಮಹದೇವಶೆಟ್ಟಿ ಅವರು ದೂರನ್ನು ನೀಡಿದ್ದರು. ಆದರೆ, ಮಗಳ ಸಾವಿಗೆ ಕಾರಣರಾದವರಿಗೆ ಶಿಕ್ಷೆ ದೊರೆಯಲಿಲ್ಲ ಎಂಬ ನೋವು ಅವರಲ್ಲಿ ಇತ್ತು ಎನ್ನಲಾಗಿದೆ.
ಹೀಗೆ ಮಗಳ ಸಾವಿಗೆ ಕಾರಣರಾದವರಿಗೆ ಶಿಕ್ಷೆ ದೊರೆಯಲಿಲ್ಲ ಎಂಬ ನೋವಿನಿಂದ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಭಾನುವಾರ ಅವರು ಜೆ.ಪಿ.ನಗರದ ಗೊಬ್ಬಳಿಮರದ ಬಳಿ ಇರುವ ಅಂಗಡಿ ಬಳಿ ಕುಳಿತಿರುವ ಸಂದರ್ಭ ಹೃದಯಾಘಾತವಾಗಿದೆ.
ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರು ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ. ಈ ಸಂಬಂಧ ವಿದ್ಯಾರಣ್ಯಪುರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.