ಮೈಸೂರು : ಜಿಲ್ಲೆಯ ಕೆಲವೆಡೆ ವರ್ಷದ ಮೊದಲ ಮಳೆ ಸುರಿದಿದ್ದು, ಸಾಲಿ ಗ್ರಾಮದಲ್ಲಿ ಸಿಡಿಲು ಬಡಿದ ಪರಿಣಾಮ ರೈತನೊಬ್ಬ ಸಾವನ್ನಪ್ಪಿದ್ದಾನೆ.
ಸಾಲಿಗ್ರಾಮದ ಹನಸೋಗೆ ಗ್ರಾಮದ ನಿವಾಸಿ ಸಿದ್ದಲಿಂಗ ನಾಯಕ ಮೃತ ಪಟ್ಟ ದುರ್ದೈವಿ. ಇವರು ದಿಢೀರ್ ಮಳೆ ಸುರಿದ ವೇಳೆ ಆಶ್ರಯಕ್ಕೆಂದು ಮರದಡಿಯಲ್ಲಿ ನಿಂತಿದ್ದಾರೆ. ಈ ವೇಳೆ ಸಿಡಿಲು ಬಡಿದಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇನ್ನು ಬಿಸಿಲ ಬೇಗೆಯಿಂದ ಬಸವಳಿದಿದ್ದ ಮೈಸೂರಿನ ಜನತೆಗೆ ಶನಿವಾರ ಸಂಜೆ ಸುರಿದ ವರ್ಷದ ಮೊದಲ ಮಳೆ ತಂಪೆರೆಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಾಧಾರಣವಾಗಿ ಸುರಿದ ಮಳೆಗೆ ಜನ ಹರ್ಷಗೊಂಡರು.
ದಿನದಿಂದ ದಿನಕ್ಕೆ ಬಿಸಿಲ ಝಳ ಹೆಚ್ಚಾಗುತ್ತಿದೆ. ಸೂರ್ಯನ ಪ್ರಖರ ತಾಪಕ್ಕೆ ಜನ ಹೈರಾಣಾಗಿದ್ದು, ಶನಿವಾರ ಸಂಜೆ ಸುರಿದ ಮಳೆಯಿಂದ ವಾತಾವರಣದಲ್ಲಿ ತಣ್ಣನೆಯ ಭಾವ ಮೂಡಿಸಿತು. ಶನಿವಾರ ಬೆಳಗ್ಗೆಯಿಂದಲೇ ವಿಪರೀತ ಸೆಕೆ ಇತ್ತು. ಮಧ್ಯಾಹ್ನದ ವೇಳೆಗೆ ಮೋಡ ಕವಿದ ವಾತಾವರಣವಿತ್ತು. ಸಂಜೆಯಾಗುತ್ತಿದ್ದಂತೆ ಆಕಾಶ ಸಂಪೂರ್ಣ ಮೋಡ ಮಯವಾಯಿತು. 5.30ರ ಸುಮಾರಿಗೆ ಜೋರಾಗಿ ಗಾಳಿ ಬೀಸಲಾರಂಭಿಸಿ, ಬಳಿಕ ಗುಡುಗು, ಸಿಡಿಲಿನಿಂದ ಮಳೆ ಸುರಿಯಲಾರಂಭಿಸಿತು. ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ಸಾರ್ವಜನಿಕರು, ವಾಹನ ಸವಾರರು ಪರದಾಡಿದರು. ಕೇವಲ ನಗರ ಮಾತ್ರವಲ್ಲದೆ ಗ್ರಾಮಾಂತರ ಭಾಗಗಳಲ್ಲೂ ಉತ್ತಮ ಮಳೆಯಾಗಿದೆ.
ಗಾಳಿಯಿಲ್ಲದೆ ಮಳೆ ಸುರಿದ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ರಂಗಾಯಣದ ಆವರಣದಲ್ಲಿ ನಡೆಯುತ್ತಿರುವ ಬಹುರೂಪಿ ನಾಟಕೋತ್ಸವಕ್ಕೆ ಆಗಮಿಸಿದ ಜನ ಪರದಾಡುವಂತಾಯಿತು. ಪುಸ್ತಕ ಅಂಗಡಿ ಮಳಿಗೆ ಮೇಲೆ ನೀರು ಬಿದ್ದು ಸಮಸ್ಯೆ ಎದುರಾಯಿತು. ಸಂಜೆ ಕೆಲಸಗಳನ್ನು ಮುಗಿಸಿ ಮನೆ ಸೇರುವ ತವಕದಲ್ಲಿದ್ದವರು ಒಂದಷ್ಟು ಹೊತ್ತು ಕಾಯುವಂತಾಯಿತು.