ಮಂಡ್ಯ : ಸಾಮಾನ್ಯವಾಗಿ ಹುಟ್ಟುಹಬ್ಬವನ್ನು ರಾಜಕಾರಣಿಗಳು ಬೃಹತ್ ಹೂವಿನ ಹಾರ ಹಾಕಿ, ಕೇಕ್ ಕತ್ತರಿಸಿ ಪಟಾಕಿ ಹಾರಿಸಿ ಅದ್ಧೂರಿಯಾಗಿ ಆಚರಿಸುತ್ತಾರೆ. ಆದರೆ ಮಂಡ್ಯದ ನಾಗಮಂಗಲ ಶಾಸಕ ಸುರೇಶ್ ಗೌಡ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ.
ಶಾಸಕ ಸುರೇಶ್ ಗೌಡರು 57ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದರು. ಅವರ ಅಭಿಮಾನಿಗಳು ಪ್ರತಿವರ್ಷವೂ ಮನೆಗೆ ಆಗಮಿಸಿ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದರು. ಈಗಾಗಲೇ ಕೊರೊನಾದಿಂದಾಗಿ ಜನರು ಕಷ್ಟದಲ್ಲಿದ್ದು ಹೀಗಿರುವಾಗ ಹುಟ್ಟು ಹಬ್ಬವನ್ನು ಆಚರಿಸುವ ಬಗ್ಗೆ ಹಿಂದೇಟು ಹಾಕಿದ ಅವರು ಹುಟ್ಟು ಹಬ್ಬವನ್ನು ಸಾಮಾಜಿಕ ಕಾರ್ಯದ ಮೂಲಕ ಆಚರಿಸಿ ರೋಗಿಗಳಿಗೆ ಉಪಯೋಗವಾಗುವ ಸಲುವಾಗಿ ರಕ್ತದಾನ ಆಯೋಜಿಸಿದ್ದರು.
ನಾಗಮಂಗಲದ ಕೋಟೆಬೆಟ್ಟ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಏಮ್ಸ್ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ಆಯೋಜಿಸಿದ ಅವರು ಮೊದಲಿಗೆ ತಾವು ರಕ್ತದಾನ ಮಾಡುವ ಮೂಲಕ ಗಮನಸೆಳೆದರು. ಅಷ್ಟೇ ಅಲ್ಲದೆ ತಮ್ಮ ಅಭಿಮಾನಿಗಳಿಗೆ ಪ್ರೇರಣೆಯಾದರು. ಈ ರಕ್ತದಾನ ಶಿಬಿರದಲ್ಲಿ ಅಭಿಮಾನಿಗಳು ಕೂಡ ಪಾಲ್ಗೊಂಡು ರಕ್ತದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.