ಬೆಂಗಳೂರು : ಫೆಬ್ರವರಿ 14 ರಿಂದ ಫೆಬ್ರವರಿ 25ರ ವರೆಗೆ ಜಂಟಿ ಅಧಿವೇಶನ ಕರೆಯಲು ತೀರ್ಮಾನ ಮಾಡಲಾಗಿದೆ. ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಹೇಳಿದ್ದಾರೆ.
ಇಂದು ತಮ್ಮ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಫೆಬ್ರವರಿ 14 ರಿಂದ ಜಂಟಿ ಅಧಿವೇಶನ ಕರೆಯಲು ನಿರ್ಧರಿಸಲಾಗಿದೆ. ಮಾರ್ಚ್ ಮೊದಲ ವಾರದಲ್ಲಿ 2022-23ನೇ ಸಾಲಿನ ಬಜೆಟ್ ಮಂಡಿಸಲಾಗುವುದು ಎಂದರು.
ಇಂದಿನ ಸಚಿವ ಸಂಪುಟ ಸಭೆಯಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಕೋವಿಡ್ ಸ್ಥಿತಿಗತಿ, ಮುಂದಿನ ದಿನಗಳಲ್ಲಿ ಕೋವಿಡ್ ನಿರ್ವಹಣೆ ಬಗ್ಗೆ ಚರ್ಚೆ ನಡೆಸಲಾಗಿದೆ. ನಿಯಮ ಸಡಿಲಿಕೆ ಬಗ್ಗೆ ಬೇರೆ ಬೇರೆ ವಲಯದವರ ಮನವಿ, ಶಾಲಾ ಕಾಲೇಜುಗಳ ವಿಚಾರದ ಬಗ್ಗೆ ಸಹ ಚರ್ಚೆ ಮಾಡಿದ್ದೇವೆ. ಎಲ್ಲ ಸಚಿವರೂ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಈ ಬಗ್ಗೆ ತಜ್ಞರ ಸಮಿತಿಯಿಂದ ವರದಿ ಕೇಳಿದ್ದೇವೆ. ನಿಯಮಗಳ ಸಡಿಲಿಕೆ ಬಗ್ಗೆ ತಜ್ಞರ ವರದಿ ಬಂದ ಬಳಿಕ ಸಭೆ ನಡೆಸಿ ಕೂಲಂಕುಶವಾಗಿ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದಿರು.
ಇನ್ನೂ ಉಸ್ತುವಾರಿ ಸಚಿವರ ನೇಮಕದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಹೈಕಮಾಂಡ್ ಸೂಚಿಸಿದಂತೆ ಉಸ್ತುವಾರಿ ನೇಮಕ ಮಾಡಲಾಗಿದೆ. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಬೇಡ. ಪ್ರಶ್ನೆ ಮಾಡೋದಾದ್ರೆ ನೇರವಾಗಿ ಹೈಕಮಾಂಡ್ ಬಳಿ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.