ಮೈಸೂರು: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್” ರವರ 138ನೇ ಜಯಂತಿಯನ್ನು ಕೃಷ್ಣ ರಾಜ ಯುವ ಬಳಗ ವತಿಯಿಂದ ಶಾಲೆಯ ಮಕ್ಕಳಿಗೆ ಸಮವಸ್ತ್ರ ಶೂ ಹಾಗೂ ಪಠ್ಯ ಸಾಮಗ್ರಿಗಳು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ವಸ್ತು ಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್ ಗೌಡ ಅವರು ದಾನ ಧರ್ಮ ಮಾಡುವುದರಿಂದ ತಮ್ಮಲ್ಲಿರುವ ಸಂಪತ್ತು ಕಡಿಮೆಯಾಗುವುದಿಲ್ಲ ಬದಲಿಗೆ ಸಂಪತ್ತು ಹೆಚ್ಚಾಗುತ್ತಿದೆ ಅದರ ಜತೆಗೆ ಆಯುಷ್ಯ ವೃದ್ಧಿಸುತ್ತದೆ ಪ್ರತಿಯೊಬ್ಬರೂ ತಮ್ಮ ಕೈಲಾದಷ್ಟು ನಿರ್ಗತಿಕರಿಗೆ ಬಡವರಿಗೆ ಸಹಾಯ ಮಾಡಿ ಬಡವರ ಕಣ್ಣೀರು ಒರೆಸುವಂತಹ ಕೆಲಸ ಮಾಡಬೇಕೆಂದು ಹೇಳಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ನಗರಕ್ಕೆ ನೀಡಿರುವ ಕೊಡುಗೆಗಳನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ನಿರ್ಮಿಸಿದ ಕೆ.ಆರ್.ಮಾರುಕಟ್ಟೆಯನ್ನು ನಾವು ದುರಸ್ತಿ ಮಾಡಿಸಿ ಉಳಿಸಿಕೊಳ್ಳಬೇಕು. ಇಲ್ಲವಾದರೆ ಅವರಿಗೆ ಅವಮಾನ ಮಾಡಿದಂತೆ ಆಗುತ್ತದೆ’ ಮೈಸೂರು ರಾಜ್ಯದ ರಾಜರಾಗಿ, ಸಾಮಾಜಿಕ ನ್ಯಾಯ ಅನುಷ್ಠಾನಗೊಳಿಸಿದರು. ಕೃಷಿ, ಬ್ಯಾಂಕಿಂಗ್, ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತಂದರು ಎಂದು ಸ್ಮರಿಸಿದರು.
ಕನ್ನಡ ಸಾಹಿತ್ಯ ಪರಿಷತ್ ನ ನಿಕಟಪೂರ್ವ ಅಧ್ಯಕ್ಷ ಡಾ. ವೈ ಡಿ ರಾಜಣ್ಣ ಮಾತನಾಡಿ ಮೈಸೂರು ಸಂಸ್ಥಾನ ಕಂಡ ಅತೀ ಪ್ರಜಾ ವಾತ್ಸಲ್ಯ ಹೊಂದಿದ್ದಂತಹ ಮಹಾರಾಜರು ನಮ್ಮ ನಾಲ್ವಡಿ ಕೃಷ್ಣರಾಜ ಒಡೆಯರು ಬಹುಶಃ ವಿಶ್ವದ ಅರಸೊತ್ತಿಗೆ ಸಂಪ್ರದಾಯದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರು ನಮ್ಮ ನಾಲ್ವಡಿಯವರು ಅವರ ಸಂಸ್ಥಾನವನ್ನು ಸರ್ವತೋಮುಖ ಬೆಳವಣಿಗೆಗೆ ತುಂಬಾ ಶ್ರಮಿಸಿದಂಥವರು ಒಳ್ಳೆಯ ದಕ್ಷ ದಿವಾನರುಗಳನ್ನು ನೇಮಿಸಿ ಇಡೀ ಸಂಸ್ಥಾನವನ್ನು ಮಾದರಿ ಸಂಸ್ಥಾನವಾಗಿ ರೂಪಿಸಿದ್ದರು ಎಂದು ಹೇಳಿದರು.
ಮಹಾತ್ಮಾ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಮೈಸೂರು ಸಂಸ್ಥಾನಕ್ಕೆ ಎರಡ್ಮೂರು ಬಾರಿ ಆಗಮಿಸಿದ್ದರು ಅವರು ನಾಲ್ವಡಿಯವರ ಆಡಳಿತವನ್ನು ನೋಡಿ ನಮ್ಮ ಮೈಸೂರು ಸಂಸ್ಥಾನವು ರಾಮರಾಜ್ಯ. ಇಲ್ಲಿಗೆ ಯಾವ ಸ್ವಾತಂತ್ರ್ಯ ಹೋರಾಟವು ಬೇಕಾಗಿಲ್ಲ ಎಂಬುದಾಗಿ ಶ್ಲಾಘನೆ ಮಾಡಿದ್ದರು ಎಂದರು.
ಕನ್ನಡಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ, ಚುಟುಕು ಸಾಹಿತ್ಯ ಪರಿಷತ್ ನ ಎಂ.ಜಿ.ಆರ್ ಅರಸ್,ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸಪ್ಪ, ಬಿಜೆಪಿ ಮಾಧ್ಯಮ ವಕ್ತಾರ ಕೇಬಲ್ ಮಹೇಶ್, ಕೃಷ್ಣರಾಜ ಯುವ ಬಳಗದ ಅಧ್ಯಕ್ಷರಾದ ನವೀನ್ ಕೆಂಪಿ, ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ವಿನಯ್ ಕಣಗಾಲ್, ಅಕ್ಕನ ಬಳಗ ಸಂಸ್ಥೆ ಅಧ್ಯಕ್ಷರಾದ ಗೀತಾ ಗುರುಸ್ವಾಮಿ ಸೇರಿದಂತೆ ಹಲವರಿದ್ದರು.