ಮೈಸೂರು: ರಾಷ್ಟ್ರೀಯ ಡೆಂಗೀ ದಿನಾಚರಣೆ ಅಂಗವಾಗಿ ನಗರದ ಮಂಡಿ ಮೊಹಲ್ಲಾ ಹಾಗೂ ಮೇದರ್ ಬ್ಲಾಕ್ ಸುತ್ತಮುತ್ತ ನಿವಾಸಿಗಳಿಗೂ ಹಾಗೂ ವ್ಯಾಪಾರಸ್ಥರಿಗೆ ಜೀವಧಾರ ರಕ್ತನಿಧಿ ಕೇಂದ್ರದ ವತಿಯಿಂದ ಡೆಂಗೀ ಹಾಗೂ ಚಿಕನ್ ಗುನ್ಯಾ ನಿಯಂತ್ರಣದ ಬಗ್ಗೆ ಸಾರ್ವಜನಿಕರಿಗೆ ಹಾಗೂ ವ್ಯಾಪಾರಸ್ಥರಿಗೆ ಮನೆ ಮನೆಗೆ ತೆರಳಿ ಅರಿವು ಮೂಡಿಸುವ ಕಾರ್ಯ ನಡೆಯಿತು.
ಡೆಂಗೀ ಹಾಗೂ ಚಿಕನ್ ಗುನ್ಯಾ ಹಾಗೂ ಸ್ವಚ್ಛತೆಯ ಬಗ್ಗೆ ಜಾಗೃತಿಯ ಭಿತ್ತಿಪತ್ರ ಹಿಡಿದು ಕರಪತ್ರ ನೀಡಿ ಅರಿವು ಮೂಡಿಸಲಾಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಸೊಳ್ಳೆಗಳ ನಿಯಂತ್ರಣದಲ್ಲಿ ಸಾರ್ವಜನಿಕರ ಪಾತ್ರ ಅತಿ ಮುಖ್ಯವಾಗಿದೆ. ಸಾರ್ವಜನಿಕರು ಸೊಳ್ಳೆಗಳ ನಿಯಂತ್ರಣದಲ್ಲಿ ಮುತುವರ್ಜಿ ವಹಿಸದಿದ್ದರೆ ಸೊಳ್ಳೆಗಳ ನಿಯಂತ್ರಣ ಅಸಾಧ್ಯ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸೊಳ್ಳೆಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಬೇಕು. ಡೆಂಗೀ ಜ್ವರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಾವೆಲ್ಲರೂ ಮುಂದಾಗಬೇಕು. ಹಿಂದುಳಿದ ಪ್ರದೇಶಗಳಲ್ಲಿ ತೆರಳಿ ಅರಿವು ಮೂಡಿಸುವ ಜಾಗೃತಿ ಕಾರ್ಯವನ್ನು ಇನ್ನೂ ಹೆಚ್ಚಾಗಿ ಮಾಡೋಣ. ಇತರ ಸಂಘಟನೆಗಳು ನಗರ ಮತ್ತು ಹಳ್ಳಿಗಳಲ್ಲಿ ಡೆಂಗ್ಯೂ ಜ್ವರ ಹಾಗೂ ಚಿಕನ್ ಗುನ್ಯಾ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಮಳೆಗಾಲ ಆರಂಭವಾಗಿರುವುದರಿಂದ ನೀರಿನ ಸೌಲಭ್ಯ ಕಡಿಮೆಯಾಗಿ ಜನರಲ್ಲಿ ನೀರು ಶೇಖರಣೆ ಮಾಡಿಟ್ಟುಕೊಳ್ಳುವ ಹವ್ಯಾಸ ಹೆಚ್ಚಾಗುತ್ತದೆ. ಇದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಕಂಡುಬರುತ್ತದೆ ಡೆಂಗೀ, ಚಿಕನ್ ಗುನ್ಯಾ ರೋಗಗಳು ವ್ಯಾಪಕವಾಗಿ ಹರಡುವ ಸಂಭವವಿರುವುದರಿಂದ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ಮುತ್ತಣ್ಣ, ಕೇಬಲ್ ವಿಜಿ, ಸೂರಜ್, ಸದಾಶಿವ್, ಚಂದ್ರು, ಶಶಿ, ವೈದ್ಯರಾದ ಮಮತಾ, ರಶ್ಮಿ, ಸುರೇಶ್, ಪೂಜಾ, ಭಾರತಿ, ರೇವಜಿತ್ ಇನ್ನಿತರರು ಹಾಜರಿದ್ದರು.