ಮೈಸೂರು: ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಟಿ.ಎಸ್.ಸುಬ್ಬಣ್ಣ ಸಾರ್ವಜನಿಕ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಟಿ.ಎಸ್.ಸುಬ್ಬಣ್ಣ ನವರ ಅಸ್ಥಿಯನ್ನು ಮೂವತ್ತೊಂದು ಬಳಿಕ ತಿರುಮಕೂಡಲಿನ ತ್ರಿವೇಣಿ ಸಂಗಮದಲ್ಲಿ ಸೋಮವಾರ ವಿಸರ್ಜನೆ ಮಾಡಲಾಗಿದೆ.
ಶಿಕ್ಷಣ ಸಂಸ್ಥೆಯ ಅಧ್ಯಕ್ಷರೂ ಆದ ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಶಿಕ್ಷಕ-ಶಿಕ್ಷಕಿಯರು ಅಸ್ಥಿ ವಿಸರ್ಜನೆ ಕಾರ್ಯದಲ್ಲಿ ಭಾಗವಹಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ಶಿಕ್ಷಣ ಸಂಸ್ಥೆ ಸಂಸ್ಥಾಪಕ ಟಿ.ಎಸ್.ಸುಬ್ಬಣ್ಣ 1991 ರಲ್ಲೇ ಮೃತ ಪಟ್ಟಿದ್ದರಾದರೂ, ಸ್ವಲ್ಪ ಅಸ್ಥಿಯನ್ನು ಸಂರಕ್ಷಿಸಿ ಇಡಲಾಗಿತ್ತು. ಸೋಮವಾರ ಬುದ್ದ ಪೌರ್ಣಿಮೆ ಹಿನ್ನೆಲೆಯಲ್ಲಿ ದಕ್ಷಿಣ ಕಾಶೀ ಎಂದೇ ಪ್ರಸಿದ್ದಿ ಪಡೆದ ತ್ರಿವೇಣಿ ಸಂಗಮದ ನಡುಹೊಳೆ ಬಸವನ ಸ್ಥಳದಲ್ಲಿ ಶಾಸಕ ನಿರಂಜನಕುಮಾರ್ ಭಕ್ತಿ ಪೂರಕವಾಗಿ ಅಸ್ಥಿಯನ್ನು ವಿಸರ್ಜಿಸಿದರು. ಮೊದಲು ತ್ರಿವೇಣಿ ಸಂಗಮದಲ್ಲಿ ಅಸ್ತಿಗೆ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ಪೂಜೆ ಸಲ್ಲಿಸಲಾಯಿತು. ನಂತರ ಅಸ್ಥಿಯನ್ನು ಸಂಗಮದಲ್ಲಿ ವಿಸರ್ಜಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕ ಸಿ.ಎಸ್.ನಿರಂಜನಕುಮಾರ್ ಮಹಾತ್ಮ ಗಾಂಧೀಜಿಯವರ ಸಬರಮತಿ ಆಶ್ರಮದಲ್ಲಿ ಗಾಂಧೀಜಿಯವರೊಂದಿಗೆ ಒಡನಾಟ ಹೊಂದಿದ್ದ ಟಿ.ಎಸ್.ಸುಬ್ಬಣ್ಣರವರು ಅವರ ಪ್ರೇರಣೆಯಿಂದ ಮೈಸೂರಿಗೆ ವಾಪಸ್ ಬಂದು ಬಡ ಮಕ್ಕಳಿಗೆ ಶಿಕ್ಷಣ ನೀಡಬೇಕೆನ್ನುವ ಉದ್ದೇಶದಿಂದ ಶಾಲೆಗಳು ಮತ್ತು ಹಾಸ್ಟೆಲ್ಗಳನ್ನು ಆರಂಭಿಸಿದರಾದರೂ, ಶಾಲೆಗಳನ್ನು ನಡೆಸಲು ಅವರ ಬಳಿ ಯಾವುದೇ ಆದಾಯ ಇರಲಿಲ್ಲ. ದೇಣಿಗೆ ಸಂಗ್ರಹಿಸಿ ಶಾಲೆಗಳನ್ನು ಬಹು ದೊಡ್ಡ ಮಟ್ಟಕ್ಕೆ ಬೆಳೆಸಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆ ಸೇರಿದಂತೆ 11 ಕಡೆ ಶಾಲೆ ಹಾಗೂ ಎರಡು ಕಡೆ ಹಾಸ್ಟೆಲ್ಗಳನ್ನು ತೆರೆದ ಕೀರ್ತಿ ಅವರದ್ದಾಗಿದೆ. 1991 ರಲ್ಲಿ ಸುಬ್ಬಣ್ಣ ರವರು ಕಾಲವಾದ ನಂತರ ಸ್ವಲ್ಪ ಪ್ರಮಾಣದಲ್ಲಿ ಅವರ ಅಸ್ಥಿಯನ್ನು ಇಟ್ಟುಕೊಂಡು ಅವರ ಪುತ್ಥಳಿಯನ್ನು ನಿರ್ಮಿಸಿ ಅದರ ತಳಭಾಗದಲ್ಲಿ ಅಸ್ಥಿಯನ್ನು ಇಡುವ ಉದ್ದೇಶ ಹೊಂದಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಅಸ್ಥಿಯನ್ನು ವಿಸರ್ಜನೆ ಮಾಡಬೇಕೆಂಬ ಅಭಿಪ್ರಾಯ ಬಂದ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವರ್ಗದವರ ತೀರ್ಮಾನದಂತೆ ಇಂದು ತ್ರಿವೇಣಿ ಸಂಗಮದಲ್ಲಿ ಅಸ್ತಿ ವಿಸರ್ಜಿಸಿ ಅವರ ಆತ್ಮಕ್ಕೆ ಶಾಂತಿ ಕೋರಿದ್ದೇವೆ ಎಂದು ತಿಳಿಸಿದರು.