ಮೈಸೂರು: ತಾಲೂಕು ಕೇಂದ್ರವಾಗಿರುವ ಸರಗೂರಿನಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದ್ದರೂ ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಮಾಡದ ಕಾರಣ ನೀರು ಹರಿಯದೆ ಕೆರೆಯಂತೆ ನಿಲ್ಲುತ್ತಿರುವುದರಿಂದ ಇದೀಗ ಪ್ರಯಾಣಿಕರು ಪರದಾಡುವಂತಾಗಿದೆ.
ಪ್ರತಿ ಸಲ ಮಳೆ ಬಂದಾಗಲೂ ಬಸ್ ನಿಲ್ದಾಣದಲ್ಲಿ ನೀರು ಸಂಗ್ರಹವಾಗುತ್ತಿದ್ದು, ನೀರನ್ನು ಹೊರಗೆ ಹಾಕುವುದೇ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಮೇಲ್ನೋಟಕ್ಕೆ ಬಸ್ ನಿಲ್ದಾಣದ ಕಟ್ಟಡವು ಉತ್ತಮವಾಗಿದ್ದು, ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಿಸಿದ ಕಾರಣ ಮಳೆ ಬಂದಾಗ ಸಂಗ್ರಹವಾಗುವ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ಬಸ್ ನಿಲ್ದಾಣದೊಳಗೆ ನೀರು ತುಂಬಿಕೊಂಡು ಅಸಹ್ಯ ಮೂಡಿಸುತ್ತಿದೆ. ಅಷ್ಟೇ ಅಲ್ಲದೆ ಪ್ರಯಾಣಿಕರು ಒಳಗೆ ಕೂರಲಾಗದ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತದೆ.
ಮಳೆ ಸುರಿದಾಗ ಕೊಳಚೆ ನೀರೆಲ್ಲ ಒಂದೆಡೆ ಸಂಗ್ರಹವಾಗಿ ಹೊರಹೋಗದೆ ಅಲ್ಲಿಯೇ ನಿಲ್ಲುವುದರಿಂದ ದುರ್ವಾಸನೆ ಬೀರುತ್ತಿದ್ದು, ಪ್ರಯಾಣಿಕರು ಮೂಗು ಮುಚ್ಚಿಕೊಂಡು ಬಸ್ ಗೆ ಕಾಯಬೇಕಾಗಿದೆ. ಜತೆಗೆ ಇದರಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡುವ ಭಯವೂ ಪ್ರಯಾಣಿಕರಲ್ಲಿ ಹುಟ್ಟಿಕೊಂಡಿದೆ.
ಈಗಾಗಲೇ ಕಳೆದ ಒಂದು ವಾರದ ಹಿಂದೆ ಸುರಿದ ಮಳೆ ನೀರು ಹಾಗೆಯೇ ನಿಂತಿದ್ದು, ದುರ್ವಾಸನೆ ಬೀರುತ್ತಿದ್ದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೂಗು ಮುಚ್ಚಿ ಎಷ್ಟು ಹೊತ್ತು ಕುಳಿತುಕೊಳ್ಳಲು ಸಾಧ್ಯ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ನೀರು ಹೊರಗೆ ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಸಂಬಂಧಿಸಿದವರಲ್ಲಿ ಮನವಿ ಮಾಡಿದ್ದಾರೆ. ಸಂಬಂಧಪಟ್ಟ ಇಲಾಖಾಧಿಕಾರಿಗಳು ಇನ್ನಾದರೂ ಕ್ರಮ ಕೈಗೊಂಡು ಪ್ರಯಾಣಿಕರು ನೆಮ್ಮದಿಯಾಗಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಡುತ್ತಾರಾ ಎಂಬುದನ್ನು ಕಾದುನೋಡಬೇಕಾಗಿದೆ.