ಮೈಸೂರು: ಮಾರಕ ಕೊರೊನಾ ಸೋಂಕಿನ ಆತಂಕದ ನಡುವೆಯೂ ನಿಷ್ಠೆ ಮತ್ತು ನಿಸ್ವಾರ್ಥ ಭಾವನೆಯಿಂದ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕರನ್ನು ಎಲ್ಲರೂ ಗೌರವಿಸಬೇಕು ಎಂದು ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಹಾಗೂ ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಸಹ ಸಂಚಾಲಕ ಗಿರೀಶ್ ಹೇಳಿದರು.
ಮೈಸೂರು ನಗರ ಬಿಜೆಪಿ ವೈದ್ಯಕೀಯ ಪ್ರಕೋಷ್ಠ ವತಿಯಿಂದ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸ್ಪಂದನ ಆಸ್ಪತ್ರೆಯ ದಾದಿಯರ ಜೊತೆ ಫ್ಲಾರೆನ್ಸ್ ನೈಟಿಂಗೆಲ್ ಅವರ ಜನ್ಮದಿನದಂದು ವಿಶ್ವ ದಾದಿಯರ ದಿನವನ್ನಾಗಿ ಆಚರಿಸಲಾಯಿತು. ಮೇಣದ ಬತ್ತಿ ಹಿಡಿದು ಫ್ಲಾರೆನ್ಸ್ ನೈಟಿಂಗೆಲ್ ಸ್ಮರಿಸುತ್ತ ಆ ನಂತರ ಆಸ್ಪತ್ರೆಯಲ್ಲಿ ಹಲವು ವರ್ಷದಿಂದ ದಾದಿಯರಾಗಿ ಸೇವೆ ಸಲ್ಲಿಸಿದ ಝಾನ್ಸಿ, ಶಿವಕುಮಾರ್, ರಂಜಿತಾ, ರಾಜಮ್ಮ, ನಟರಾಜ್, ಭೂಮಿಕಾ, ಸ್ಮಿತಾ, ಮಹದೇವಮ್ಮ ಅವರಿಗೆ ಸನ್ಮಾನಿಸಿ ಮಾತನಾಡಿ ಪ್ರತಿಯೊಬ್ಬ ರೋಗಿಗೆ ಇನ್ನೊಬ್ಬ ತಾಯಿಯಂತೆ ಸೇವೆ ಸಲ್ಲಿಸುವ ನರ್ಸ್ಗಳು ಧನ್ಯರು ಎಂದರು.
ಆರೋಗ್ಯ ಸೇವಾ ಕ್ಷೇತ್ರದಲ್ಲಿ ಪರಿಣಾಮಕಾರಿ ಯಾದ ಶುಶ್ರೂಷಾ ವಿಭಾಗಕ್ಕೆ ದಾದಿಯರದೇ ನೇತೃತ್ವ. ವೈದ್ಯರ ನಿರ್ದೇಶನವನ್ನು ಯಥಾವತ್ತಾಗಿ ಪಾಲಿಸಲು ದಾದಿಯರು ಸಹಕರಿಸುತ್ತಾರೆ. ವಿಶ್ವ ದಾದಿಯರ ದಿನಾಚರಣೆಯ ನಿಮಿತ್ತ ಶುಶ್ರೂಷೆ ಸೇವೆಯ ಬಗ್ಗೆ ಉಲ್ಲೇಖಿಸುವುದು ಔಚಿತ್ಯದಾಯಕ ಎಂದರು.
ಒಬ್ಬ ನರ್ಸ್ ತಾನು ಆರೈಕೆ ಮಾಡೋ ರೋಗಿ ಯಾವ ಜಾತಿ, ಯಾವ ಧರ್ಮ, ಯಾವ ಪಕ್ಷ, ಯಾವ ಊರು ಎಂಬೆಲ್ಲ ವಿಚಾರದ ಬಗ್ಗೆ ನೋಡುವುದೇ ಇಲ್ಲ. ರೋಗಿ ಯಾರೇ ಇರಲಿ, ಅವರನ್ನು ಮಗುವಿನಂತೆ ಆರೈಕೆ ಮಾಡಿ ಹುಷಾರಾಗಿಸಿ, ಮನೆಗೆ ಕಳುಹಿಸೋದಷ್ಟೇ ಅವರ ಏಕೈಕ ಗುರಿ ಎಂದರು.
ಫ್ಲಾರೆನ್ಸ್ ನೈಟಿಂಗೆಲ್ ಅವರ ಜನ್ಮದಿನವನ್ನೇ ವಿಶ್ವ ದಾದಿಯರ ದಿನವನ್ನಾಗಿ ಆಚರಿಸುವುದು. ಅನೇಕರಿಗೆ ತಿಳಿದ ವಿಚಾರ. 1854ರ ಕ್ರೈಮನ್ ಯುದ್ಧದಲ್ಲಿ ಗಾಯಗೊಂಡ ಸೇನಾನಿಗಳ ಆರೈಕೆ ಮಾಡಿ ಜಗತ್ತಿನಾದ್ಯಂತ ಗೌರವ ಪಡೆದ ನೈಟಿಂಗೆಲ್ ವೃತ್ತಿ ಘನತೆಯನ್ನು ಎತ್ತಿ ಹಿಡಿದ ಅನುಭವಿ ದಾದಿ. ಲಂಡನ್ನ ಪ್ರಮುಖ ಆಸ್ಪತ್ರೆಯಲ್ಲಿ ದಾದಿಯಾಗಿ ಸೇವೆ ಸಲ್ಲಿಸಿದ ಅವರು ಮಾನವೀಯತೆಯ ಪ್ರತಿಪಾದಕರಾಗಿಯೂ ಪ್ರಸಿದ್ಧರು. ಆಧುನಿಕ ನರ್ಸಿಂಗ್ ಶಿಕ್ಷಣದ ಪ್ರಗತಿ ಗಾಗಿ ಕೊಡುಗೆ ನೀಡಿದ ಫ್ಲಾರೆನ್ಸ್ ನೈಟಿಂಗೆಲ್ ನರ್ಸಿಂಗ್ ವಿಜ್ಞಾನ ಕಾಲೇಜನ್ನೂ ಸ್ಥಾಪಿಸಿದ್ದಾರೆ ಎಂದು ಸ್ಮರಿಸಿದರು
ಇದೇ ಸಂದರ್ಭದಲ್ಲಿ ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಸಂಚಾಲಕರಾದ ಡಾ॥ರವೀಂದ್ರನಾಥ್,ವೈದ್ಯಕೀಯ ಪ್ರಕೋಷ್ಠ ಸದಸ್ಯರಾದ ಶಶಿಧರ್ , ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕರಾದ ಮುತ್ತಣ್ಣ , ವೈದ್ಯರಾದ ಡಾ.ನವೀನ್ , ಡಾ.ಚೈತ್ರಾ , ಡಾ.ನಿವೇದಿತಾ ,ಡಾ.ಕುಶಾಲ್ ಇನ್ನಿತರರು ಹಾಜರಿದ್ದರು.