News Karnataka Kannada
Thursday, May 02 2024
ಮೈಸೂರು

ಮೈಸೂರು: ಜನತೆಗೆ ಕ್ರಿಸ್ಮಸ್‍ ಶುಭಹಾರೈಸಿದ ಧರ್ಮಾಧ್ಯಕ್ಷರು

Mysuru
Photo Credit :

ಮೈಸೂರು : ಕೊರೊನಾದಂತಹ ಸಾಂಕ್ರಾಮಿಕ ರೋಗವು ಕೊನೆಗೊಳ್ಳುವ ಮೂಲಕ ಬರಲಿರುವ ಕ್ರಿಸ್ಮಸ್ ಹಬ್ಬವು ಶುಭ ಸುದ್ದಿಯನ್ನು ತರಲಿ. ಜನಜೀವನ ಸಹಜ ಸ್ಥಿತಿಗೆ ಹಿಂದಿರುಗಲಿ ಎಂದು ಮೈಸೂರು ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಡಾ.ಕೆ.ಎ.ವಿಲಿಯಂ ಅವರು ಹಾರೈಸಿದ್ದಾರೆ.

ನಗರದ ಬಿ.ಎನ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಜನತೆಗೆ ಕ್ರಿಸ್ಮಸ್ ಹಬ್ಬದ ವಿಶೇಷ ಸಂದೇಶವನ್ನು ನೀಡಿದ ಅವರು, ಕೊರೋನಾ ಚಂಡಮಾರುತದ ನಡುವೆ ತಂಗಾಳಿಯಾಗಿ ಕಿಸ್ಮಸ್ ಹಬ್ಬವು ಬಂದಿದೆ. ಜನರು ಕೊರೋನಾ ಸಾಂಕ್ರಾಮಿಕ ರೋಗದ ಒತ್ತಡ ಮತ್ತು ಅಸ್ವಸ್ಥೆಯ ಮೂಲಕ ನಿರಂತರವಾಗಿ ಮಾಸ್ಕ್ ಗಳನ್ನು ಧರಿಸುತ್ತ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುತ್ತ ಆತಂಕಕ್ಕೆ ಒಳಗಾಗಿದ್ದಾರೆ. ಇದು ನಮ್ಮ ಸಾಮಾನ್ಯ ಸಂಬಂಧಗಳ ಮೇಲೂ ಪರಿಣಾಮ ಬೀರಿದೆ. ನಮ್ಮ ಪ್ರಾರ್ಥನಾ ಕೂಟಗಳಿಗೆ ಸಹ ಮತ್ತು ದೇವಾಲಯಗಳಲ್ಲಿ ಇನ್ನಿತರ ಪವಿತ್ರ ಸ್ಥಳಗಳಲ್ಲಿ ತೊಂದರೆಯಾಗಿದೆ. ದೇವರು ಕೂಡ ನಮ್ಮಿಂದ ದೂರ ಇದ್ದಾರೇನೋ ಎಂಬಂತೆ ಕಾಣಿಸುತ್ತಿದೆ. ಇಂತಹ ಕತ್ತಲೆಯಾದ ವಾತಾವರಣದಲ್ಲಿ ಕ್ರಿಸ್ತ ಜಯಂತಿ ಹಬ್ಬವು ಹೊಸ ಭರವಸೆಯೊಂದಿಗೆ ಬರುತ್ತಿದೆ ಎಂದರು.

ಇಮ್ಯಾನುಯೆಲ್ ದೇವರು ನಮ್ಮೊಂದಿಗೆ ಇದ್ದಾರೆ ಎಂಬ ಸತ್ಯವನ್ನು ಸಾಬೀತುಪಡಿಸುವುದೇ ಈ ಹಬ್ಬದ ಮೂಲ ಉದ್ದೇಶವಾಗಿದೆ. ಜನರ ನಂಬಿಕೆ, ಸಂಪ್ರದಾಯಗಳನ್ನು ಲೆಕ್ಕಿಸದೆ ಕ್ರಿಸ್ತಜಯಂತಿ ಹಬ್ಬವು ಪ್ರಪಂಚದಾದ್ಯಂತ ಸದಾ ಸಂತೋಷದಾಯಕ ಆಚರಣೆಯ ಸಮಯವಾಗಿದೆ. ಜನರು ದುಃಖಿತರಾಗಿರಲು ನೂರಾರು ಕಾರಣಗಳಿರಬಹುದು. ಆದರೆ ಕ್ರಿಸ್ತಜಯಂತಿ ಹಬ್ಬವು ನಮ್ಮ ಮನಸ್ಸಿಗೆ ಸಂತಸ ತರುತ್ತದೆ. ನಾವು ಕ್ರಿಸ್ತಜಯಂತಿಯನ್ನು ಆಚರಿಸುವಾಗ ಈ ವರ್ಷವಿಡೀ ದೇವರು ನಮ್ಮ ವೈಯುಕ್ತಿಕ ಜೀವನದಲ್ಲಿ ಮಾಡಿರುವ ಮಹತ್ಕಾರ್ಯಗಳನ್ನು ಹಾಗೂ ಅವರ ಕರುಣೆಗಳನ್ನು ಸ್ಮರಿಸೋಣ ಎಂದು ತಿಳಿಸಿದರು.

ಕ್ರಿಸ್ಮಸ್ ಪರಸ್ಪರರಲ್ಲಿ ಕ್ರಿಸ್ತನನ್ನು ಕಂಡುಕೊಳ್ಳುವ ಮತ್ತು ಪ್ರೀತಿ, ಶಾಂತಿ ಮತ್ತು ಸಂತೋಷದ ವಿಶ್ವವನ್ನು ನಿರ್ಮಿಸುವ ಕಾಲವಾಗಲಿ, ಅಸೂಯೆ, ಅಹಂಕಾರ, ದ್ವೇಷ, ಸೇಡು ತೀರಿಸಿಕೊಳ್ಳುವ ಮನೋಭಾವ, ಸ್ವಾರ್ಥ ಮತ್ತು ಇತರ ದುಷ್ಟಪ್ರವೃತ್ತಿಗಳನ್ನು ನಾವು ಬದಿಗಿಟ್ಟು ಹೊಸ ಮತ್ತು ಉತ್ತಮ ಸಮಾಜಕ್ಕೆ ಅಡಿಪಾಯ ಹಾಕುವ ಅವಕಾಶವನ್ನು ಕಲ್ಪಿಸಿಕೊಡುವ ಸಂದರ್ಭ ಇದಾಗಿರಲಿ. ಈ ಕ್ರಿಸ್ಮಸ್ ಹಬ್ಬ ಶುಭ ಸುದ್ದಿಯನ್ನು ತರಲಿ. ಸಾಂಕ್ರಾಮಿಕ ರೋಗವು ಕೊನೆಗೊಳ್ಳಲಿ. ಜನರು ಶೀಘ್ರ ಸಂಪೂರ್ಣ ಸಹಜ ಸ್ಥಿತಿಗೆ ಹಿಂದಿರುಗಲಿ ಎಂದು ಇದೇ ವೇಳೆ ಪ್ರಾರ್ಥಿಸಿದರು.

ಮತಾಂತರ ನಿಷೇಧ ಕಾಯ್ದೆ ಬಗ್ಗೆ ಮಾತನಾಡಿ ಮತಾಂತರ ಕಾಯ್ದೆಯಿಂದ ನಮಗೆ ಯಾವುದೇ ಭಯ ಇಲ್ಲ. ನಾವು ಆ ರೀತಿಯ ತಪ್ಪುಗಳನ್ನು ಮಾಡ್ತಿಲ್ಲ. ನಾವು ಯಾರನ್ನು ಬಲವಂತವಾಗಿ ಮತಾಂತರ ಮಾಡ್ತಿಲ್ಲ. ಸಮಾಜ ಸೇವೆ ಕ್ರೈಸ್ತ ಧರ್ಮದ ಮೂಲ ಉದ್ದೇಶ. ಏನೂ ಇಲ್ಲದೇ ಅಪವಾದ, ತೊಂದರೆ ಮಾಡೊದು ಸರಿಯಲ್ಲ. ರಾಜ್ಯದಲ್ಲಿ ಈ ಕಾಯ್ದೆ ಜಾರಿಯ ಅಗತ್ಯತೆ ಇಲ್ಲ. ಆ ರೀತಿ ಬಲವಂತ ಮತಾಂತರ ಮಾಡಿದ್ರೆ ಕಾಯ್ದೆ ತರದೇ ಅಂತವರ ವಿರುದ್ಧ ಕ್ರಮಕೈಗೊಳ್ಳಿ. ಆದರೆ ಕಾಯ್ದೆ ದುರುಪಯೋಗ ಪಡಿಸಿಕೊಂಡು ತೊಂದರೆ ಮಾಡುವ ಸಾಧ್ಯತೆ ಇದೆ. ಕಾಯ್ದೆಯಿಂದ ಒಂದು ಧರ್ಮಕ್ಕೆ ತೊಂದರೆ ಮಾಡಬಾರದು ಎಂದು ತಿಳಿಸಿದರು.

ಸರ್ಕಾರ ಹೊರಡಿಸಿರುವ ಕೊರೊನಾ ನಿಯಮದ ಸುತ್ತೋಲೆಯಲ್ಲಿ ಹೊಸ ವರ್ಷಾಚರಣೆಗೆ ಹಲವು ನಿರ್ಬಂಧಗಳನ್ನು ಹೇರಿದೆ. ಆದರೆ ಕ್ರಿಸ್ಮಸ್ ಆಚರಣೆಗೆ ಹೆಚ್ಚಿನ ನಿರ್ಬಂಧ ಹೇರಿಲ್ಲ. ಸರ್ಕಾರದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಸರ್ಕಾರ ನೀಡಿರುವ ಮಾರ್ಗಸೂಚಿಯ ಪ್ರಕಾರ ಕ್ರಿಸ್ಮಸ್ ಆಚರಣೆ ಮಾಡಲಾಗುವುದು ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 1 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು