ಮೈಸೂರು : ಅರಮನೆ ಆವರಣದಲ್ಲಿ ಪುಷ್ಪ ಪ್ರದರ್ಶನ ಆರಂಭವಾಗಿದ್ದು ಜ.2ರವರೆಗೆ ನಡೆಯಲಿದೆ. ಕೊರೊನಾ ಕಾರಣದಿಂದಾಗಿ ಕಳೆದ ವರ್ಷ ನಡೆದಿರಲಿಲ್ಲ.
ಈ ಬಾರಿ ಆರಂಭವಾಗಿರುವ ಪುಷ್ಪ ಪ್ರದರ್ಶನವು ಪುಷ್ಪ ಪ್ರೇಮಿಗಳನ್ನು ಸೆಳೆಯುತ್ತಿದ್ದು ವಾರಾಂತ್ಯದ ದಿನ ಮತ್ತು ಕ್ರಿಸ್ ಮಸ್ ಹಬ್ಬದ ರಜೆಯಿರುವುದರಿಂದ ಜನ ಪುಷ್ಪ ಪ್ರದರ್ಶನ ನೋಡಲು ಇತ್ತ ಬರುತ್ತಿದ್ದಾರೆ. ಪುಷ್ಪ ಪ್ರದರ್ಶನ ವೀಕ್ಷಣೆಗೆ ಸಾರ್ವಜನಿಕರಿಗೆ ಬೆಳಗ್ಗೆ 10ರಿಂದ ರಾತ್ರಿ 8.30ರವರೆಗೆ ಅವಕಾಶ ಮಾಡಿಕೊಡಲಾಗಿದೆ. ಕೋವಿಡ್ ಕಾರಣಕ್ಕಾಗಿ ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.
ಅಲ್ಲದೆ ಕ್ರಿಸ್ಮಸ್ ಹಾಗೂ ಹೊಸ ವರ್ಷದಂದು ಸಂಭ್ರಮ ಹೆಚ್ಚಿಸಲು ಶಬ್ಧ ರಹಿತ ಪಟಾಕಿಯನ್ನು ಡಿ.31ರ ಮಧ್ಯರಾತ್ರಿ 12 ಗಂಟೆಗೆ ಸಿಡಿಸಲಾಗುತ್ತಿದೆ. ಕೋವಿಡ್ ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಪ್ರದರ್ಶನಕ್ಕೆ ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ. ಅರಮನೆ ಪ್ರವೇಶದ್ವಾರಗಳಾದ ಬಲರಾಮ ಗೇಟ್ ಮತ್ತು ವರಾಹ ಗೇಟ್ಗಳಲ್ಲಿ ಅರಮನೆ ಸಿಬ್ಬಂದಿ ಎರಡು ಡೋಸ್ ಲಸಿಕೆ ಪಡೆದಿರುವ ಸರ್ಟಿಫಿಕೇಟ್ ಪರಿಶೀಲಿಸಿ ನಂತರ ಒಳಬಿಡುತ್ತಾರೆ. ಸಾರ್ವಜನಿಕರು ತಮ್ಮ ಬಳಿ ಲಸಿಕೆ ಪಡೆದಿರುವ ಸರ್ಟಿಫಿಕೇಟ್ ಇಟ್ಟುಕೊಂಡು ಪ್ರದರ್ಶನ ನೋಡಲು ಬರುವುದು ಅನಿವಾರ್ಯವಾಗಿದೆ.
ಈ ಬಾರಿಯ ಪುಷ್ಪ ಪ್ರದರ್ಶನದಲ್ಲೂ ಗೊಂಬೆ ಪ್ರದರ್ಶನ ಇರಲಿದೆ.. ಅಯೋಧ್ಯೆ ಶ್ರೀರಾಮ ದೇವಸ್ಥಾನ ಮಾದರಿ ಈ ಬಾರಿಯ ಪ್ರಮುಖ ಆಕರ್ಷಣೆಯಾಗಿದೆ. ಅರಮನೆ ಮುಂಭಾಗದಲ್ಲಿ ರಾಮಮಂದಿರ ಬಣ್ಣ ಬಣ್ಣದ ಹೂಗಳಿಂದ ಕಂಗೊಳಿಸುತ್ತಿದೆ. ಉದ್ಯಾನವನದಲ್ಲಿ ನಿರ್ಮಿಸಲಿರುವ ಹಲವು ಮಾದರಿಗಳು ವೀಕ್ಷಕರನ್ನು ಆಕರ್ಷಿಸಲಿವೆ. ಆನೆ, ಚಾಮುಂಡೇಶ್ವರಿ, ಮಹಿಷಾಸುರ, ನಂದಿ ಪ್ರತಿಮೆಗಳು, ಗಾಂಧೀಜಿ ದಂಡಿಯಾತ್ರೆ, ಮೈಸೂರು ಮಹಾರಾಜರ ಇತಿಹಾಸ ಪರಿಚಯಿಸುವ ಫೋಟೋ ಗ್ಯಾಲರಿಯೂ ಪ್ರದರ್ಶನದಲ್ಲಿದೆ.
ತಮಿಳುನಾಡಿನ ಕೂನೂರು ಬಳಿ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸಿಡಿಎಸ್ ಬಿಪಿನ್ ರಾವತ್ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ. ಫೋಟೋ ಫ್ರೆೇಮ್ ಮತ್ತು ಸೆಲ್ಫಿ ಪಾಯಿಂಟ್ ಸೆಲ್ಫಿಪ್ರಿಯರ ಗಮನ ಸೆಳೆಯಲಿದೆ. ವೀರ ವನಿತೆ ಒನಕೆ ಓಬವ್ವ, ಹೈದರಾಲಿ, ಭಾರತೀಯ ವಾಯುಸೇನೆ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್, ಒಲಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಪ್ರದರ್ಶನದ ಆಕರ್ಷಣೆಯಾಗಿದೆ. ಮಕ್ಕಳಿಗಾಗಿ ಜೆರ್ರಿ, ಡೊನಾಲ್ಡ್ ಡಕ್ ಇದ್ದು ಗಮನಸೆಳೆಯುತ್ತಿದೆ.